ಕೊಚ್ಚಿ, ಜನವರಿ 5: ಭಾನುವಾರ (ಜನವರಿ 5) ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್ ಸಿ ತಂಡಗಳು ಮುಖಾಮುಖಿಯಾಗಲಿವೆ.
10 ಪಂದ್ಯಗಳನ್ನಾಡಿ 5 ಅಂಕಗಳನ್ನು ಗಳಿಸಿರುವ ಹೈದರಾಬಾದ್ ಕೊನೆಯ ಸ್ಥಾನದಲ್ಲಿದ್ದರೆ, ಕೇರಳ ಬ್ಲಾಸ್ಟರ್ಸ್ ಎಂಟು ಅಂಕಗಳನ್ನು ಗಳಿಸಿದೆ. ಕಾಕತಾಳೀಯವೆಂಬಂತೆ ಎರಡೂ ತಂಡಗಳು ಋತುವಿನ ಮೊದಲ ಜಯದ ನಿರೀಕ್ಷೆಯಲ್ಲಿವೆ. ಋತುವಿನ ಮೊದಲ ಪಂದ್ಯದಲ್ಲೇ ಹೈದರಾಬಾದ್ ಪಡೆ ಎಲ್ಕೋ ಷೆಟ್ಟಟೋರಿ ಪಡೆಯ ವಿರುದ್ಧ ತನ್ನ ಮೊದಲ ಜಯ ಗಳಿಸಿತ್ತು, ಆನಂತರ ಜಯದ ಹಾದಿ ತಪ್ಪಿ ಹೋಗಿತ್ತು. ಈ ಎರಡು ತಂಡಗಳು ಇದುವರೆಗೂ ಒಂದೇ ರೀತಿಯ ಹೆಜ್ಜೆಯಲ್ಲಿ ಸಾಗಿ ಬಂದಿವೆ.
ಇದುವರೆಗೂ ಸಮಾನವೆಂಬಂತೆ ತಲಾ ಹತ್ತು ಗೋಲುಗಳನ್ನು ಗಳಿಸಿವೆ. ಕಳೆದ ಒಂಬತ್ತು ಪಂದ್ಯಗಳಲ್ಲಿ ಕೇರಳ ತಂಡ ಜಯ ಕಂಡಿರಲಿಲ್ಲ. ಈಗ ಮನೆಯಂಗಣದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಆತಿಥೇಯ ತಂಡಕ್ಕೆ ಗೆಲ್ಲುವ ಆತ್ಮವಿಶ್ವಾಸವಿದೆ. ಆದರೆ ಕಳೆದ ಎರಡು ಋತುಗಳಲ್ಲಿ ಕೇರಳ ತಂಡ ಮನೆಯಂಗಣದಲ್ಲಿ ಗೆದ್ದಿರುವುದು ಕೇವಲ ಎರಡು ಪಂದ್ಯಗಳಲ್ಲಿ ಎಂಬುದನ್ನು ಮರೆಯುವಂತಿಲ್ಲ. ಹೈದರಾಬಾದ್ ಕಳೆದ ಏಳು ಪಂದ್ಯಗಳಲ್ಲಿ ಜಯ ಕಂಡಿಲ್ಲ, ಅದೇ ರೀತಿ ಇದುವರೆಗೂ ಕ್ಲೀನ್ ಶೀಟ್ ಸಾಧನೆಯನ್ನೂ ಮಾಡಿಲ್ಲ.
ಷೆಟ್ಟೋರಿ ಪಡೆಗೆ ಸಂತಸದ ವಿಷಯವೆಂದರೆ ಗಾಯಗೊಂಡಿರುವ ತಂಡದ ಪ್ರಮುಖ ಆಟಗಾರರು, ಮರಳಿ ಬಂದಿದ್ದಾರೆ. ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿರುವ ಮಾರಿಯೋ ಆರ್ಕ್ವೆಸ್ ಈ ಪಂದ್ಯದಿಂದ ವಂಚಿತರಾಗಲಿದ್ದಾರೆ.
''ಸಮಸ್ಯೆಂದರೆ 10 ಪಂದ್ಯಗಳಲ್ಲಿ ನಾವು ಅದೇ ಹತ್ತು ಆಟಗಾರರನ್ನು ಹೊಂದಿರದಿರುವುದು ಬೇಸರದ ಸಂಗತಿ. ಸ್ಥಿರ ಆಟ ಪ್ರದರ್ಶಿಸಲು ಇದು ಮುಖ್ಯ ಎಂಬುದು ಇದು ಜನರಿಗೆ ಯಾಕೆ ಗೊತ್ತಾಗುತ್ತಿಲ್ಲ ಎಂಬುದು ಪ್ರಮುಖ ಪ್ರಶ್ನೆ. ಮುಂಬೈ ತಂಡವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ ಆರಂಭದಲ್ಲಿ ಆ ತಂಡದ ಪ್ರಮುಖ ಆಟಗಾರರು ಗಾಯಗೊಂಡಿದ್ದರು, ಆದರೆ ಅವರು ಕೂಡಲೇ ಚೇತರಿಸಿ ಮುಂದಿನ ಪಂದ್ಯಕ್ಕೆ ಹಾಜರಾದರು. ಹೈದರಾಬಾದ್ ತಂಡವೂ ಅದೇ ರೀತಿಯ ಸಮಸ್ಯೆ ಎದುರಿಸಿತ್ತು. ಆದರೆ ಅವರು ಕಳೆದ ಎರಡು ಪಂದ್ಯಗಳಲ್ಲಿ ಚೇತರಿಸಿಕೊಂಡಿರುವುದನ್ನು ಗಮನಿಸಬಹುದು,'' ಎಂದು ಷೆಟ್ಟೋರಿ ಹೇಳಿದ್ದಾರೆ.
ಕೇರಳ ಬ್ಲಾಸ್ಟರ್ಸ್ ಪರ ಭಾರತದ ಆಟಗಾರರು ನಿರೀಕ್ಷಿತ ಪ್ರಮಾಣದಲ್ಲಿ ಹೋರಾಟ ನೀಡಲಿಲ್ಲ. 10 ಗೋಲುಗಳಲ್ಲಿ ಕೇವಲ ಒಂದು ಗೋಲನ್ನು ದೇಶೀಯ ಆಟಗಾರರು ಗಳಿಸಿದ್ದಾರೆ. ಸತ್ಯಸೇನ್ ಸಿಂಗ್, ಪ್ರಶಾಂತ್ ಮತ್ತು ಸಹಾಲ್ ಅಬ್ದುಲ್ ಸಮದ್ ಅವರು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರಲಿಲ್ಲ. ಆದರೆ ಡಚ್ ಕೋಚ್ ನಾಳೆಯ ಪಂದ್ಯದಲ್ಲಿ ಜಯ ಗಳಿಸುವ ಆತ್ಮವಿಶ್ವಾಸ ಹೊಂದಿದ್ದಾರೆ. ''ಅವರ ಶಕ್ತಿ ಮತ್ತು ದೌರ್ಬಲ್ಯ ಎಲ್ಲಿದೆ ಎಂಬುದು ಚೆನ್ನಾಗಿ ಗೊತ್ತು. ಅದರ ಉಪಯೋಗ ಹೇಗೆ ಪಡೆಯಬೇಕೆಂಬುದು ಚೆನ್ನಾಗಿ ಗೊತ್ತು,'' ಎಂದು ಷೆಟ್ಟೋರಿ ಹೇಳಿದ್ದಾರೆ.
ಹೈದರಾಬಾದ್ ತಂಡಕ್ಕೆ ಮುಂಬೈ ವಿರುದ್ಧ ಗೆಲ್ಲುವ ಅವಕಾಶವಿದ್ದಿತ್ತು, ಆದರೆ ಡಿಫೆನ್ಸ್ ವಿಭಾಗ ದುರ್ಬಲವಾದ ಕಾರಣ 2-1 ಗೋಲುಗಳ ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು. '' ಉತ್ತಮ ರೀತಿಯಲ್ಲಿ ತಮ್ಮ ಆಟದಲ್ಲಿ ಕೌಶಲ್ಯ ತೋರುವ ಪಂದ್ಯವನ್ನು ಗೆಲ್ಲುತ್ತದೆ. ಕ್ಲೀನ್ ಶೀಟ್ ಗಮನದಲ್ಲಿರಿಸಿಕೊಂಡು ನಾವು ಅಂಗಣಕ್ಕಿಳಿಯುತ್ತೇವೆ. ಎಷ್ಟು ಹೊತ್ತು ಚೆಂಡನ್ನು ನಿಯಂತ್ರಿಸಿದ್ದೀ ಎಂಬುದು ಮುಖ್ಯವಲ್ಲ, ಗೋಲು ಗಳಿಸಲು ಎಷ್ಟು ಅವಕಾಶಗಳನ್ನು ನಿರ್ಮಿಸಿದ್ದೀ ಎಂಬುದು ಮುಖ್ಯ, ಅಂತಿಮವಾಗಿ ಸ್ಕೋರ್ ಲೈನ್ ನಲ್ಲಿ ಎಷ್ಟು ಗೋಲು ಗಳಿಸಿದ್ದೀ ಎಂಬುದು ಮುಖ್ಯ,'' ಎಂದು ಫಿಲ್ ಬ್ರೌನ್ ಹೇಳಿದ್ದಾರೆ.