ಹೈದರಾಬಾದ್, ಜನವರಿ 10: ಇಂಡಿಯನ್ ಸೂಪರ್ ಲೀಗ್ ನಲ್ಲಿ ಕೊನೆಯ ಎರಡು ಸ್ಥಾನದಲ್ಲಿ ಸಿಲುಕಿರುವ ಹೈದರಾಬಾದ್ ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಶುಕ್ರವಾರ ಇಲ್ಲಿನ ಜಿಎಂಸಿ ಬಾಲಯೋಗಿ ಅಥ್ಲೆಟಿಕ್ಸ್ ಅಂಗಣದಲ್ಲಿ ಜಯಕ್ಕಾಗಿ ಹೋರಾಟ ನಡೆಸಲಿವೆ.
11 ಪಂದ್ಯಗಳನ್ನು ಆಡಿರುವ ಹೈದರಾಬಾದ್ 5 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತಂಡಕ್ಕೆ ಈಗ ಜಯವಲ್ಲದೆ ಬೇರೇನೂ ಬೇಕಾಗಿಲ್ಲ. ಚೆನ್ನೈಯಿನ್ ತಂಡ ಹೈದರಾಬಾದ್ ಗಿಂತ ಒಂದು ಸ್ಥಾನ ಮೇಲೆ ಇದ್ದು 10 ಪಂದ್ಯಗಳಿಂದ 9 ಅಂಕ ಗಳಿಸಿದ್ದು, ಮೂರು ಅಂಕ ಗಳಿಸುವ ತವಕದಲ್ಲಿದೆ.
ಐಎಸ್ ಎಲ್ ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಹೈದರಾಬಾದ್ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಕೇವಲ ಒಂದು ಜಯವನ್ನು ತಮ್ಮ ಹೆಸರಿನಲ್ಲಿ ದಾಖಲಿಸಿಕೊಂಡಿರುವ ಹೈದರಾಬಾದ್ ನ ಡಿಫೆನ್ಸ್ ವಿಭಾಗ ಅತ್ಯಂತ ದುರ್ಬಲವಾಗಿದ್ದು, ಈಗಾಗಲೇ 26 ಗೋಲುಗಳನ್ನು ಎದುರಾಳಿ ತಂಡ ಗಳಿಸಲು ಅವಕಾಶ ಕಲ್ಪಿಸಿದೆ. ಅಲ್ಲದೆ ಇದುವರೆಗೂ ಕ್ಲೀನ್ ಶೀಟ್ ಸಾಧನೆ ಮಾಡಿಲ್ಲ. ಕೇರಳ ಬ್ನಾಸ್ಟರ್ಸ್ ವಿರುದ್ಧ ನಡೆದ ಹಿಂದಿನ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ಹೈದರಾಬಾದ್ 1-5 ಗೋಲುಗಳ ಅಂತರದಲ್ಲಿ ಸೋತಿತ್ತು. ಇದು ಹೈದರಾಬಾದ್ ಎರಡನೇ ಬಾರಿಗೆ ಪಂದ್ಯವೊಂದರಲ್ಲಿ ಐದು ಗೋಲುಗಳನ್ನು ನೀಡಿದಂತಾಗಿದೆ.
ಋತುವಿನ ಆರಂಭದಲ್ಲಿ ಚೆನ್ನೈಯಿನ್ ವಿರುದ್ಧ ನಡೆದ ಪಂದ್ಯದಲ್ಲಿ ಹೈದರಾಬಾದ್ 2-1 ಗೋಲಿನಿಂದ ಸೋತಿತ್ತು. ಆದರೆ ಮನೆಯಂಗಣದಲ್ಲಿ ನಡೆಯುವ ಪಂದ್ಯದಲ್ಲಿ ತಮ್ಮ ತಂಡ ಉತ್ತಮ ಪ್ರದರ್ಶನ ತೋರಲಿದೆ ಎಂಬ ಆಶಯವನ್ನು ಕೋಚ್ ಫಿಲ್ ಬ್ರೌನ್ ವ್ಯಕ್ತಪಡಿಸಿದ್ದಾರೆ.
''ನಮ್ಮ ತಂಡ ಮನೆಯಂಗಣದಲ್ಲಿ ಉತ್ತಮವಾಗಿ ಆಡುತ್ತದೆ, ಅದೇ ಸದ್ಯಕ್ಕೆ ಇರುವ ಆತ್ಮಸಾಕ್ಷಿ. ನಾವು ಮನೆಯಂಗಣದಲ್ಲಿ ಇದುವರೆಗೂ ಉತ್ತ,ಮ ಪ್ರದರ್ಶನ ತೋರಿದ್ದೇವೆ. ನಾವು ಉತ್ತಮವಾಗಿ ಆಡುವ ಮೂಲಕ ತಕ್ಕ ತಿರುಗೇಟು ನೀಡಲಿದ್ದೇವೆ ನಮಗೆ ಮನೆಯಂಗಣದಲ್ಲಿ ಉತ್ತಮ ಬೆಂಬಲ ಇದೆ. ಮುಂದಿನ ಮೂರು ಪಂದ್ಯ ನಾವು ಎಲ್ಲಿ ಇರಬೇಕು ಎಂಬುದನ್ನು ತೀರ್ಮಾನಿಸುತ್ತದೆ,'' ಎಂದು ಬ್ರೌನ್ ಹೇಳಿದ್ದಾರೆ.
ತಂಡದ ಪ್ರಮುಖ ಆಟಗಾರರು ಆರಂಭದಿಂದಲೂ ಗಾಯದ ಸಮಸ್ಯೆ ಎದುರಿಸುತ್ತಿರುವುದು ಹೈದರಾಬಾದ್ ತಂಡದ ವೈಫಲ್ಯಕ್ಕೆ ಮತ್ತೊಂದು ಕಾರಣ. ಈಗ ರಫಾಯಲ್ ಲೊಪೇಜ್ ಕೇರಳ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಹೊರಗುಳಿದಿದ್ದಾರೆ.
ಚೆನ್ನೈಯಿನ್ ತಂಡಕ್ಕೆ ಅಂತಿಮ ನಾಲ್ಕರ ಹಂತ ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಜಯದ ಹೆಜ್ಜೆ ಇಡಬೇಕಾಗಿದೆ.
''ಎರಡೂ ತಂಡಕ್ಕೂ ಇದು ಅತ್ಯಂತ ಪ್ರಮುಖ ಪಂದ್ಯ. ಹೈದರಾಬಾದ್ ತಂಡವನ್ನು ಗಮನಿಸಿದಾಗ ಅದೊಂದು ಅದೃಷ್ಟವಿಲ್ಲದ ತಂಡವೆಂದೇ ಹೇಳಬೇಕು. ಕೆಲವು ಪಂದ್ಯಗಳಲ್ಲಿ ಅವರು ಉತ್ತಮ ಫುಟ್ಬಾಲ್ ಆಡಿದ್ದಾರೆ. ಅವರಿಗೆ ಅದೃಷ್ಟದ ಕೊರತೆ ಇದೆ.ತಂಡದ ಆಟವನ್ನು ಗಮನಿಸಿದಾಗ ಅಂಕಪಟ್ಟಿಯಲ್ಲಿ ಈಗಿರುವಲ್ಲಿ ಇರಬೇಕಾದ ತಂಡ ಅದಲ್ಲ,'' ಎಂದು ಚೆನ್ನೈಯಿನ್ ತಂಡದ ಪ್ರಧಾನ ಕೋಚ್ ಓವೆನ್ ಕಾಯ್ಲ್ ಹೇಳಿದ್ದಾರೆ.