
ಚೆನ್ನೈ, ನವೆಂಬರ್ 25: ಸೋಮವಾರ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈಯಿನ್ ಎಫ್ಸಿ ಹಾಗೂ ಹೈದರಾಬಾದ್ ತಂಡಗಳ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಚೆನ್ನೈಯಿನ್ ತಂಡ ಮೊದಲ ಗೋಲು ಗಳಿಸುವ ಗುರಿ ಹೊಂದಿದೆ.
ಈ ಋತುವಿನಲ್ಲಿ ಇದುವರೆಗೂ ಆಡಿರುವ 260 ನಿಮಿಷಗಳ ಆಟದಲ್ಲಿ ಜಾನ್ ಗ್ರೆಗೊರಿ ಪಡೆ ಇದುವರೆಗೂ ಗೋಲು ಗಳಿಸಲಿಲ್ಲ. ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಡ್ರಾ ಕಂಡಿರುವ ಚೆನ್ನೈಯಿನ್ ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೈದರಾಬಾದ್ ನಾಲ್ಕು ಪಂದ್ಯಗಳಲ್ಲಿ ಮೂರು ಅಂಕ ಗಳಿಸಿ ಚೆನ್ನೈ ಗಿಂತ ಒಂದು ಸ್ಥಾನ ಮೇಲೆ ಇದೆ.
ಗ್ರೆಗೊರಿ ಪಡೆ ಸಮಾಧಾನ ಪಡುವ ಸಂಗತಿಯೆಂದರೆ ಎದುರಾಳಿ ತಂಡದ ಡಿಫೆನ್ಸ್ ವಿಭಾಗ ದುರ್ಬಲವಾಗಿದ್ದು, ಇದುವರೆಗೂ ಹತ್ತು ಗೋಲುಗಳನ್ನು ನೀಡಿದೆ. ವಿರಾಮಕ್ಕೆ ಮುನ್ನ ಬೆಂಗಳೂರು ಎಫ್ ಸಿ ವಿರುದ್ಧ ಕಂಡಿರುವ 2-೦ ಗೋಲುಗಳ ಸೋಲನ್ನು ಮರೆಯಬೇಕಾಗಿದೆ.
ಐಎಸ್ಎಲ್: ಚೆನ್ನೈಯಿನ್ vs ಹೈದರಬಾದ್, Live ಸ್ಕೋರ್ಕಾರ್ಡ್
''ಮನೆಯಂಗಣದಲ್ಲಿ ನಡೆದ ಪಂದ್ಯಗಳಲ್ಲಿ ನಾವು ಪ್ರಭುತ್ವ ಸಾಧಿಸಿದ್ದೆವು, ಮುಂಬೈ ಹಾಗೂ ಎಟಿಕೆ ವಿರುದ್ಧ ನಮ್ಮ ಹೋರಾಟ ಉತ್ತಮವಾಗಿತ್ತು. ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯಕ್ಕೆ ತೆರಳುವ ಮುನ್ನ ನಾನು ಸಾಕಷ್ಟು ಆರಾಮವಾಗಿದ್ದೆ, ಆದರೆ ನಮ್ಮ ತಂಡ ತೋರಿದ ಪ್ರದರ್ಶನ ನೋಡಿ ಆಘಾತಗೊಂಡೆ. ನಮ್ಮ ಅಭಿಮಾನಿಗಳಿಗೆ ನಾವು ಏನನ್ನೂ ನೀಡಲಿಲ್ಲ,'' ಎಂದು ಗ್ರೆಗೋರಿ ಹೇಳಿದರು.
ಆಂಡ್ರೆ ಷಮ್ಬ್ರಿ ಮತ್ತು ನೆರ್ಜುಸ್ ವಾಲ್ಸ್ಕಿಸ್ ಅವರ್ರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲವಾದರು. ರಫಾಯೆಲ್ ಕ್ರೆವೆಲ್ಲರೋ ಗೋಲು ಗಳಿಸಲು ಸಾಕಷ್ಟು ಅವಕಾಶ ನೀಡಿದರೂ ತಂಡ ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಲಿಲ್ಲ.

ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಸಿಕ್ಕಿರುವ ಬಿಡುವಿನಲ್ಲಿ ತಮ್ಮ ತಂಡ ಹಿಂದಿನ ಪ್ರಮಾದಗಳಿಂದ ಪಾಠ ಕಲಿತು ಹೊಸತನದೊಂದಿಗೆ ಮತ್ತೆ ಸ್ಪರ್ಧೆಗಿಳಿಯಲಿದೆ ಎಂಬ ಆಶಯವನ್ನು ಕೋಚ್ ಗ್ರೆಗೊರಿ ಹೊಂದಿದ್ದಾರೆ. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ ಚೆನ್ನೈಯಿನ್ ತಂಡದ ಎಲ್ಲ ಆಟಗಾರರು ನಾಳೆಯ ಪಂದ್ಯಕ್ಕೆ ಲಭ್ಯರಿದ್ದಾರೆ.
ತನ್ನ ಎಲ್ಲ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಹೈದರಾಬಾದ್ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲ್ಲುವುದಕ್ಕೆ ಮೊದಲು ಮೂರು ಪಂದ್ಯಗಳಲ್ಲಿ ಸಂಕಷ್ಟ ಅನುಭವಿಸಿತ್ತು. ಜೇಮ್ಶೆಡ್ಪುರ, ಎಫ್ ಸಿ, ಎಟಿಕೆ ಹಾಗೂ ನಾರ್ತ್ ಈಸ್ಟ್ ವಿರುದ್ಧ ಸೋಲನುಭವಿಸಿತ್ತು. ಹೈದರಾಬಾದ್ ತಂಡ ಆಟಗಾರರು ಗಾಯಗೊಂಡಿರುವುದರಿಂದ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಇದರಿಂದಾಗಿ ಫಿಲ್ ಬ್ರೌನ್ ಅವರಿಗೆ ಉತ್ತಮ ತಂಡವನ್ನು ಅಂಗಣಕ್ಕಿಳಿಸಲು ಸಾಧ್ಯವಾಗಲಿಲ್ಲ. ಈಗ ಎಲ್ಲ ಆಟಗಾರರು ಲಭ್ಯರಿದ್ದು, ಆದಿಲ್ ಖಾನ್ ಮಾತ್ರ ಭಾರತ ತಂಡದಲ್ಲಿದ್ದಾರೆ. ಚೆನ್ನೈಯಿನ್ ಎಫ್ ಸಿ ತಂಡ ಇದುವರೆಗೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿಲ್ಲ, ಇದು ಬ್ರೌನ್ ಪಡೆಯ ಮನೋಬಲವನ್ನು ಹೆಚ್ಚಿಸಲು ಕಾಣವಾಯಿತು.
''ಎರಡು ವರ್ಷಗಳ ಹಿಂದೆ ಚೆನ್ನೈಯಿನ್ ತಂಡ ಚಾಂಪಿಯನ್ ಪಟ್ಟ ಗೆದ್ದಿತ್ತು, ಈಗ ಗ್ರೆಗೊರಿ ಒಂದು ರೀತಿಯಲ್ಲಿ ಬಂಧನಕ್ಕೊಳಗಾದ ಮೃಗ. ಅವರು ತಮ್ಮ ಕಠಿಣ ಶ್ರಮಕ್ಕೆ ಯಾವುದೇ ರೀತಿಯಲ್ಲಿ ಪ್ರತಿಫಲ ಪಡೆಯಲಿಲ್ಲ. ಅವರು ಪಂದ್ಯಗಳನ್ನ ಸೋಲುತ್ತಿದ್ದಾರೆ. ಇದು ತರಬೇತಿಯಲ್ಲಿ ಅತ್ಯಂತ ಕಠಿಣ ಸ್ಥಿತಿ. ಆಡಳಿತ ಮಂಡಳಿಗೆ ಉತ್ತರ ಪಡೆಯಲು ಇದು ಕಷ್ಟದ ಸ್ಥಿತಿ. ಅವರು ನನ್ನಂತೆಯೇ ಸಮಸ್ಯೆಯನ್ನು ಎದುರಿಸುತ್ತದ್ದಾರೆ. ವಿದೇಶ ಹಾಗೂ ದೇಶದ ಆಟಗಾರರನ್ನು ಆಯ್ಕೆ ಮಾಡುವುದು ಸಮಸ್ಯೆಯಾಗಿದೆ,'' ಎಂದು ಬ್ರೌನ್ ಹೇಳಿದರು.