ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ 15 ದಿನಗಳ ಕಾಲ ನಡೆಯಲಿರುವ 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿದೆ.
ಮುಂಬರುವ 2023ರ ಏಷ್ಯನ್ ಗೇಮ್ಸ್ಗಾಗಿ ಭಾರತದ ಪುರುಷರ ಫುಟ್ಬಾಲ್ ತಂಡ ಪ್ರಕಟಿಸಲಾಗಿದ್ದು, ಭಾರತ ತಂಡದ ನಾಯಕ ಸುನಿಲ್ ಛೆಟ್ರಿ ಅವರ ಹೆಸರನ್ನು ಕೈಬಿಡಲಾಗಿದೆ.
ಏಷ್ಯಾಡ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸುನಿಲ್ ಛೆಟ್ರಿ ಉತ್ಸುಕರಾಗಿದ್ದರು, ಆದರೆ ಅವರು ಸೆಪ್ಟೆಂಬರ್ನಲ್ಲಿ ಹ್ಯಾಂಗ್ಝೌಗೆ ಪ್ರಯಾಣಿಸುವ ಭಾರತ ಫುಟ್ಬಾಲ್ ತಂಡದ ಭಾಗವಾಗಿಲ್ಲ ಎಂಬುದು ಎಲ್ಲರೂ ಉಬ್ಬೇರುವಂತೆ ಮಾಡಿದೆ.

ಭಾರತ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಅಭಿಮಾನಿಗಳ ಪ್ರತಿಭಟನೆ ನಂತರ, ಜುಲೈ 26ರಂದು ಏಷ್ಯನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಪುರುಷರ ಮತ್ತು ಮಹಿಳಾ ಫುಟ್ಬಾಲ್ ತಂಡಗಳಿಗೆ ವಿನಾಯಿತಿ ನೀಡಿತು.
ಭಾರತದ ಪುರುಷರ ಮತ್ತು ಮಹಿಳಾ ಫುಟ್ಬಾಲ್ ತಂಡಗಳು ಪಂದ್ಯಾವಳಿಗೆ ಅರ್ಹತೆ ಪಡೆಯಲು ಅಗತ್ಯವಿರುವ ಮಾನದಂಡಗಳ ಹೊರತಾದ ಶ್ರೇಯಾಂಕವನ್ನು ಹೊಂದಿವೆ. ಆದರೆ ಕೇಂದ್ರ ಸರ್ಕಾರದ ಮಧ್ಯಪ್ರವೇಶದ ನಂತರ ಭಾಗವಹಿಸಲು ಅನುಮತಿ ನೀಡಲಾಗಿದೆ.
ಆದರೆ, ಪುರುಷರ ಫುಟ್ಬಾಲ್ ಪಂದ್ಯಾವಳಿಯು 23 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮೂವರು ಆಟಗಾರರನ್ನು ಹೊಂದಿರುವ ಅಂಡರ್-23 ತಂಡಗಳನ್ನು ಒಳಗೊಂಡಿರುತ್ತದೆ. ಇದು ಏಷ್ಯಾಡ್ನಲ್ಲಿ ಮಹಿಳಾ ತಂಡದ ಆಟಗಾರ್ತಿಯರ ವಯಸ್ಸಿನ ಮೇಲೆ ನಿರ್ಬಂಧವನ್ನು ಹೊಂದಿಲ್ಲ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಈ ಹಿಂದೆ ನಾಯಕ ಸುನಿಲ್ ಛೆಟ್ರಿ, ಮೊದಲ ಆಯ್ಕೆಯ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮತ್ತು ಸೆಂಟ್ರಲ್ ಡಿಫೆಂಡರ್ ಸಂದೇಶ್ ಜಿಂಗನ್ ಅವರು ಏಷ್ಯನ್ ಗೇಮ್ಸ್ಗಾಗಿ ಭಾರತದ ಅಂಡರ್-23 ತಂಡದ ಭಾಗವಾಗಲಿದ್ದಾರೆ ಎಂದು ಬಹಿರಂಗಪಡಿಸಿತ್ತು.
ಇದೀಗ ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಪ್ರಸ್ತುತ ಭಾರತೀಯ ಫುಟ್ಬಾಲ್ ತಂಡದಿಂದ ಮೂವರ ಹೆಸರು ಕಾಣೆಯಾಗಿರುವ ಸುನಿಲ್ ಛೆಟ್ರಿ, ಸಂದೇಶ್ ಜಿಂಗಾನ್ ಮತ್ತು ಗುರುಪ್ರೀತ್ ಸಿಂಗ್ ಸಂಧು ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಂಘಟಕರಿಂದ ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ.
"ನಾನು ಈ ಲೋಪವನ್ನು ಅರಿತುಕೊಂಡಿದ್ದೇನೆ, ಎಐಎಫ್ಎಫ್ ಮುಖ್ಯಸ್ಥನಾಗಿ ಮೂವರು ಆಟಗಾರರನ್ನು ಆಯ್ಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ನಾನು ವೈಯಕ್ತಿಕವಾಗಿ ಈ ವಿಷಯವನ್ನು ತೆಗೆದುಕೊಂಡಿದ್ದೇನೆ".
"ಈ ಮೂವರ ಹೆಸರನ್ನು ಸಂಘಟಕರಿಗೆ ಕಳುಹಿಸಲಾಗಿದೆ. ಈ ಬಗ್ಗೆ ಕ್ರೀಡಾ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ ಸಂಬಂಧಪಟ್ಟವರಿಗೆ ಗೊತ್ತಾಗಬೇಕಿತ್ತು. ಫುಟ್ಬಾಲ್ ಫೆಡರೇಶನ್ ಅಧ್ಯಕ್ಷನಾಗಿ ನಾನು ಮಧ್ಯಪ್ರವೇಶಿಸಬೇಕಾಗಿತ್ತು," ಎಂದು ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ತಿಳಿಸಿದರು.
ಅನ್ವರ್ ಅಲಿ, ಗುರ್ಮೀತ್, ಲಾಲೆಂಗ್ಮಾವಿಯಾ, ನರೇಂದರ್, ರಹೀಮ್ ಅಲಿ, ಲಾಲ್ನಂಟ್ಲುವಾಂಗಾ ಬವಿತ್ಲುಂಗ್, ರೋಹಿತ್ ದಾನು, ಪ್ರಭುಸುಖಾನ್ ಸಿಂಗ್ ಗಿಲ್, ಅನಿಕೇತ್ ಅನಿಲ್ ಜಾಧವ್, ರಾಹುಲ್ ಕನ್ನೋಲಿ ಪ್ರವೀಣ್, ಅಮರ್ಜಿತ್ ಸಿಂಗ್ ಕಿಯಾಮ್, ಆಕಾಶ್ ಮಿಶ್ರಾ, ಧೀರಜ್ ಸಿಂಗ್ ಮೊಯಿರಾಂಗ್ಥೆಮ್, ತೊಯ್ಬಾ ಸಿಂಗ್ ಮೊಯಿರಾಂಗ್ಥೆಮ್, ಮಹೇಶ್ ಸಿಂಗ್ ನೌರೆಮ್, ರೋಶನ್ ಸಿಂಗ್ ನವೋರೆಮ್, ಶಿವ ಶಕ್ತಿ ನಾರಾಯಣನ್, ಆಶಿಶ್ ರೈ, ವಿಕ್ರಮ್ ಪ್ರತಾಪ್ ಸಿಂಗ್, ದೀಪಕ್ ತಂಗ್ರಿ, ಜೀಕ್ಸನ್ ಸಿಂಗ್ ತೌನೋಜಮ್, ಸುರೇಶ್ ಸಿಂಗ್ ವಾಂಗ್ಜಮ್.