ನವದೆಹಲಿ, ಜೂ. 12: 'ನಾವು ಒಂದೇ ವರ್ಷದಲ್ಲಿ ವಿಶ್ವದ ಬಲಿಷ್ಠ ಐದು ತಂಡಗಳನ್ನು ಸೋಲಿಸಿದೆವು. ಪಾಕಿಸ್ತಾನವನ್ನು ಮಣಿಸಿ ಏಷ್ಯಾ ಕಪ್ ಹೊತ್ತು ತಂದೆವು, ಆಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಬಗ್ಗು ಬಡಿದೆವು. ಕಳೆದ 15 ವರ್ಷಗಳಲ್ಲಿ ಆಗದ್ದನ್ನು ಒಂದು ವರ್ಷದಲ್ಲಿ ಸಾಧಿಸಿ ತೋರಿಸಿದ್ದೇವೆ. ಒಲಿಂಪಿಕ್ ಗೆ ಮೊದಲ ತಂಡವಾಗಿ ಅರ್ಹತೆ ಗಿಟ್ಟಿಸಿದ್ದೇವೆ. ಆದರೆ... ಜನರ ಮನಸ್ಸು ಗೆಲ್ಲಲು ವಿಫಲರಾದೆವು'.
ಇದು ಭಾರತ ಹಾಕಿ ತಂಡದ ಆಟಗಾರ ಗುರ್ ಭಜ್ ಸಿಂಗ್ ಹೇಳುವ ಮಾತು.. ಜಾಹೀರಾತಿನಲ್ಲಿ ಮೂಡಿಬಂದಿರುವ ಒಂದೊಂದು ಮಾತುಗಳು ನಮ್ಮ ದೇಶದ ಕ್ರೀಡೆ ಮೇಲೆ ನಾವು ಎಷ್ಟು ಅಭಿಮಾನ ಇಟ್ಟಿದ್ದೇವೆ ಎಂಬುದರ ಪ್ರತೀಕವಾಗಿ ನಿಂತಂತೆ ಕಾಣುತ್ತದೆ. ಖಾಸಗಿ ಸಂಸ್ಥೆಯೊಂದು ' ದೇಶ್ ಕೇ ಲಿಯೇ' ಎಂಬ ಹೆಸರಿನಲ್ಲಿ ಜಾಹೀರಾತನ್ನು ಬಿಡುಗಡೆ ಮಾಡಿದ್ದು ಯೂ ಟ್ಯೂಬ್ ನಲ್ಲಿ 68 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ.[ಕೊಡಗಿನಲ್ಲಿ ಹಾಕಿ ಸ್ಟಿಕ್ ಹಿಡಿಯದ ಕೈಗಳೇ ಇಲ್ಲ!]

ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು ಎಂದು ಮಕ್ಕಳನ್ನು ಕೇಳಿ ನೋಡಿ? ಅವರು ಕ್ರಿಕೆಟ್ ಅಂಥ ಥಟ್ಟನೆ ಹೇಳಿದರೂ ಆಶ್ಚರ್ಯವಿಲ್ಲ. ಕ್ರಿಕೆಟ್ ನ್ನು ಒಂದು ಧರ್ಮವಾಗಿ ಸ್ವೀಕರಿಸಿರುವ ನಾವು, ಕ್ರಿಕೆಟ್ ಆಟಗಾರರನ್ನು ದೇವರಂತೆ ಆರಾಧಿಸಿಕೊಂಡು ಬಂದಿದ್ದೇವೆ. ಕ್ರಿಕೆಟ್ ನ ಎಲ್ಲ ಆಗುಹೋಗುಗಳು, ಆಟಗಾರರ ಸುದ್ದಿಗಳನ್ನು ಬಹಳ ಆಸಕ್ತಿಯಿಂದ ಓದಿ ತಿಳಿದುಕೊಳ್ಳುತ್ತೇವೆ.[ಶರ್ಟ್ ಬಿಚ್ಚಿ ಕುಣಿದ ಪಾಕಿಸ್ತಾನದ ಜತೆ ಆಟ ಯಾಕೆ ಆಡಬೇಕು]
ಜಾಹೀರಾತು ದೇಶವಾಸಿಗಳು ನಡೆದುಕೊಳ್ಳುವ ರೀತಿಯನ್ನು ಜಗಜ್ಜಾಹೀರು ಮಾಡಿದೆ. ಭಾರತ ತಂಡದ ಗೋಲ್ ಕೀಪರ್, ಶ್ರೀಜೇಶ್ ರವೀಂದ್ರನ್, ನಾಯಕ ಸರ್ದಾರ್ ಸಿಂಗ್ ಹಾಕಿ ತಂಡದ ಸಾಧನೆ ಬಗ್ಗೆ ಹೇಳಿದ್ದಾರೆ. ಜತೆಗೆ ದೇಶವಾಸಿಗಳ ಮನಸ್ಸಿನಲ್ಲಿ ರಾಷ್ಟ್ರೀಯ ಕ್ರೀಡೆ ಬಗ್ಗೆ ಇರುವ ನಿರ್ಲಕ್ಷ್ಯ ತನಕ್ಕೂ ಬೇಸರ ವ್ಯಕ್ತವಾಗಿದೆ.
ಬೆಲ್ಜಿಯಂ ನಲ್ಲಿ ಜೂನ್ 20 ರಿಂದ ಜುಲೈ 5 ರವರೆಗೆ ನಡೆಯಲಿರುವ ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್ ಆಡಲು ನವದೆಹಲಿಯಿಂದ ಭಾರತ ಹಾಕಿ ತಂಡ ಪ್ರಯಾಣ ಬೆಳೆಸಿದೆ.[ಜೇನುಗೂಡಿಗೆ ಕಲ್ಲು ಹೊಡೆದ ದೀಪಿಕಾ #MyChoice ಜಾಹೀರಾತು]
ಟಾಪ್ ನಾಲ್ಕು ತಂಡಗಳು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಭಾರತದಲ್ಲೇ ನಡೆಯಲಿರುವ ಫೈನಲ್ ನಲ್ಲಿ ಸೆಣೆಸಲಿವೆ. ಇಲ್ಲಿನ ಟಾಪ್ 3 ತಂಡಗಳು 2016ರ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಏಷ್ಯಾ ಕಪ್ ಗೆದ್ದಿರುವ ಭಾರತ ಈಗಾಗಲೇ ಸ್ಥಾನ ಭದ್ರ ಮಾಡಿಕೊಂಡಿದೆ.
ಭಾರತ ಎ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದ್ದು ಆಸ್ಟ್ರೇಲಿಯಾ, ಫ್ರಾನ್ಸ್, ಪಾಕಿಸ್ತಾನ ಮತ್ತು ಪೊಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 20 ರಂದು ಫ್ರಾನ್ಸ್ ಎದುರು ಭಾರತಕ್ಕೆ ಮೊದಲ ಪಂದ್ಯವಿದೆ. ವಿಡಿಯೋ ನೋಡಿ...