
ಬೆಂಗಳೂರು, ಆಗಸ್ಟ್ 11: ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದ ಭಾರತ ಹಾಕಿ ತಂಡದ ಫಾರ್ವರ್ಡ್ ಆಟಗಾರ ಮನ್ದೀಪ್ ಸಿಂಗ್ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನ್ದೀಪ್ ಅವರ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿದೆ. ಉಳಿದಂತೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿ ಎಂದು ಮಾಹಿತಿ ಲಭಿಸಿದೆ.
ಮನ್ದೀಪ್ ಸೇರಿದಂತೆ ಭಾರತ ರಾಷ್ಟ್ರೀಯ ಹಾಕಿ ತಂಡದ ಇನ್ನಿತರ ಐದು ಆಟಗಾರರಾದ ನಾಯಕ ಮನ್ಪ್ರೀತ್ ಸಿಂಗ್, ಡಿಫೆಂಡರ್ ಸುರೇಂದರ್ ಕುಮಾರ್, ಜಸ್ಕರನ್ ಸಿಂಗ್, ಡ್ರ್ಯಾಗ್ ಫಿಕ್ಕರ್ ವರುಣ್ ಕುಮಾರ್ ಮತ್ತು ಗೋಲ್ ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್ಗೆ ಕೋವಿಡ್-19 ತಗುಲಿತ್ತು.
ಆಗಸ್ಟ್ 20ರಿಂದ ಆರಂಭಗೊಳ್ಳಲಿರುವ ಹಾಕಿ ರಾಷ್ಟ್ರೀಯ ಕ್ಯಾಂಪ್ಗಾಗಿ ಈ ಆಟಗಾರರೆಲ್ಲ ಬೆಂಗಳೂರಿಗೆ ಬಂದಿದ್ದರು. ಆ ಬಳಿಕ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.
'ಆಗಸ್ಟ್ 10ರಂದು ಮನ್ದೀಪ್ ಸಿಂಗ್ ಅವರನ್ನು ಪರಿಶೀಲಿಸುವಾಗ ಅವರ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿತ್ತು. ಇದು ಅವರ ಕೊರೊನಾ ಸೋಂಕು ಸೌಮ್ಯದಿಂದ ಮಧ್ಯಮ ಹಂತಕ್ಕೆ ತಲುಪಿರುವುದನ್ನು ಸೂಚಿಸುತ್ತಿತ್ತು,' ಎಂದು ಸಾಯ್ ತನ್ನ ಹೇಳಿಕೆಯ ಮೂಲಕ ತಿಳಿಸಿದೆ.