
ಭಾರತೀಯ ಫುಟ್ಬಾಲ್ ಲೀಗ್ ಟೂರ್ನಮೆಂಟ್ ಇಂಡಿಯನ್ ಸೂಪರ್ ಲೀಗ್ಗೆ ಸಮಯವನ್ನು ನಿಗದಿಗೊಳಿಸಲಾಗಿದೆ. ನವೆಂಬರ್ನಿಂದ ಮಾರ್ಚ್ ತಿಂಗಳವರೆಗೆ ಏಳನೇ ಆವೃತ್ತಿಯ ಐಎಸ್ಎಲ್ ಟೂರ್ನಿ ನಡೆಸಲು ಆಯೋಜಕರು ತೀರ್ಮಾನವನ್ನು ಕೈಗೊಂಡಿದ್ದಾರೆ.
ಕೊರೊನಾ ವೈರಸ್ನ ಕಾರಣದಿಂದಾಗಿ ಈ ಬಾರಿಯ ಟೂರ್ನಿ ಸಂಪೂರ್ಣವಾಗಿ ಮುಚ್ಚಿದ ಕ್ರೀಡಾಂಗಣದಲ್ಲೇ ನಡೆಸಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಜತೆಗೆ ಕರೊನಾ ವೈರಸ್ ಭೀತಿ ಕಡಿಮೆ ಪ್ರಮಾಣದಲ್ಲಿರುವ 2 ರಾಜ್ಯಗಳಲಷ್ಟೇ ಲೀಗ್ ಆಯೋಜಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಲೀಗ್ ನಡೆಯುವ ಸಾಧ್ಯತೆಗಳಿವೆ.
ಸದ್ಯ ಕೇರಳ, ಗೋವಾ, ಪಶ್ಚಿಮ ಬಂಗಾಳ ಹಾಗೂ ನಾರ್ಥ್ಈಸ್ಟ್ ಭಾಗದಲ್ಲಿ ಟೂರ್ನಿ ಆಯೋಜನೆ ಬಗ್ಗೆ ಚರ್ಚೆಯಾಗಿದ್ದು ಗೋವಾ ಹಾಗೂ ಕೇರಳದಲ್ಲಿ ಟೂರ್ನಿ ನಡೆಯುವ ಸಾಧ್ಯತೆಗಳಿವೆ ಎಂದು ಐಎಸ್ಎಲ್ ಮೂಲಗಳು ತಿಳಿಸಿವೆ. ಒಂದು ಅಥವಾ ಎರಡು ರಾಜ್ಯಗಳಲ್ಲಿ ಹೆಚ್ಚಿನ ಕ್ರೀಡಾಂಗಣಗಳನ್ನು ಬಳಸಿಕೊಂಡು ಟೂರ್ನಿ ಆಯೋಜನೆಗೆ ಚಿಂತಿಸಲಾಗುತ್ತಿದೆ.
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ, ಗೋವಾದ ಪರಿಸ್ಥಿತಿ ಉತ್ತಮವಾಗಿದೆ ಎನ್ನುವುದು ಆಯೋಜಕರ ವಾದ. ಟೂರ್ನಿ ಆಯೋಜಿಸುವುದಕ್ಕೂ ಮುನ್ನ ಕೇಂದ್ರ ಹಾಗೂ ಸ್ಥಳೀಯ ಸರ್ಕಾರದ ಜತೆ ಚರ್ಚಿಸಿದ ಬಳಿಕವೇ ಟೂರ್ನಿ ಆಯೋಜಿಸುವ ಕುರಿತು ರೂಪು ರೇಷೆ ಸಿದ್ಧಪಡಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಈಶಾನ್ಯ ಭಾಗದಲ್ಲಿ ಐಜ್ವಾಲ್, ಇಂಫಾಲ್, ಶಿಲ್ಲಾಂಗ್, ಗುವಾಹಟಿ ಹಾಗೂ ಗಾಂಗ್ಟಕ್, ಇಲ್ಲವೇ ಕೋಲ್ಕತ ಸ್ಥಳದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕಳೆದ ಮಾರ್ಚ್ 14 ರಂದು 6ನೇ ಆವೃತ್ತಿಯ ಐಎಸ್ಎಲ್ ಫೈನಲ್ ಪಂದ್ಯ ಗೋವಾದಲ್ಲಿ ಖಾಲಿ ಸ್ಟೇಡಿಯಂನಲ್ಲಿ ನಡೆಯಿತು. ಎಟಿಕೆ ತಂಡ, ಚೆನ್ನೈ ಎಫ್ ಸಿ ತಂಡವನ್ನು ಮಣಿಸಿ 3ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.