
ಭಾನುವಾರ ಭಾರತ ಹಾಕಿ ತಂಡ ಆಘಾತ ಅನುಭವಿಸಿದೆ. ಭುವನೇಶ್ವರದ ರೂರ್ಕೆಲಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಕ್ರಾಸ್ ಓವರ್ ಪಂದ್ಯದಲ್ಲಿ 4-5 ಗೋಲುಗಳ ಅಂತರದಲ್ಲಿ ಸೋಲುವ ಮೂಲಕ ಹಾಕಿ ವಿಶ್ವಕಪ್ 2023 ಟೂರ್ನಿಯಿಂದ ಹೊರಬಿದ್ದಿದೆ.
ಗುಂಪು ಹಂತದ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಹೆಚ್ಚಿನ ಗೋಲುಗಳ ಅಂತರದಲ್ಲಿ ಗೆಲ್ಲುವಲ್ಲಿ ವಿಫಲವಾಗಿದ್ದ ಭಾರತ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿತ್ತು. ಎಂಟರ ಘಟ್ಟಕ್ಕೆ ತಲುಪಲು ಅದು ನ್ಯೂಜಿಲೆಂಡ್ ವಿರುದ್ಧ ಗೆಲ್ಲಬೇಕಿತ್ತು.
ಆದರೆ, ಅಂತಿಮ ಕ್ಷಣದವರೆಗೂ ಉಭಯ ತಂಡಗಳು ಗೆಲುವಿಗಾಗಿ ರೋಚಕವಾಗಿ ಸೆಣೆಸಾಡಿದರೂ ಅಂತಿಮವಾಗಿ ನ್ಯೂಜಿಲೆಂಡ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಪೆನಾಲ್ಟಿ ಶೂಟೌಟ್ನಲ್ಲಿ ಎಡವಿದ ಭಾರತ ತಂಡ ಸೋಲೊಪ್ಪಿಕೊಂಡು ಟೂರ್ನಿಯಿಂದ ನಿರ್ಗಮಿಸಿದೆ.
ವಿಶ್ವ ರ್ಯಾಂಕಿಂಗ್ನಲ್ಲಿ 12ನೇ ಸ್ಥಾನದಲ್ಲಿರುವ ಕಿವೀಸ್ ಪಡೆಯ ವಿರುದ್ಧ 6ನೇ ಶ್ರೇಯಾಂಕಿತ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಿತು. ಆದರೆ, ನ್ಯೂಜಿಲೆಂಡ್ ಪಡೆ ಭಾರತದ ಲೆಕ್ಕಾಚಾರವನ್ನು ತಲೆಕೆಳಗಾಗಿಸುವಂತೆ ಆಟವಾಡಿತು.
ಆರಂಭದಲ್ಲಿ ಭಾರತ ಸ್ಪಷ್ಟವಾಗಿ ಮೇಲುಗೈ ಸಾಧಿಸಿದರು, ಕೊನೆಯ ಹಂತದಲ್ಲಿ ತಿರುಗಿಬಿದ್ದ ನ್ಯೂಜಿಲೆಂಡ್ 3-3 ಗೋಲುಗಳಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಹೆಚ್ಚುವರಿ ಸಮಯದಲ್ಲಿ ಕೂಡ ಯಾವುದೇ ತಂಡ ಗೋಲು ಗಳಿಸಲು ಸಾಧ್ಯವಾಗದ ಕಾರಣ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು.

ರೋಚಕ ಜಯ ಸಾಧಿಸಿದ ನ್ಯೂಜಿಲೆಂಡ್
ಶೂಟೌಟ್ನಲ್ಲಿ ಕೂಡ ಉಭಯ ತಂಡಗಳು ಸಮಬಲದಲ್ಲಿ ಹೋರಾಡಿದವು. ಮೊದಲ ಶೂಟೌಟ್ನಲ್ಲಿ ಕೂಡ ಭಾರತ ಮತ್ತು ನ್ಯೂಜಿಲೆಂಡ್ ತಲಾ 3 ಗೋಲು ಗಳಿಸಲು ಸಾಧ್ಯವಾದ ಕಾರಣ, ಮತ್ತೊಂದು ಸುತ್ತಿನ ಶೂಟೌಟ್ ನಡೆಸಲಾಯಿತು. ಭಾರತದ ಗೋಲ್ ಕೀಪರ್ ರವೀಂದ್ರನ್ ಶ್ರೀಜೇಶ್ ಅದ್ಭುತವಾಗಿ ಗೋಲುಗಳನ್ನು ತಡೆಯುವ ಮೂಲಕ ಭಾರತ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು.
ಆದರೆ, ಅವರು ಗೋಲು ತಡೆಯುವ ವೇಳೆ ಗಾಯಗೊಂಡ ಬಳಿಕ, ಕಿಶನ್ ಬಹದ್ದೂರ್ ಗೋಲ್ ಕೀಪಿಂಗ್ ಮಾಡುವ ಜವಾಬ್ದಾರಿ ವಹಿಸಿಕೊಂಡರು. ಕಿಶನ್ ಕೂಡ ಉತ್ತಮ ಪ್ರದರ್ಶನ ನೀಡಿದರು, ಆದರೆ ಅಂತಿಮ ಹಂತದಲ್ಲಿ ಎಡವಿದ ಅವರು ಗೋಲು ಬಿಟ್ಟುಕೊಟ್ಟರು.
ಭಾರತದ ವಿರುದ್ಧ ರೋಚಕ ಜಯ ಸಾಧಿಸಿರುವ ನ್ಯೂಜಿಲೆಂಡ್ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿವೀಸ್ ಬಳಗ ಬಲಿಷ್ಠ ಬೆಲ್ಜಿಯಂ ತಂಡವನ್ನು ಎದುರಿಸಲಿದ್ದಾರೆ. ತವರಿನಲ್ಲಿ ಭಾರತ ಪ್ರಶಸ್ತಿ ಗೆಲ್ಲುತ್ತದೆ ಎಂದು ನಿರೀಕ್ಷಿಸಿದ್ದ ಕೋಟ್ಯಂತರ ಹಾಕಿ ಅಭಿಮಾನಿಗಳ ಕನಸು ಛಿದ್ರವಾಗಿದೆ.