ಬೆಂಗಳೂರು ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಇದೇ ನಗರವನ್ನು ಪ್ರತಿನಿಧಿಸಿದ ಕ್ರೀಡಾ ಪಟುಗಳು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಲೀಗ್ಗಳು ಭಾರತದಲ್ಲಿ ಆರಂಭವಾದ ಮೇಲೆ ಬೆಂಗಳೂರು ತಂಡ ಸಹ ಭಾಗವಹಿಸುತ್ತಿದೆ. ಐಪಿಎಲ್ನಲ್ಲಿ ಆರ್ಸಿಬಿ ಹೇಗೆ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ತಂಡವೋ ಹಾಗೆ, ಫುಟ್ಬಾಲ್ ಅಭಿಮಾನಿಗಳಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್ ಫೇವರಿಟ್.. ಆದರೆ ಈ ಪ್ರತಿಷ್ಠಿತ ಕ್ಲಬ್ನ ಆ ಒಂದು ತೀರ್ಮಾನ ಈಗ ಬಹು ಚರ್ಚೆಗೆ ಕಾರಣವಾಗಿದೆ.
ಇಂಡಿಯನ್ ಸೂಪರ್ ಲೀಗ್ನ ಪ್ರತಿಷ್ಠಿತ ತಂಡವಾಗಿರುವ ಬೆಂಗಳೂರು ಎಫ್ಸಿ ಕೈಗೊಂಡಿರುವ ಆ ಒಂದು ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಸ್ಟಾರ್ ಆಟಗಾರ ಸುನಿಲ್ ಚೆಟ್ರಿ ಸೇರಿದಂತೆ ಆಟಗಾರರಿಗೆ ವೇತನ ನೀಡುವುದನ್ನು ನಿಲ್ಲಿಸಿದೆ. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಫುಟ್ಬಾಲ್ ಕ್ರೀಡಾ ಅಭಿವೃದ್ಧಿ ನಿಗಮ (ಎಫ್ಎಸ್ಡಿಎಲ್) ಹಾಗೂ ಅಖಿಲ್ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ನಡುವಿನ ಭಿನ್ನಾಭಿಪ್ರಾಯದಿಂದಾಗ ಐಎಸ್ಎಲ್ ಟೂರ್ನಿ ಸದ್ಯಕ್ಕೆ ಸ್ಥಗಿತಗೊಂಡಿದೆ. ಹೀಗಾಗಿ ಬಿಎಫ್ಸಿ ತಂಡ ಅನಿವಾರ್ಯವಾಗಿ ಈ ಕಠಿಣ ತೀರ್ಮಾನವನ್ನು ಕೈಗೊಂಡಿದೆ.

ಬೆಂಗಳೂರು ಫುಟ್ಬಾಲ್ ಕ್ಲಬ್ ಈಗ ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಸಾಧ್ಯವಾದಷ್ಟು ಬೇಗ ಎಐಎಫ್ಎಫ್ ಮತ್ತು ಎಫ್ಎಸ್ಡಿಎಲ್ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸುವಂತೆ ಒತ್ತಾಯಿಸಿದೆ. ಭಾರತದ ಫುಟ್ಬಾಲ್ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಮಹತ್ವದಾಗಿದೆ ಎಂದು ತಿಳಿಸಿದೆ. ಬಿಎಫ್ಸಿ ತನ್ನ ಹೇಳಿಕೆಯಲ್ಲಿ, ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ವೇತನವನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ದೇಶದಲ್ಲಿ ಫುಟ್ಬಾಲ್ ಕ್ಲಬ್ ನಡೆಸುವುದು ಕಷ್ಟ. ಲೀಗ್ನ ಭವಿಷ್ಯದ ಸ್ಪಷ್ಟತೆ ಇರದೇ ಇರುವ ಕಾರಣಕ್ಕಾಗಿ ಈ ದೊಡ್ಡ ಹೆಜ್ಜೆ ಕೈಗೊಂಡಿದೆ ಎಂದು ತಿಳಿಸಿದೆ.
ನಮ್ಮ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಅವರ ಕುಟುಂಬಗಳ ಭವಿಷ್ಯ ನಮಗೆ ಮುಖ್ಯವಾಗಿದೆ. ನಾವು ಆ ಕುಟುಂಬಗಳೊಂದಿಗೆ ಸಂಪರ್ಕದಲ್ಲಿವೆ. ಅಲ್ಲದೆ ನಮ್ಮ ಕ್ಲಬ್ ಸಹ ಪರಿಹಾರಕ್ಕಾಗಿ ಕಾಯುತ್ತಿದೆ. ಇದರ ಪರಿಣಾಮ ಬಿಎಫ್ಸಿ ಸ್ಕೂಲ್ ಮೇಲೆ ಬೀಳುವುದಿಲ್ಲ. ಕ್ರೀಡೆಯನ್ನು ಬೆಳೆಸಲು ಹಾಗೂ ಯುವಕರಿಗೆ ಪ್ರೋತ್ಸಾಹಿಸಲು ಬದ್ಧವಾಗಿದೆ ಎಂದು ತಿಳಿಸಿದೆ.
ಬೆಂಗಳೂರು ಫುಟ್ಬಾಲ್ ಕ್ಲಬ್ ತನ್ನ ತಂಡದಲ್ಲಿ ಹಲವು ವರ್ಷಗಳಿಂದ ಸ್ಟಾರ್ ಆಟಗಾರರನ್ನು ಸೇರಿಸಿಕೊಂಡಿದೆ. ಭಾರತದಲ್ಲಿ 2014ರಲ್ಲಿ ಐಎಸ್ಎಲ್ ಆರಂಭವಾಯಿತು. ಅಂದಿನಿಂದ ಬೆಂಗಳೂರು ತಂಡ ಈ ಲೀಗ್ನಲ್ಲಿ ಭಾಗವಹಿಸುತ್ತಿದೆ. 2018ರಲ್ಲಿ ಬಿಎಫ್ಸಿ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಅಲ್ಲದೆ ಮೂರು ಬಾರಿ ರನ್ನರ್ ಅಪ್ ಸಾಧನೆಯನ್ನು ಸಹ ಮಾಡಿದೆ. ಒಂದು ಬಾರಿ ಎಎಫ್ಸಿ ಕಪ್ ಟೂರ್ನಿಯ ಫೈನಲ್ಗೆ ಅರ್ಹತೆ ಪಡೆದ ಹಿರಿಮೆ ಹೊಂದಿದೆ.