
ಬೆಂಗಳೂರು, ಸೆಪ್ಟೆಂಬರ್ 20: ಸಚಿನ್ ತೆಂಡೂಲ್ಕರ್ ಅವರು ಕೇರಳ ಬ್ಲಾಸ್ಟರ್ಸ್ ತಂಡ ತೊರೆದಿದ್ದು ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ದಾರಿಯಾದಂತಾಗಿದೆ ಎಂದು ಕೇರಳ ಬ್ಲಾಸ್ಟರ್ಸ್ ಕೋಚ್, ಲಿವರ್ ಪೂಲ್ ಮತ್ತು ಹಮ್ ಯುನೈಡೆಟ್ ತಂಡದ ಮಾಜಿ ಗೋಲ್ ಕೀಪರ್ ಡೇವಿಡ್ ಜೇಮ್ಸ್ ಹೇಳಿದ್ದಾರೆ.
ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ನ ಸಹ ಮಾಲಕರಾಗಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕಳೆದ ವಾರ ತನ್ನ ಕೈಯಲ್ಲಿದ್ದ ಕ್ಲಬ್ ನ 20 ಶೇ. ಪಾಲನ್ನು ಮಾರಾಟ ಮಾಡಿದ್ದರು. 2014ರಂದು ಕೇರಳ ಬ್ಲಾಸ್ಟರ್ಸ್ ತಂಡದ ಶೇರುದಾರರಾಗಿದ್ದ ಸಚಿನ್, ತೆಲುಗು ಸೂಪರ್ ಸ್ಟಾರ್ ಗಳಾದ ಚಿರಂಜೀವಿ, ನಾಗಾರ್ಜುನ, ನಿರ್ಮಾಪಕ ಅಲ್ಲು ಅರ್ಜುನ್ ಮತ್ತು ಕೈಗಾರಿಕೋದ್ಯಮಿ ಎನ್ ಪ್ರಸಾದ್ ಅವರೊಂದಿಗೆ ಪಾಲು ಹಂಚಿಕೊಂಡಿದ್ದರು. ಲೂಲು ಗ್ರೂಪ್ ಇಂಟರ್ ನ್ಯಾಷನಲ್ ಈಗ ಕೇರಳ ಬ್ಲಾಸ್ಟರ್ಸ್ ಕ್ಲಬ್ ಮಾಲಕತ್ವ ವಹಿಸಿಕೊಂದಿದೆ.
ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಇಂದಿಗೂ ಅಧಿಕ ರನ್ ದಾಖಲೆ ಹೊಂದಿರುವ ಕ್ರಿಕೆಟ್ ದಿಗ್ಗಜ ಸಚಿನ್ ಅವರು ಕ್ಲಬ್ ಮಾಲಕತ್ವದಿಂದ ಹಿಂದೆ ಸರಿದಿದ್ದು ತಂಡದ ಅಧಿಕಾರಿಗಳಿಗೆ ಅಘಾತವನ್ನು ನೀಡಿತ್ತು. ಆದರೆ ಜೇಮ್ಸ್ ಅವರು ಆ ಆಘಾತದಿಂದ ಹೊರ ಬನ್ನಿ ಎಂಬಂತೆ ತಂಡಕ್ಕೆ, ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.
'ಕ್ಲಬ್ ಗೆ ಸಚಿನ್ ಅವರ ಕೊಡುಗೆ ಅಪಾರವಾದುದು. ಭಾರತದ ಕ್ರೀಡಾ ಇತಿಹಾಸದಲ್ಲೇ ಸಚಿನ್ ಉತ್ತಮ ವ್ಯಕ್ತಿತ್ವಕ್ಕೆ ಹೆಸರಾದವರು. ಅವರ ನಿರ್ಗಮನ ತಂಡಕ್ಕೆ ನಿಜಕ್ಕೂ ಪರಿಣಾಮ ಬೀರಲಿದೆ. ಆದರೆ ಅದನ್ನೇ ಹಚ್ಚಿಕೊಂಡು ಕೂತರೆ ಹೇಗೆ? ಸಚಿನ್ ನಿರ್ಗಮನ ಹೊಸ ಅಧ್ಯಾಯಕ್ಕೆ ದಾರಿಯಾಯಿತು ಅಂದುಕೊಂಡು ಎದ್ದು ನಿಲ್ಲುವತ್ತ ಯೋಚಿಸೋಣ' ಎಂದು ಜೇಮ್ಸ್ ಹೇಳಿದ್ದಾರೆ.