
ಗೋವಾ, ಫೆಬ್ರವರಿ 13: ಫೆರಾನ್ ಕೊರೊಮಿನಾಸ್ (20 ಮತ್ತು 80ನೇ ನಿಮಿಷ), ಹ್ಯುಗೋ ಬೌಮಾಸ್ (38ನೇ ನಿಮಿಷ), ಜಾಕಿಚಾಂದ್ ಸಿಂಗ್ (39ನೇ ನಿಮಿಷ) ಹಾಗೂ ಮುಮಮ್ಮದ್ ರಫೀಕ್ ನೀಡಿದ ಉಡುಗೊರೆ ಗೋಲು (87ನೇ ನಿಮಿಷ) ನೆರವಿನಿಂದ ಮುಂಬೈ ಸಿಟಿ ಎಫ್ ಸಿ ಯನ್ನು 5-2 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಮುಂಬೈ ಸಿಟಿ ಪರ ರೌಲಿನ್ ಬೋರ್ಗಸ್ (18ನೇ ನಿಮಿಷ) ಹಾಗೂ ಬಿಪಿನ್ ಸಿಂಗ್ (57ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಮುಂಬೈಯ ಈ ಸೋಲಿನ ಮೂಲಕ ಒಡಿಶಾ ತಂಡದ ಪ್ಲೇ ಆಫ್ ಆವಕಾಶ ಜೀವಂತವಾಗಿ ಉಳಿಯಿತು.
ಗೋವಾ ಅಬ್ಬರ
ಮುಂಬೈ ಸಿಟಿ ತಂಡ ಅತ್ಯಂತ ಆತ್ಮವಿಶ್ವಾಸದಲ್ಲೇ ಆರಂಭ ಕಂಡಿತ್ತು. ಪಂದ್ಯ ಆರಂಭಗೊಂಡ 18ನೇ ನಿಮಿಷದಲ್ಲಿ ರೌಲಿನ್ ಬೋರ್ಗಸ್ ಗಳಿಸಿದ ಗೋಲಿನಿಂದ ಮುಂಬೈ ಮೇಲುಗೈ ಸಾಧಿಸಿತು. ಆದರೆ ನಂತರದ ಕತೆಯೇ ಬೇರಾಯಿತು. ಮೂರು ಗೋಲುಗಳನ್ನು ಗಳಿಸಿದ ಗೋವಾ 3-1 ಅಂತರದಲ್ಲಿ ಪ್ರಥಮಾರ್ಧವನ್ನು ತನ್ನದಾಗಿಸಿಕೊಂಡಿತು. ಫೆರಾನ್ ಕೊರೊಮಿನಾಸ್ (20ನೇ ನಿಮಿಷ) ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು, ನಂತರ ಹ್ಯಗೋ ಬೌಮಾಸ್ (38ನೇ ನಿಮಿಷ) ತಂಡಕ್ಕೆ 2-1ರ ಮುನ್ನಡೆ ಕಲ್ಪಿಸಿದರು. ಆಕ್ರಮಣಕಾರಿ ಆಟ ಮುಂದುವರಿಸಿದ ಗೋವಾಕ್ಕೆ ಮತ್ತೊಂದು ನಿಮಿಷದಲ್ಲೇ ಮೂರನೇ ಗೋಲು. ಜಾಕಿಚಾಂದ್ ಸಿಂಗ್ 39ನೇ ನಿಮಿಷದಲ್ಲಿ ಗಳಿಸಿದ ಗೋಲು ತಂಡಕ್ಕೆ 3-1 ರ ಮುನ್ನಡೆ ತಂದುಕೊಟ್ಟಿತು.

ಕುತೂಹಲದ ಪಂದ್ಯ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಇನ್ನು ಉಳಿದಿರುವುದು ಕೇವಲ 11 ಪಂದ್ಯಗಳಲ್ಲಿ, ಇದರಿಂದಾಗಿ ಪ್ರತಿಯೊಂದು ಪಂದ್ಯವೂ ವಿವಿಧ ಕಾರಣಗಳಿಗಾಗಿ ಕುತೂಹಲದಿಂದ ಕೂಡಿರುತ್ತದೆ. 80ನೇ ಪಂದ್ಯದಲ್ಲಿ ಮನೆಯಂಗಣದಲ್ಲಿ ಗೋವಾ ಅಗ್ರ ಸ್ಥಾನ ಕಾಯ್ದುಕೊಳ್ಳುವ ತವಕದಲ್ಲಿದ್ದರೆ, ಮುಂಬೈ ಸಿಟಿ ಎಫ್ ಸಿ ಪ್ಲೇ ಆಫ್ ಗೆ ಅರ್ಹತೆ ಪಡೆಯುವ ತವಕದೊಂದಿಗೆ ಅಂಗಣಕ್ಕಿಳಿಯಿತು. ಈಗಾಗಲೇ ಪ್ಲೇ ಆಫ್ ಗೆ ಅರ್ಹತೆ ಪಡೆದಿರುವ ಗೋವಾ ಯಾವುದೇ ಆತಂಕವಿಲ್ಲದೆ ನಿರ್ಭಿಡೆಯಿಂದ ಅಂಗಣಕ್ಕಿಳಿಯಿತು. ಮುಂಬೈ ತಂಡ ಜಯ ಗಳಿಸಿದರೆ ಅದು ಒಡಿಶಾ ತಂಡವನ್ನು ನಾಕೌಟ್ ಸ್ಪರ್ಧೆಯಿಂದ ಹೊರಗುಳಿಯುವಂತೆ ಮಾಡಲಿದೆ.
ಮನೆಯಂಗಣದಲ್ಲಿ ಗೋವಾ ತಂಡವನ್ನು ಸೋಲಿಸುವುದು ಅಷ್ಟು ಸುಲಭವಲ್ಲವೆಂಬುದು ಮುಂಬೈ ತಂಡಕ್ಕೆ ಈಗಾಗಲೇ ಮನವರಿಕೆಯಾಗಿದೆ. ಸರ್ಗಿಯೊ ಲೊಬೆರಾ ಅವರಿಗೆ ಮನೆಯ ಹಾದಿ ತೋರಿಸಿದ ನಂತರವೂ ಮುಂಬೈ ಸಿಟಿ ತಂಡ ಸತತ ಐದು ಪಂದ್ಯಗಳಲ್ಲಿ ಜಯ ಗಳಿಸಿ ಕೋಚ್ ಬದಲಾವಣೆಯಿಂದ ತಂಡದ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಸಾಬೀತು ಮಾಡಿದೆ. ಜಾಕಿಚಂದ್ ಸಿಂಗ್, ಹ್ಯಗೋ ಬೌಮಾಸ್ ಮತ್ತು ಫೆರಾನ್ ಕೊರಿಮಿನಾಸ್ ಅವರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮುಂಬೈ ಸಿಟಿ ಪರ ಮೊಡೌ ಸೌಗೌ ಒಂದು ಪಂದ್ಯದ ಅಮಾನತಿನ ನಂತರ ಮತ್ತೆ ತಂಡವನ್ನು ಸೇರಿಕೊಂಡಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ. ಹಿಂದಿನ ಪಂದ್ಯದಲ್ಲಿ ಹಳದಿ ಕಾರ್ಡ್ ಪಡೆದ ಕಾರಣ ಅಮೈನ್ ಚೆರ್ಮಟಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅರ್ಮಿಂದರ್ ಸಿಂಗ್. ಸುಭಾಶೀಶ್ ಬೋಸ್ ಮತ್ತು ಮಾಟೋ ಗ್ರಿಜಿಕ್ ಆವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.