
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದು ಎರಡನೇ ಪಂದ್ಯ ಶುಕ್ರವಾರ ನಡೆಯಲಿದೆ. ಆದರೆ ಈ ಪಂದ್ಯದ ಆರಂಭಕ್ಕೂ ಮುನ್ನ ಹಿರಿಯ ಆಟಗಾರ ರಾಬಿನ್ ಉತ್ತಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಫಾರ್ಮ್ನಲ್ಲಿರುವ ಅನುಭವಿ ಆಟಗಾರನನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸದಿರುವ ಬಗ್ಗೆ ಬೇಸರವನ್ನು ಹೊರಹಾಕಿದ್ದಾರೆ.
ರಾಬಿನ್ ಉತ್ತಪ್ಪ ಹೀಗೆ ಹೇಳಿರುವುದು ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬಗ್ಗೆ. ಅದ್ಭುತ ಫಾರ್ಮ್ನಲ್ಲಿರುವ ಯುಜುವೇಂದ್ರ ಚಾಹಲ್ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ಅತ್ಯಂತ ಅರ್ಹವಾದ ಆಟಗಾರ ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅವರು ಕೇವಲ ಒಂದು ಒಂದ್ಯದಲ್ಲಿ ಮಾತ್ರವೇ ಅಕ್ಷರ್ ಪಟೇಲ್ಗೆ ಅವಕಾಶವನ್ನು ನೀಡಿ ಬೆಂಚ್ನಲ್ಲಿ ಕುಳ್ಳಿರಿಸಿದತೆ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಸೂಪರ್ 12 ಹಂತದಲ್ಲಿಯೇ ಹೊರಬಿದ್ದ ನಂತರ ಆರಂಭವಾದ ಮೊದಲ ದ್ವಿಪಕ್ಷೀಯ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ನವೆಂಬರ್ 17 ರಂದು ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿತು. ಆದರೆ ಈ ಪಂದ್ಯದ ಆಡುವ ಬಳಗದಲ್ಲಿ ಯುಜುವೇಂದ್ರ ಚಾಹಲ್ಗೆ ಅವಕಾಶ ನೀಡಿರಲಿಲ್ಲ. ಇದಕ್ಕೂ ಮೊನ್ನ ನಡೆದ ಟಿ20 ವಿಶ್ವಕಪ್ನ ತಂಡಕ್ಕೇ ಚಾಹಲ್ ಆಯ್ಕೆಯಾಗಿರಲಿಲ್ಲ. ಇದು ಚರ್ಚೆಯ ಕೇಂದ್ರ ಬಿಂದುವಾಗಿತ್ತು. ಆದರೆ ಕಿವೀಸ್ ಸರಣಿಯಲ್ಲಿ ತಂಡದಲ್ಲಿದ್ದರೂ ಚಾಹಲ್ಗೆ ಆಡುವ ಅವಕಾಶ ದೊರೆತಿರಲಿಲ್ಲ.
ನ್ಯೂಜಿಲೆಂಡ್ ವಿರುದ್ಧಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ಸ್ಪಿನ್ನರ್ಗಳಾಗಿ ಕಣಕ್ಕಿಳಿದಿದ್ದರು. ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಕಿವೀಸ್ ಪಡೆ 164 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಆರ್ ಅಶ್ವಿನ್ ತಲಾ 2 ವಿಕೆಟ್ ಕಬಳಿಸಿದ್ದರು. ಅಕ್ಷರ್ ಪಟೇಲ್ ನಾಲ್ಕು ಓವರ್ಗಳಲ್ಲಿ 31 ರನ್ ನೀಡಿ ವಿಕೆಟ್ ಪಡೆಯಲು ವಿಫಲವಾಗಿದ್ದರು. ನ್ಯೂಜಿಲೆಂಡ್ ನೀಡಿದ ಸ್ಕೋರ್ ಬೆನ್ನಟ್ಟಿದ ಟೀಮ್ ಇಂಡಿಯಾ ಎರಡು ಎಸೆತ ಇರುವಂತೆ 5 ವಿಕೆಟ್ಗಳ ಅಂತರದಿಂದ ಗೆದ್ದು ಬೀಗಿದೆ.
ಈ ವಿಚಾರವಾಗಿ ಮಾತನಾಡುತ್ತಾ ರಾಬಿನ್ ಉತ್ತಪ್ಪ ಆಡುವ 11ರ ಬಳಗದಲ್ಲಿ ಇರಲು ಯುಜುವೇಂದ್ರ ಚಾಹಲ್ ಅರ್ಹವಾದ ಆಟಗಾರ. ಆದರೆ ಅವರಿಗಾಗಿ ಕೇವಲ ಒಂದು ಪಂದ್ಯವನ್ನು ಆಡಿಸಿ ಅಕ್ಷರ್ ಪಟೇಲ್ ಅವರನ್ನು ಹೊರಗಿಡುವುದು ನ್ಯಾಯವಲ್ಲ ಎಂದಿದ್ದಾರೆ ರಾಬಿನ್ ಉತ್ತಪ್ಪ. "ಹೌದು ಯುಜಿಗೆ ಆಡಲು ಅರ್ಹವಾದ ಆಟಗಾರ. ಆದರೆ ನನ್ನ ಪ್ರಕಾರ ಕೇವಲ ಒಮದು ಪಂದ್ಯವನ್ನು ಮಾತ್ರವೇ ಆಡಿಸಿ ಅಕ್ಷರ್ ಪಟೇಲ್ಗೆ ಬೆಂಚ್ ಕಾಯುವಂತೆ ಮಾಡುವುದು ನ್ಯಾಯ ಅಲ್ಲ. ಹೀಗಾಗಿ ಅಕ್ಷರ್ಗೆ ಮತ್ತೊಂದು ಪಂದ್ಯವನ್ನು ನೀಡಿ ನಂತರ ಯುಜಿಗೆ ಅವಕಾಶ ನೀಡುವುದು ಸೂಕ್ತ" ಎಂಬ ಅಭಿಪ್ರಾಯವನ್ನು ಉತ್ತಪ್ಪ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಮಾತನಾಡಿದ್ದು ಚಾಹಲ್ ಫಾರ್ಮ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಆಡಲು ಚಾಹಲ್ ಅತ್ಯುತ್ತಮ ಆಯ್ಕೆ ಎಂದು ವೆಟ್ಟೋರಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್, ಅವೇಶ್ ಖಾನ್ , ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್
ನ್ಯೂಜಿಲೆಂಡ್ ಸಂಪೂರ್ಣ ಸ್ಕ್ವಾಡ್: ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಟಿಮ್ ಸೌಥಿ (ನಾಯಕ), ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಾಡ್ ಆಸ್ಟಲ್, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ಇಶ್ ಸೋಧಿ, ಜೇಮ್ಸ್ ನೀಶಮ್