ಮುಂಬೈ, ಜನವರಿ 4: ಶನಿವಾರ ಮುಂಬೈ ಫುಟ್ಬಾಲ್ ಅರೆನಾದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಎಟಿಕೆ ಎಫ್ಸಿಯನ್ನು ಎದುರಿಸಲಿರುವ ಮುಂಬೈ ಸಿಟಿ ಎಫ್ ಸಿ ತಂಡ ಮನೆಯಂಗಣದಲ್ಲಿ ಎರಡನೇ ಜಯ ಗಳಿಸಲು ಸನ್ನದ್ಧವಾಗಿದೆ.
ಋತುವಿನ ಆರಂಭದಲ್ಲಿ ತೃಪ್ತಿಕರವಲ್ಲದ ಆರಂಭ ಕಂಡಿದ್ದ ಮುಂಬೈ ಸಿಟಿ ತಂಡ ಆ ನಂತರ ಚೇತರಿಸಿಕೊಂಡು ಸತತ ಆರು ಪಂದ್ಯಗಳಲ್ಲಿ ಸೋಲು ಕಾಣದೆ ಮುಂದೆ ಸಾಗಿದೆ. ಅವುಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ರೀತಿಯ ಉತ್ತಮ ಹೋರಾಟ ತಂಡವನ್ನು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕೊಂಡೊಯ್ದಿತು. ಎಟಿಕೆ ವಿರುದ್ಧ ಜಯ ಗಳಿಸಿದರೆ ಎರಡನೇ ಸ್ಥಾನದಲ್ಲಿರುವ ತಂಡವನ್ನು ಕೆಳತಳ್ಳಲಿದೆ.
''ಅವರ ವಿರುದ್ಧ ನಾವು ಇದೇ ಮೊದಲ ಬಾರಿಗೆ ಆಡುತ್ತಿಲ್ಲ. ಎದುರಾಳಿ ತಂಡವು ವಿಭಿನ್ನ ಶೈಲಿಯಲ್ಲಿ ಆಡುವಾಗ ನಾವು ಕೂಡ ವಿಭಿನ್ನವಾಗಿರುತ್ತೇವೆ. ಅವರು ಎಲ್ಲ ಪಂದ್ಯಗಳಲ್ಲಿ ಮೂವರನ್ನು ಬ್ಯಾಕ್ ಲೇನ್ ನಲ್ಲಿ ಇರಿಸಿ ಆಡುವುದಿಲ್ಲ. ಕೆಲವೊಮ್ಮೆ ಆವರು ನಾಲ್ಬರನ್ನು ಆಡಿಸುತ್ತಾರೆ. ಆದ್ದರಿಂದ ನಾವು ಎರಡೂ ರೀತಿಯ ಆಟಕ್ಕೂ ಸಜ್ಜಾಗಿರಬೇಕು, ಸಜ್ಜಾಯಗಿದ್ದೇವೆ,'' ಎಂದು ಮುಂಬೈ ಕೋಚ್ ಜಾರ್ಜ್ ಕೋಸ್ಟಾ ಹೇಳಿದ್ದಾರೆ.
ಸುಲಭವಾಗಿ ಗೋಲು ಗಳಿಸುವ ಎಟಿಕೆ ತಂಡದ ಅಟ್ಯಾಕ್ ವಿಭಾಗವನ್ನು ಮೌನಗೊಳಿಸುವ ದಾರಿಯನ್ನು ಕಂಡುಕೊಳ್ಳಬೇಕು. ಮುಂಬೈ ತಂಡದ ಡಿಫೆನ್ಸ್ ವಿಭಾಗ ಉತ್ತವಾಗಿದ್ದರೂ, ರಾಯ್ ಕೃಷ್ಣ ಹಾಗೂ ಡೇವಿಡ್ ವಿಲಿಯಮ್ಸ್ ಅವರನ್ನು ನಿಯಂತ್ರಿಸಬೇಕಾಗಿದೆ. ಆದರೆ ಅದು ಅಷ್ಟು ಸುಲಭವಲ್ಲ.
ಆದರೆ ಪೌಲೊ ಮಚಾಡೋ ಇಲ್ಲದೆ ಇವೆಲ್ಲವನ್ನು ಮಾಡಬೇಕಾಗಿದೆ. ಅವರು ಗಾಯದ ಸಮಸ್ಯೆಯ ಕಾರಣ ಈ ಋತುವಿನಿಂದಲೇ ಹೊರಗುಳಿಯಲಿದ್ದಾರೆ. ಜಾರ್ಜ್ ಕೋಸ್ಟಾ ಅವರ ಯೋಜನೆಗೆ ತಕ್ಕಂತೆ ಆಡುವ ಪೋರ್ಚುಗೀಸ್ ಆಟಗಾರನ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಇದರಿಂದಾಗಿ ರೇನಿಯರ್ ಫೆರ್ನಾಂಡೀಸ್ ಮತ್ತು ರೌಲಿನ್ ಬೋರ್ಗಸ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.
''ಮಚಾಡೋ ಒಬ್ಬ ಉತ್ತಮ ಆಟಗಾರ, ಫುಟ್ಬಾಲ್ ತಂಡವೊಂದರಲ್ಲಿ ಆವರಂಥ ಆಟಗಾರ ಇರಬೇಕು. ಅವರು ಉತ್ತಮ ರೀತಿಯಲ್ಲಿ ಆಡುತ್ತಾರೆ. ಎದುರಾಳಿ ತಂಡದ ಆಟಗಾರರೊಬ್ಬರು ಗಾಯಗೊಂಡರೆ ಅದು ನನಗೆ ಉತ್ತಮವೆಂದು ಕಾಣಿಸುವುದಿಲ್ಲ. ಇದರಿಂದ ತಂಡಗಳ ಸಮತೋಲನ ತಪ್ಪುತ್ತದೆ,'' ಎಂದು ಎಟಿಕೆ ಕೋಚ್ ಆ್ಯಂಟೊನಿಯೋ ಹಬ್ಬಾಸ್ ಹೇಳಿದ್ದಾರೆ.
ಮೊಡೌ ಸೊಗೌ ಆವರು ಗೋಲು ಗಳಿಸಲು ಆರಂಭಿಸಿದ್ದು ಮುಂಬೈ ಸಿಟಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಋತುವಿನಲ್ಲಿ ಸೌಗೌ ತಂಡದ ಪರ ಗೋಲು ಗಳಿಸಿದ 13ನೇ ಆಟಗಾರರೆನಿಸದರು. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಎಟಿಕೆ ತಂಡ ಬೆಂಗಳೂರು ವಿರುದ್ಧ ಜಯ ಗಳಿಸಿ ಆತ್ಮವಿಶ್ವಾಮದೊಂದಿಗೆ ಬೆಂಗಳೂರಿಗೆ ಆಗಮಿಸಿದೆ. ತಂಡ ಈ ಋತುವಿನಲ್ಲಿ 19 ಗೋಲುಗಳನ್ನು ಗಳಿಸಿದೆ. ಕಳೆದ ಎಂಟು ಪಂದ್ಯಗಳಲ್ಲಿ ಕ್ಲೀನ್ ಶೀಟ್ ಸಾಧನೆ ಕಾಣದ ಎಟಿಕೆ ಇಲ್ಲಿ ಜಯದೊಂದಿಗೆ ಕ್ಲೀನ್ ಶೀಟ್ ಸಾಧನೆ ಮಾಡುವ ಗುರಿ ಹೊಂದಿದೆ.
''ಮುಂಬೈ ಸಿಟಿ ತಂಡ ಅತ್ಯಂತ ಪ್ರತಿಭಾವಂಥ ತಂಡವಾಗಿದೆ. ಅವರು ಆಡುವ ರೀತಿಯನ್ನು ಗಮನಿಸಿದರೆ ಡಿಫೆನ್ಸ್ ವಿಭಾಗದಲ್ಲಿ ಸಮಸ್ಯೆಯನ್ನುಂಟು ಮಾಡುವ ಸಾಧ್ಯತೆ ಇದೆ. ಆ ತಂಡದಲ್ಲಿ ಉತ್ತಮ ಸ್ಟ್ರೈಕರ್ ಗಳಿದ್ದಾರೆ, ಉತ್ತಮ ವಿಂಗರ್ಸ್ ಇದ್ದಾರೆ. ಅಲ್ಲದೆ ಬಲಿಷ್ಠ ಡಿಫೆನ್ಸ್ ಇದೆ. ಆದರೆ ನಮಗೆ ಮೂರು ಅಂಕ ಗಳಿಸುವುದು ಪ್ರಮುಖವಾಗಿದೆ,'' ಎಂದು ಹಬ್ಬಾಸ್ ಹೇಳಿದ್ದಾರೆ.