
ಭಾರತ ಫುಟ್ಬಾಲ್ ತಂಡದ ಗೋಲ್ಕೀಪರ್ ಅಮ್ರಿಂದರ್ ಸಿಂಗ್ ಮಾಧ್ಯಮ ಪ್ರತಿನಿಧಿಗಳಿಗೆ ಮನವಿಯೊಂದನ್ನು ಮಾಡಿರುವುದು ಗಮನಸೆಳೆದಿದೆ. ಪಂಜಾಬ್ ಮಾಜಿ ಮುಖ್ಯಮಂತ್ರಿಗಳ ಬದಲಿಗೆ ನನ್ನನ್ನು ಟ್ಯಾಗ್ ಮಾಡುವುದನ್ನು ನಿಲ್ಲಿಸಿ ಎಂದು ಅವರು ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ. ಪಂಜಾಬ್ ಮಾಜಿ ಮುಖ್ಯಮಂತ್ರಿ ಹಾಗೂ ಈ ಯುವ ಫುಟ್ಬಾಲ್ ಗೋಲ್ಕೀಪರ್ ಹೆಸರು ಒಂದೇ ಆಗಿರುವುದು ಇದಕ್ಕೆ ಕಾರಣ.
ಪಂಜಾಬ್ನಲ್ಲಿ ರಾಜಕೀಯ ಬೆಳವಣಿಗೆ ಸಾಕಷ್ಟು ನಡೆಯುತ್ತಿರುವ ಈ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಇದು ದೇಶಾದ್ಯಂತ ಸಾಕಷ್ಟು ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಪ್ಟನ್ ಅಮ್ರಿಂದರ್ ಸಿಂಗ್ ಬದಲಾಗಿ ಫುಟ್ಬಾಲ್ ಆಟಗಾರ ಅಮರಿಂದರ್ ಸಿಂಗ್ಗೆ ಪತ್ರಕರ್ತರು ಟ್ವೀಟ್ಗಳನ್ನು ಟ್ಯಾಗ್ ಮಾಡುತ್ತಿದ್ದಾರೆ. ಇದು ಮಿತಿ ಮೀರಿರುವ ಕಾರಣದಿಂದಾಗಿ ಸ್ವತಃ ಗೋಲ್ಕೀಪರ್ ಅಮ್ರಿಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
"ಮಾನ್ಯ ಸುದ್ದಿ ಮಾಧ್ಯಮಗಳೇ ಹಾಗೂ ಪತ್ರಕರ್ತರೇ, ನಾನು ಅಮ್ರಿಂದರ್ ಸಿಂಗ್, ಭಾರತೀಯ ಫುಟ್ಬಾಲ್ ತಂಡದ ಗೋಲ್ಕೀಪರ್. ನಾನು ಪಂಜಾಬ್ನ ಮಾಜಿ ಮುಖ್ಯಮಂತ್ರಿಯಲ್ಲ. ನನಗೆ ಟ್ಯಾಗ್ ಮಾಡುವುದನ್ನು ದಯವಿಟ್ಟು ನಿಲ್ಲಿಸಿ" ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಗೊಂದಲಕ್ಕೊಳಗಾಗಿ ತನಗೆ ಟ್ವೀಟ್ ಮಾಡುತ್ತಿರುವ ಪತ್ರಕರ್ತರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಇನ್ನು ಟ್ವಿಟ್ಟರ್ನಲ್ಲಿ ಯುವ ಫುಟ್ಬಾಲ್ ಆಟಗಾರನ ಮನವಿಯನ್ನು ಸ್ವತಃ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗಮನಿಸಿದ್ದು ಅವರು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. "ನನ್ನ ಯುವ ಸ್ನೇಹಿತನೇ, ನಿಮ್ಮ ಬಗ್ಗೆ ನನಗೆ ಸಹಾನುಭೂತಿಯಿದೆ. ನಿಮ್ಮ ಮುಂದಿನ ಆಟಕ್ಕೆ ಶುಭಹಾರೈಕೆಗಳು" ಎಂದು ಟ್ವೀಟ್ ಮಾಡಿದ್ದಾರೆ. ಅಮ್ರಿಂದರ್ ಸಿಂಗ್ ಮಾಡಿರುವ ಈ ಟ್ವೀಟ್ ಈಗ ಸಾಕಷ್ಟು ವೈರಲ್ ಆಗಿದ್ದು ಸಾವಿರಾರು ಪ್ರತಿಕ್ರಿಯೆಗಳು ಬರುತ್ತಿದೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಗೋಲ್ಕೀಪರ್ ಅಮ್ರಿಂದರ್ ಸಿಂಗ್ ಇಬ್ಬರ ಟ್ವಿಟ್ಟರ್ ಖಾತೆಗಳು ಕೂಡ ಅಧಿಕೃತವಾಗಿ ಟ್ವಿಟ್ಟರ್ನಿಂದ ಮಾನ್ಯತೆ ಪಡೆದುಕೊಂಡಿದ್ದು ಬ್ಲ್ಯೂ ಟಿಕ್ ಹೊಂದಿದೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಬೇಕಿರುವ ಟ್ವೀಟ್ಗಳನ್ನು ಪತ್ರಕರ್ತರು ಗೋಲ್ಕೀಪರ್ ಅಮ್ರಿಂದರ್ ಸಿಂಗ್ಗೆ ಟ್ಯಾಗ್ ಮಾಡುತ್ತಿದ್ದಾರೆ. ಆದರೆ ರಾಜಕೀಯದ ಹಿನ್ನಲೆಯಿಲ್ಲದ ಯುವ ಆಟಗಾರನಿಗೆ ಈ ಬೆಳವಣಿಗೆ ಕಿರಿಕಿರಿಯುಂಟು ಮಾಡಿತ್ತು. ಹೀಗಾಗಿ ಬಹಿರಂಗವಾಗಿ ಮನವಿ ಮಾಡಿಕೊಂಡಿದ್ದಾರೆ
ಎಟಿಕೆ ಮೋಹನ್ ಬಾಗನ್ ಪರ ಆಡುತ್ತಿರುವ ಅಮ್ರಿಂದರ್ ಸಿಂಗ್: ಪಂಜಾಬ್ನ ಯುವ ಆಟಗಾರ ಅಮ್ರಿಂದರ್ ಸಿಂಗ್ ಎಟಿಕೆ ಮೋಹನ್ ಭಾಗನ್ ಫುಟ್ಬಾಲ್ ತಂಡದ ಸದಸ್ಯನಾಗಿದ್ದಾರೆ. ಈ ಮೂಲಕ ಇಂಡಿಯನ್ ಸೂಪರ್ ಲೀಗ್ ಸೇರಿದಂತೆ ಅನೇಕ ಫುಟ್ಬಾಲ್ ಟೂರ್ನಿಗಳಲ್ಲಿ ಖ್ಯಾತರಾಗಿದ್ದಾರೆ.
ಕೋವಿಡ್ಗೆ ಒಳಗಾಗಿದ್ದಾರೆ ಅಮ್ರಿಂದರ್ ಸಿಂಗ್: ಈ ಯುವ ಆಟಗಾರ ಅಮ್ರಿಂದರ್ ಸಿಂಗ್ ಕಳೆದ ಬುಧವಾರ ಅವರು ಕೊರೊನಾವೈರಸ್ಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅವರು ಎಸ್ಎಎಫ್ಎಫ್ ಚಾಂಪಿಯನ್ಶಿಪ್ನಲ್ಲಿ ಆಡುವ ಭಾರತ ತಂಡದ ಸ್ಕ್ವಾಡ್ನಿಂದ ಹೊರಗುಳಿದಿದ್ದಾರೆ. ಈ ಟೂರ್ನಿ ಅಕ್ಟೋಬರ್ 1ರಿಂದ ಆರಂಭವಾಗಲಿದೆ. ಹೀಗಾಗಿ ಭಾರತ ಫುಟ್ಬಾಲ್ ತಂಡಕ್ಕೆ ಅಮ್ರಿಂದರ್ ಸಿಂಗ್ ಬದಲಿಗೆ ಧೀರಜ್ ಸಿಂಗ್ ಮೋಯ್ರಂಗ್ದೆಮ್ 23 ಸದಸ್ಯರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.