ಗುವಾಹಟಿ, ಫೆಬ್ರವರಿ 26: ಸೆಮಿಫೈನಲ್ ತಲುಪುವಲ್ಲಿ ವಿಫಲವಾಗಿರುವ ನಾರ್ಥ್ ಈಸ್ ಯುನೈಟೆಡ್ ಹಾಗೂ ಈಗಾಗಲೇ ಸೆಮಿಫೈನಲ್ ತಲುಪಿರುವ ಚೆನ್ನೈಯಿನ್ ಎಫ್ ಸಿ ತಂಡಗಳ ನಡುವೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದೆ.
ಮುಂಬೈ ಸಿಟಿ ಎಫ್ ಸಿ ತಂಡವನ್ನು ಮನೆಯಂಗಣದಲ್ಲಿ ಸೋಲಿಸುವ ಮೂಲಕ ಚೆನ್ನೈಯಿನ್ ಎಫ್ ಸಿ ಸೆಫೈನಲ್ ಗೆ ಲಗ್ಗೆ ಇಟ್ಟಿತ್ತು. ನಾರ್ಥ್ ಈಸ್ಟ್ ಯುನೈಟೆಡ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, ಮನೆಯಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಜಯ ಗಳಿಸಿ ಗೌರವ ಕಾಯ್ದುಕೊಳ್ಳುವ ಗುರಿ ಹೊಂದಿದೆ. ಚೆನ್ನೈಯಿನ್ ತಂಡ ಕೋಚ್ ಬದಲಾವಣೆಯ ನಂತರ ಆಡಿದ ಏಳು ಪಂದ್ಯಗಳಲ್ಲಿ ಆರರಲ್ಲಿ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿತು.
28 ಅಂಕಗಳನ್ನು ಗಳಿಸಿರುವ ಚೆನ್ನೈಯಿನ್ ಎಫ್ ಸಿ ಮೂರನೇ ಸ್ಥಾನದಲ್ಲಿರುವ ಬೆಂಗಳೂರು ತಂಡಕ್ಕಿಂತ ಎರಡು ಅಂಕ ಹಿಂದೆ ಇದೆ. ಡ್ರಾ ಆಥವಾ ಸೋಲು ಅನುಭವಿಸಿದ್ದಲ್ಲಿ, ಅಗ್ರ ಸ್ಥಾನದಲ್ಲಿರುವ ಗೋವಾ ವಿರುದ್ಧ ಪ್ಲೇ ಆಫ್ ಪಂದ್ಯವನ್ನಾಡಲಿದೆ. ಇಲ್ಲಿ ಜಯ ಗಳಿಸಿದ್ದಲ್ಲಿ ಎರಡನೇ ಸ್ಥಾನದಲ್ಲಿರುವ ಎಟಿಕೆ ವಿರುದ್ಧ ಸೆಮಿಫೈನಲ್ ಪಂದ್ಯ ಆಡಲಿದೆ.
ಲೂಸಿಯಾನ್ ಗೊಯೆನ್, ರಫಾಯೆಲ್ ಕ್ರಿವೆಲ್ಲರೋ ಹಾಗೂ ನೆರಿಜುಸ್ ವಾಸ್ಕಿಸ್ ಈಗಾಗಲೇ ಮೂರು ಹಳದಿ ಕಾರ್ಡುಗಳನ್ನು ಗಳಿಸಿದ್ದು, ನಾಳೆಯ ಪಂದ್ಯದಲ್ಲಿ ಈ ಆಟಗಾರರಲ್ಲಿ ಯಾರಾದರೂ ಹಳದಿ ಕಾರ್ಡು ಗಳಿಸಿದರೆ ಸೆಮಿಫೈನಲ್ ಪಂದ್ಯದಿಂದ ವಂಚಿತರಾಗಲಿದ್ದಾರೆ. ಈ ಕಾರಣಕ್ಕಾಇ ಓವೆನ್ ಕಾಯ್ಲ್ ಈ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
''ಮೊದಲನೆಯದಾಗಿ ನಾವು ಈ ಪಂದ್ಯವನ್ನು ಗೆಲ್ಲಲಿದ್ದೇವೆ. ನಮ್ಮ ಮೂವರು ಆಟಗಾರರು ಹಳದಿ ಕಾರ್ಡು ಪಡೆದಿದ್ದಾರೆ. ಆದ್ದಿರಿಂದ ಅವರನ್ನು ಆಡಿಸುವುದೆಂದರೆ ತೊಂದರೆಯನ್ನು ಎದುರಿಸಿದಂತೆ. ಆದ್ದರಿಂದ ಅಂಥ ಆಟಗಾರರಿಗೆ ನಾವು ವಿಶ್ರಾಂತಿ ನೀಡಲಿದ್ದೇವೆ. ಅಂತಿಮವಾಗಿ ನೀವು ಜಯ ಗಳಿಸಲು ಉತ್ತಮ ತಂಡವನ್ನು ಸೋಲಿಸಬೇಕಾಗುತ್ತದೆ. ಅದು ಎಟಿಕೆ ಆಗಿರಬಹುದು ಅಥವಾ ಗೋವಾ ಆಗಿರಬಹುದು, ಉತ್ತಮ ತರಬೇತುದಾರರಿಂದ ಕೂಡಿದ ಉತ್ತಮ ತಂಡಗಗಳವು. ಅಂಥ ಪರಿಸ್ಥಿತಿ ಎದುರಾದಾಗ ನಾವು ನೋಡಿಕೊಳ್ಳುವೆವು. ನಾಳೆಯ ಪಂದ್ಯವನ್ನು ಗೆಲ್ಲುವುದು ನಮ್ಮ ಮುಂದಿರುವ ಗುರಿ,'' ಎಂದು ಕೊಯ್ಲ್ ಹೇಳಿದ್ದಾರೆ.
ರಹೀಮ್ ಅಲಿ, ಕರಣ್ಜಿತ್ ಸಿಂಗ್, ದೀಪಕ್ ತಾಂಗ್ರಿ ಮತ್ತು ಐಮೋಲ್ ರೆಮ್ಷಾಂಗ್ ಅವರು ಅಂಗಣಕ್ಕಿಳಿಯುವ ಸಾಧ್ಯತೆ ಇದೆ.
ನಾರ್ಥ್ ಈಸ್ಟ್ ಯುನೈಟೆಡ್ ತಂಡಕ್ಕೆ ಇಲ್ಲೊಂದು ಜಯದ ಅಗತ್ಯ ಇದೆ. ಕಳೆದ ವಾರ ಹೈದರಬಾದ್ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಹೀನಾಯವಾಗಿ ಸೋತ ಬಳಿಕ ಮನೆಯಂಗಣದ ಪ್ರೇಕ್ಷಕರಿಗಾಗಿ ಕೊನೆಯ ಪಂದ್ಯದಲ್ಲಿ ಗೆಲ್ಲುವ ಗುರಿಹೊಂದಿದೆ.
''ಇದು ಕೊನೆಯ ಪಂದ್ಯ. ಪ್ರತಿಯೊಬ್ಬರೂ ತಮ್ಮಿಂದಾದ ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ. ಜಯದೊಂದಿಗೆ ಋತುವನ್ನು ಕೊನೆಗಾಣಿಸುವ ಗುರಿಹೊಂದಿದ್ದಾರೆ. ಚೆನ್ನೈಯಿನ್ ಉತ್ತಮ ತಂಡ, ಅವರು ಉತ್ತಮ ಆರಂಭ ಕಂಡಿಲ್ಲ, ಆದರೆ ಆ ನಂತರ ಉತ್ತಮವಾಗಿ ಆಡಿ ಸೆಮಿಫೈನಲ್ ತಲುಪಿದರು, ಈ ಋತುವಿನಲ್ಲಿ ಇದುವರೆಗೂ ಅವಕಾಶ ಪಡಯದ ಆಟಗಾರರಿಗೆ ಅವಕಾಶ ಕಲ್ಪಿಸಲಾಗುವುದು,'' ಎಂದು ಕೋಚ್ ಜಮೀಲ್ ಹೇಳಿದ್ದಾರೆ.