
ಮುನ್ನಡೆ ನೀಡಿದ ಸುನಿಲ್
ಅನುಭವಿ ಆಟಗಾರ, ನಾಯಕನ ಜವಾಬ್ದಾರಿ ಹೊತ್ತಿರುವ ಸುನಿಲ್ ಛೆಟ್ರಿ 55ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿಕೊಟ್ಟರು. ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಅದು ಎದುರುಗಡೆ ನಾಯಕ ಛೆಟ್ರಿ ಇರುವಾಗ ಸೋಲಿನ ಮಾತಿಗೆ ಅವಕಾಶ ಇರುವುದಿಲ್ಲ. ದ್ವಿತೀಯಾರ್ಧದಲ್ಲಿ ಬೆಂಗಳೂರು ಎಫ್ ಸಿ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. 47 ಮತ್ತು 51ನೇ ನಿಮಿಷಗಳಲ್ಲಿ ಎರಡು ಅವಕಾಶ ಸಿಕ್ಕಿತು. ಆದರೆ ಗೋಲಾಗಲಿಲ್ಲ. ಬಲಭಾಗದಿಂದ ದಿಮಾಸ್ ಡೆಲ್ಗಡೊ ಕಾರ್ನರ್ ಪಾಸ್ ನೀಡಿದರು. ಚೆಂಡಿನ ಮೇಲೆ ನಿಗಾ ಇರಿಸಿದ ಸುನಿಲ್ ಛೆಟ್ರಿ ಪೆನಾಲ್ಟಿ ವಲಯದ ಧಾವಿಸಿದರು. ಒಂಟಿಯಾಗಿ ಮುನ್ನುಗ್ಗಿದ ಸುನಿಲ್ ಹೆಡರ್ ಮೂಲಕ ತಂಡಕ್ಕೆ ಜಯಕ್ಕೆ ಅಗತ್ಯ ಇರುವ ಗೋಲು ಗಳಿಸಿದರು.

ಗೋಲಿಲ್ಲದ ಪ್ರಥಮಾರ್ಧ
ಪ್ರಥಮಾರ್ಧದಲ್ಲಿ ಗೋಲು ದಾಖಲಾಗಲಿಲ್ಲ, ಆದರೆ ಇತ್ತಂಡಗಳು ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿದವು. ಬೆಂಗಳೂರು ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿ ಗೋಲು ಗಳಿಸುವ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲವಾಯಿತು, ಕೇರಳ ಎಫ್ ಸಿ ಉತ್ತಮ ರೀತಿಯಲ್ಲೇ ಸವಾಲನ್ನು ಎದುರಿಸಿತ್ತು. ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿತ್ತು. ಡಿಫೆನ್ಸ್ ವಿಭಾಗ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರವಹಿಸಿಲ್ಲ. ಇದರೊಂದಿಗೆ ೪೫ ನಿಮಿಷಗಳ ಪಂದ್ಯ ಗೋಳಿಲ್ಲದೇ ಕೊನೆಗೊಂಡಿತು.

ವಿರಾಮದ ನಂತರ ಮತ್ತೆ ಹೋರಾಟ
ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಸಿಕ್ಕ ವಿರಾಮದ ನಂತರ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೆ ಕದನ ಆರಂಭಗೊಂಡಿದೆ. ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ಮಾಜಿ ಚಾಂಪಿಯನ್ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾದವು. ಇದೊಂದು ದಕ್ಷಿಣದ ಡರ್ಬಿ ಇದ್ದಂತೆ. ಬೆಂಗಳೂರು ತಂಡ ಇಲ್ಲಿ ಜಯ ಗಳಿಸಿದ್ದಲ್ಲಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಲಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಬೆಂಗಳೂರು ಸೋಲು ಕಂಡಿರಲಿಲ್ಲ, ಆದರೆ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಚೆನ್ನೈಯಿನ್ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿರುವ ಬೆಂಗಳೂರು ಅದೇ ಹಾದಿಯಲ್ಲಿ ಮುನ್ನಡೆಯುವ ಗುರಿ ಹೊಂದಿದೆ.

ಉತ್ತಮ ಡಿಫೆನ್ಸ್ ವಿಭಾಗ
ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಬೆಂಗಳೂರು ಎಫ್ ಸಿ ಇದುವರೆಗೂ ವೈಫಲ್ಯ ಕಂಡಿರುವುದು ಅಟ್ಯಾಕ್ ವಿಭಾಗದಲ್ಲಿ. ನಿಖರತೆಯ ಗುರಿ ಇಲ್ಲದಿರುವುದರಲ್ಲಿ. ಹಿಂದಿನ ಪಂದ್ಯದಲ್ಲಿ ಬೆಂಗಳೂರು ಮೂರು ಗೋಲು ಗಳಿಸಿ ಲಯ ಕಂಡುಕೊಂಡಿತ್ತು. ಎರಿಕ್ ಪಾರ್ಥಲು ಉತ್ತಮ ರೀತಿಯಲ್ಲಿ ಆರಂಭ ನೀಡಿದ್ದಾರೆ. ಆಶಿಕ್, ಉದಾಂತ್ ಹಾಗೂ ಛೆಟ್ರಿ ಗೋಲು ಗಳಿಕೆಗೆ ಚಾಲನೆ ನೀಡಿದ್ದಾರೆ. ಕೇರಳ ಬ್ಲಾಸ್ಟರ್ಸ್ ತಂಡ ಈ ಬಾರಿಯ ಋತುವಿನ ಆರಂಭದಿಂದಲೂ ಜಯದ ರುಚಿ ಕಂಡಿರಲಿಲ್ಲ. ಗಾಯದ ಸಮಸ್ಯೆ ಎದುರಿಸುತ್ತಿರುವ ತಂಡ ಗಳಿಸಿರುವುದು ಕೇವಲ ನಾಲ್ಕು ಅಂಕ. ಇತ್ತಂಡಗಳಿಗೂ ಇಲ್ಲಿ ಜಯದ ಹೆಜ್ಜೆ ಮುಂದುವರಿಸಬೇಕಾಗಿದೆ.


Click it and Unblock the Notifications


