ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಫೆಬ್ರವರಿ 14 ರಿಂದ ಆರಂಭವಾಗಲು ಅನುಮತಿ ನೀಡಲಾಗಿದೆ. ಆದರೆ ಆಟಗಾರರು ಹಾಗೂ ಅವರ ಮುಂದಿರುವ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಈ ಲೀಗ್ ಮುಂದೂಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಎಐಎಫ್ಎಫ್ ಮುಖ್ಯಸ್ಥ ಕಲ್ಯಾಣ್ ಚೌಬೆ ದಿನಾಂಕವನ್ನು ಘೋಷಿಸಿದರು.
ಈ ಲೀಗ್ನಲ್ಲಿ ಒಟ್ಟು 14 ಕ್ಲಬ್ಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಲೀಗ್ ದೇಶಾದ್ಯಂತ ಒಂದೇ ಲೆಗ್ನಲ್ಲಿ ಆಡುವ ಸಾಧ್ಯತೆ ಇದೆ. ಆದರೆ ಲೀಗ್ ನಡೆಸಲು ಎದುರಾಗಿರುವ ಹಣಕಾಸಿನ ಸಮಸ್ಯೆಗೆ ಪರಿಹಾರ ಏನು ಎಂಬುದೇ ದೊಡ್ಡ ಚಿಂತೆಯಾಗಿದೆ. ಎಐಎಫ್ಎಫ್ ಕ್ಲಬ್ಗಳಿಗೆ ನಿಮ್ಮ ಜೇಬಿನಿಂದ ಹಣವನ್ನು ಹೂಡುವಂತೆ ಕೇಳಿಕೊಂಡಿದೆ. ಇನ್ನು ಹಲವು ಕ್ಲಬ್ಗಳು ಈ ಬಾರಿಯ ಲೀಗ್ನ್ನು ಸಂಪೂರ್ಣ ರದ್ದುಗೊಳಿಸಲು ಸಿದ್ಧರಾಗಿದ್ದವು. ಆದರೆ ಈಗ ಎಐಎಫ್ಎಫ್ ಆದೇಶ ಪಾಲಿಸಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಪ್ರಸಾರದ ಒಪ್ಪಂದ ಹಾಗೂ ಕ್ಲಬ್ಗಳಿಗೆ ಹೂಡಿಕೆದಾರರು ಇಲ್ಲದೆ ಈ ಲೀಗ್ ಆರಂಭಿಸುವುದು ದೊಡ್ಡ ಸವಾಲಾಗಿದೆ.

ಕ್ಲಬ್ಗಳು ಆಟಗಾರರು ತಮ್ಮ ಸಂಭಾವನೆಯನ್ನು ಕಡಿತಗೊಳಿಸುವಂತೆ ಕೇಳಿಕೊಂಡಿವೆ. ಈ ಬಗ್ಗೆ ಕ್ಲಬ್ಗಳು ಆಟಗಾರರೊಂದಿಗೆ ಮಾತುಕತೆಗೆ ಮುಂದಾಗಿವೆ. ಎಫ್ಸಿ ಗೋವಾ ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಫುಟ್ಬಾಲ್ ಕ್ಲಬ್ ಮಾಲೀಕ ಪಾರ್ಥ್ ಜಿಂದಾಲ್ ತಮ್ಮ ಆಟಗಾರರು ವೇತನವನ್ನು ಕಡಿಮೆಗೊಳಿಸುವಂತೆ ಸಾಮಾಜಿಕ ತಾಣದಲ್ಲಿ ಕೇಳಿಕೊಂಡಿದ್ದಾರೆ. ಐಎಸ್ಎಲ್ ಆರಂಭಿಸಲು ಕ್ಲಬ್ಗಳು ತ್ಯಾಗವನ್ನು ಮಾಡುತ್ತಿವೆ. ಈ ನಿಟ್ಟಿನಲ್ಲಿ ಆಟಗಾರರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇನ್ನು ಕ್ಲಬ್ ಜೊತೆ ಆಟಗಾರರು ಸಹ ಕೈ ಜೋಡಿಸಿ ಈ ಬಿಕ್ಕಟ್ಟಿನ ಸಮಯದಲ್ಲಿ ನಮಗೆ ನೆರವಾಗುತ್ತಾರೆ ಎಂದು ಪಾರ್ಥ್ ಜಿಂದಾಲ್ ಹೇಳಿದ್ದಾರೆ. ಕ್ಲಬ್ ಎದುರಿಸುತ್ತಿರುವ ಹಣಕಾಸಿನ ಮುಗ್ಗಟ್ಟನ್ನು ಸರಿದೂಗಿಸಲು ಈ ಕ್ರಮಕ್ಕೆ ಮುಂದಾಗಿದೆ.
ಆಟಗಾರರ ಸಂಬಳವನ್ನು 20-25 ರಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ. ಇದಕ್ಕೆ ಆಟಗಾರರು ಒಪ್ಪುವುದು ಕಷ್ಟ ಎನಿಸಿದೆ. ಆಟಗಾರರ ಸಂಬಳವನ್ನು ಹೊಂದಿಸುವುದೇ ಕ್ಲಬ್ಗಳಿಗೆ ದೊಡ್ಡ ಚಿಂತೆಯಾಗಿದೆ. ಹಲವು ಕ್ಲಬ್ಗಳು ಹಣಕಾಸಿನ ತೊಂದರೆಯಲ್ಲಿ ಸಿಲುಕಿವೆ. ಇನ್ನು ಹಲವು ಕ್ಲಬ್ಗಳು ಈ ಲೀಗ್ನಲ್ಲಿ ಭಾಗವಹಿಸಲು ಉತ್ಸುಕವಾಗಿವೆ. ಒಡಿಶಾ ಎಫ್ಸಿ ತನ್ನ ಆಟಗಾರರಿಗೆ ಇನ್ನೂ ಸಂಬಳ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.