ಬರ್ಮಿಂಗ್ ಹ್ಯಾಮ್, ಜೂನ್ 5: ನಡೆದ ಭಾರತ, ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾವು ನೀಡಿದ ಅದ್ಭುತ ಪ್ರದರ್ಶನವನ್ನು ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು, ಕ್ಯಾನ್ಸರ್ ಪೀಡಿತರಿಗೆ ಸಮರ್ಪಿಸಿದ್ದಾರೆ. ಅಲ್ಲದೆ, ಪಂದ್ಯದ ಹಿಂದಿನ ದಿನವೇ ಲಂಡನ್ ನಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಏಳು ಮಂದಿಯ ಆತ್ಮಕ್ಕೆ ಶಾಂತಿಯನ್ನೂ ಅವರು ಕೋರಿದ್ದಾರೆ.
ಭಾನುವಾರ ಇಲ್ಲಿನ ಎಡ್ಗ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 124 ರನ್ ಗಳ ಅಂತರದಲ್ಲಿ ಸೋಲಿಸಿತು. ಈ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಯುವರಾಜ್ ಸಿಂಗ್ ಅವರು, 32 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 53 ರನ್ ಪೇರಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.[In Pics : ಪಾಕ್ ವಿರುದ್ಧ ಜಯದ ನಗೆ ಬೀರಿದ ಭಾರತ]

ತಮ್ಮ ಈ ಉತ್ತಮ ಇನಿಂಗ್ಸ್ ಅನ್ನು ಯುವರಾಜ್ ಸಿಂಗ್ ಅವರು ಕ್ಯಾನ್ಸರ್ ಪೀಡಿತರಿಗೆ ಸಮರ್ಪಿಸಿರುವುದಾಗಿ ಅವರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಯುವರಾಜ್ ಸಿಂಗ್ ಕೂಡಾ ಕ್ಯಾನ್ಸರ್ ಪೀಡಿತರಾಗಿದ್ದರು. ಇದೀಗ ಅವರು, ಕ್ಯಾನ್ಸರ್ ನಿಂದ ಗುಣಮುಖರಾಗಿದ್ದು, ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ಸಂಸ್ಥೆಯೊಂದನ್ನೂ ಸ್ಥಾಪಿಸಿದ್ದಾರೆ.