ಆತ್ಮವಿಶ್ವಾಸ ಉನ್ನತ ಹಂತದಲ್ಲಿದೆ
"ಖಂಡಿತವಾಗಿಯೂ ನಮ್ಮ ಆತ್ಮವಿಶ್ವಾಸ ಉನ್ನತ ಹಂತದಲ್ಲಿದೆ. ಮುಂಬೈಯಂಥ ತಂಡದ ವಿರುದ್ಧ ನಾವು ತೋರಿದ ಪ್ರದರ್ಶನವನ್ನೇ ನಾಳೆಯ ಪಂದ್ಯದಲ್ಲಿ ತೋರಿದರೆ ಜಯ ನಮಗೆ ಕಟ್ಟಿಟ್ಟ ಬುತ್ತಿ" ಎಂದು ಕೋಚ್ ಮಾರ್ಕ್ವೆಜ್ ಹೇಳಿದ್ದಾರೆ, "ದೈಹಿಕ, ರಣತಂತ್ರ ಮತ್ತು ತಾಂತ್ರಿಕವಾಗಿ ತಂಡ ಉತ್ತಮ ಪ್ರದರ್ಶನ ತೋರಿದೆ," ಎಂದರು.
ಋತುವಿನ ಆರಂಭದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದವು. ಗಾಯಗೋಡ ಒಡಿಶಾ ವಿರುದ್ಧ ಹೈದರಾಬಾದ್ ಪರ ಅರಿದಾನೆ ಸ್ಯಾಂಟನಾ ಪೆನಾಲ್ಟಿ ಮೂಲಕ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಹಿಂದಿನ ಫಲಿತಾಂಶವನ್ನು ಗಮನಿಸಿದರೆ ಒಡಿಶಾ ವಿರುದ್ಧ ಹೈದರಾಬಾದ್ ಗೆಲ್ಲುವ ಫೇವರಿಟ್ ಎಂದು ಕೋಚ್ ಮಾರ್ಕ್ವೇಜ ಹೇಳಿದ್ದಾರೆ, ಆದರೆ ಈಗ ಒಡಿಶಾ ಉತ್ತಮ ರಣತಂತ್ರದೊಂದಿಗೆ ಅಂಗಣಕ್ಕಿಳಿಯುತ್ತಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಗೆದ್ದಿರುವುದು ಕೇವಲ 1-0 ಅಂತರದಲ್ಲಿ
"ಆ ಪಂದ್ಯದಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ, ಆದರೆ ಗೆದ್ದಿರುವುದು ಕೇವಲ 1-0 ಅಂತರದಲ್ಲಿ," ಎಂದು ಹೇಳಿರುವ ಮಾರ್ಕ್ವೇಜ್, "ಇತ್ತೀಚಿನ ಪಂದ್ಯಗಳಲ್ಲಿ ಒಡಿಶಾ ಉತ್ತಮವಾಗಿ ಆಡುತ್ತಿದೆ, ಟೇಬಲ್ ನಲ್ಲಿ ಆ ತಂಡ ಕೊನೆಯ ಸ್ಥಾನದಲ್ಲಿದೆ ಎಂಬುದು ನಿಜ, ಆದರೆ, ಈ ಲೀಗ್ ನ್ನು ಗಮನಿಸುತ್ತಿರುವವರಿಗೆ ಯಾವುದೇ ತಂಡ ಇನ್ನೊಂದು ತಂಡದ ವಿರುದ್ಧ ಗೆಲ್ಲಬಹುದು ಎಂಬುದನ್ನು ಬಲ್ಲರು," ಎಂದಿದ್ದಾರೆ.
ಈ ಪಂದ್ಯಕ್ಕೆ ಮುನ್ನ ಚೆನ್ನೈಯಿನ್ ವಿರುದ್ಧ ನಡೆದ ಪಂದ್ಯದಲ್ಲಿ ಸೋಲುವ ಮೂಲಕ ಒಡಿಶಾ ಮನೋಬಲವನ್ನು ಕುಂದಿಸುವ ಏಳನೇ ಸೋಲನ್ನು ದಾಖಲಿಸಿತ್ತು, ಇದು ತಂಡವೊಂದು ಕಂಡಿರುವ ಅತಿ ಹೆಚ್ಚು ಸೋಲಾಗಿದೆ. ಈಗ ತಂಡ ಗಳಿಸಿರುವುದು ಕೇವಲ ಆರು ಅಂಕಗಳು. ಮಂಗಳವಾರ ಸೋತರೆ ತಂಡದ ಪ್ಲೇ ಆಫ್ ಆಸೆ ನುಚ್ಚು ನೂರಾಗಲಿದೆ.
ಉತ್ತಮ ಪ್ರದರ್ಶನ ತೋರಲಿದೆ
ಈ ಎಲ್ಲ ಹಿನ್ನಡೆಯ ನಡುವೆಯೂ ತಂಡದ ಕೋಚ್, ಸ್ಟುವರ್ಟ್ ಬಾಕ್ಸ್ಟರ್ ತಮ್ಮ ತಂಡ ಹೈದಾರಬಾದ್ ವಿರುದ್ಧ ಉತ್ತಮ ಪ್ರದರ್ಶನ ತೋರಲಿದೆ ಎಂದು ಆತ್ಮವಿಶ್ವಾದಲ್ಲಿ ನುಡಿದಿದ್ದಾರೆ. "ನಾವು ಮೊದಲ ಪಂದ್ಯವನ್ನಾಡಿರುವ ತಂಡದ ವಿರುದ್ಧ ಉತ್ತಮವಾಗಿಯೇ ಆಡಿದ್ದೆವು. ನಾವು ದೊಡ್ಡ ತಪ್ಪನ್ನು ಮಾಡಿದ ಕಾರಣ ಪೆನಾಲ್ಟಿ ಮೂಲಕ ಸೋಲು ಅನುಭವಿಸಬೇಕಾಯಿತು. ಈಗ ನಾವು ಸುಧಾರಣೆ ಕಂಡಿದ್ದೇವೆ, ಹೈದರಾಭಾದ್ ವಿರುದ್ಧ ಉತ್ತಮ ಪ್ರದರ್ಶನ ನೀಡಲಿದ್ದೇವೆ," ಎಂದರು.