
ನವದೆಹಲಿ, ಜುಲೈ 18: ಸಾವನ್ನಪ್ಪಿರುವ ಹಾಕಿ ಒಲಿಂಪಿಯನ್ ಮೊಹಮ್ಮದ್ ಶಾಹಿದ್ ಅವರ ಪತ್ನಿ ಪರ್ವೀನ್, ಶಾಹಿದ್ ಗೆ ಲಭಿಸಿರುವ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಮಂಗಳವಾರ ಬೆದರಿಕೆಯೊಡ್ಡಿದ್ದಾರೆ. ಪತಿ ಸತ್ತಾಗ ಸರ್ಕಾರ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಪತಿಯ ಎಲ್ಲಾ ಉನ್ನತ ಪ್ರಶಸ್ತಿಗಳನ್ನು ವಾಪಸ್ ಮಾಡುವುದಾಗಿ ಹೇಳಿದ್ದಾರೆ.
ವಾರಣಾಸಿ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಭಾರತದ ಉತ್ತಮ ಫಾರ್ವರ್ಡ್ ಆಟಗಾರ ಶಾಹಿದ್, 1980 ಮಾಸ್ಕೋ ಒಲಿಂಪಿಕ್ಸ್ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿದ್ದರು. ಪದ್ಮಶ್ರೀ, ಅರ್ಜುನ ಸೇರಿದಂತೆ ಇನ್ನೂ ಹವಲಾರು ಉನ್ನತ ಪ್ರಶಸ್ತಿಗಳನ್ನು ಪಡೆದಿದ್ದ ಶಾಹಿದ್, ದೀರ್ಘಕಾಲದ ಅನಾರೋಗ್ಯದ ಕಾರಣ 2016ರ ಜುಲೈ 20ರಂದು ಅಸುನೀಗಿದ್ದರು.
ಶಾಹಿದ್ ಮರಣ ಹೊಂದಿದಾಗ ಸಚಿವರ ಸಹಿತ ಅನೇಕ ಮಂದಿ ಶಾಹಿದ್ ಮನೆಗೆ ಭೀಟಿಯಿತ್ತು ಶಾಹಿದ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಈ ವೇಳೆ ಶಾಹಿದ್ ಹೆಸರಿನಲ್ಲಿ ಪಂದ್ಯಾಟಗಳನ್ನು ನಡೆಸುವುದಾಗಿ ಸಚಿವರುಗಳು ಆಶ್ವಾಸನೆಗಳನ್ನು ನೀಡಿದ್ದರು. ಆದರೆ ಅದ್ಯಾವುದನ್ನೂ ಈವರೆಗೂ ಈಡೇರಿಸಿಲ್ಲ. ಮುಂದೆಯೂ ಈಡೇರಿಸದಿದ್ದರೆ ಶಾಹಿದ್ ಸಾಧನೆಗೆ ಲಭಿಸಿದ ಎಲ್ಲಾ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಮರಳಿಸುವುದಾಗಿ ಪರ್ವೀನ್ ಸರ್ಕಾರಕ್ಕೆ ಬೆದರಿಕೆಯೊಡ್ಡಿದ್ದಾರೆ.
ಪರ್ವೀನ್ ಹೇಳುವಂತೆ ಶಾಹಿದ್ ಸಾವನ್ನಪ್ಪಿದ ಸಂದರ್ಭ ಹಿಂದಿನ ಸಮಾಜವಾದಿ ಸರ್ಕಾರದ ಕ್ರೀಡಾ ಸಚಿವ ರಾಮ್ ಸಕಾಲ್ ಅವರು ಶಾಹಿದ್ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದ ಹಾಕಿ ಟೂರ್ನಮೆಂಟನ್ನು ವಾರ್ಷಿಕವಾಗಿ ಆಯೋಜಿಸುವುದಾಗಿ ಹೇಳಿಕೊಂಡಿದ್ದರು. ಉತ್ತರಪ್ರದೇಶ ರಾಜ್ಯದ ಆಗಿನ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರೂ ಶಾಹಿದ್ ಹೆಸರಿನಲ್ಲಿ ಟೂರ್ನಮೆಂಟ್ ಗಳನ್ನು ನಡೆಸಲು ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕೊಟ್ಟಮಾತನ್ನು ಯಾವ ಸಚಿವರೂ ನಡೆಸಿಕೊಟ್ಟಿಲ್ಲ ಎನ್ನುವುದು ಪರ್ವೀಣ್ ಅಳಲು.
'ಗಂಡನ ಹೆಸರಿನಲ್ಲಿ ಟೂರ್ನಮೆಂಟ್ ಗಳನ್ನು ನಡೆಸಲು ನನಗೆ ಆಸೆಯಿದೆ. ಆದರೆ ಈಗಿರುವ ಸ್ಥಿತಿಯಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಬೇಕಾದಷ್ಟು ಆರ್ಥಿಕ ಬಲ ನನ್ನಲ್ಲಿಲ್ಲ. ಹಾಗಾಗಿ ಸ್ಥಳೀಯ, ಜಿಲ್ಲಾ ಅಥವಾ ರಾಜ್ಯ ಮಟ್ಟದ ಟೂರ್ನಮೆಂಟ್ ಗಳನ್ನು ನಡೆಸಲು ಪ್ರಾಯೋಜಕರ, ಸಂಸ್ಥೆಗಳ, ಸರ್ಕಾರದ ನೆರವು ಬೇಕಿದೆ. ಸರ್ಕಾರ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಪದ್ಮಶ್ರೀ, ಅರ್ಜುನ ಸಹಿತ ಶಾಹಿದ್ ಗೆ ಸಿಕ್ಕಿರುವ ಎಲ್ಲಾ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತೇನೆ' ಎಂದು ಪರ್ವೀನ್ ಹೇಳಿದ್ದಾರೆ.