
ಲಂಡನ್, ಜುಲೈ 20: ಲಂಡನ್ ನಲ್ಲಿ ನಾಳೆ(ಜು. 21)ಯಿಂದ ಆರಂಭಗೊಳ್ಳಲಿರುವ ವನಿತಾ ಹಾಕಿ ವಿಶ್ವಕಪ್ ಪಂದ್ಯಾಟದ ಪ್ರಚಾರಾರ್ಥವಾಗಿ ಲಂಡನ್ ನ ಥೀಮ್ಸ್ ನದಿ ದಡದಲ್ಲಿ, ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 16 ರಾಷ್ಟ್ರಗಳ ಧ್ವಜಗಳ ಮಧ್ಯೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಭಾರತದ ನಾಯಕಿ ರಾಣಿ ರಾಂಪಾಲ್ ಕಣ್ಣಲ್ಲಿ ನೀರಾಡಿತು; ಆದರದು ಖುಷಿಯ ಕಣ್ಣೀರು.
ರಾಣಿ ರಾಂಪಾಲ್ ತನ್ನ ಬಾಲ್ಯದ ದಿನಗಳನ್ನು ನೆನೆದುಕೊಂಡು ಕಣ್ಣೀರಿತ್ತರು. ಅದರಲ್ಲೂ ತನ್ನ ಮೊದಲ ಕೋಚ್ ಬಲದೇವ್ ಸಿಂಗ್ ಅವರನ್ನು ನೆನೆದು ಹೆಚ್ಚು ಭಾವುಕರಾದರು. ಯಾಕೆಂದರೆ ಬಾಲ್ಯದ ದಿನಗಳಲ್ಲಿ ತನ್ನ ಸಾಧನೆಗೆ ಹೆಚ್ಚು ಬೆಂಗಾವಲಾಗಿ ನಿಂತವರು ಬಲದೇವ್ ಎಂದು ರಾಣಿ ತಿಳಿಸಿದರು.
ಬಾಲ್ಯವನ್ನು ಬಡತನದಲ್ಲಿ ಕೆಳೆದು ಈಗ ಕ್ರೀಡೆಯಲ್ಲಿ ಎತ್ತರಕ್ಕೇರಿರುವ ರಾಣಿಗೆ ಎಳವೆಯಲ್ಲಿ ಸಾಕಷ್ಟು ಸವಾಲಿನ ಕ್ಷಣಗಳು ಎದುರಾಗಿದ್ದವು. ಇದನ್ನು ಸ್ವತಃ ರಾಣಿಯವರೆ ಹೇಳಿಕೊಂಡರು. ಬಡತನ, ಹೆಣ್ಣೆಂಬ ಕಾರಣಕ್ಕೆ ನನಗೆ ಹೆತ್ತವರು ಹಾಕಿಯಲ್ಲಿ ಮುಂದುವರೆಯಲು ನಿರಾಕರಿಸಿದ್ದರು. ಅದರೆ ಗುರು ಬಲದೇವ್ ಅವರು ಮನೆಯವರ ಮನವೊಲಿಸಿ ನನ್ನ ಪ್ರತಿಭೆ ಬೆಳೆಯಲು ಅವಕಾಶ ಮಾಡಿಕೊಟ್ಟರು ಎಂದು ತನ್ನ ಬದುಕಿನ ಕ್ಷಣಗಳನ್ನು ವಿವರಿಸಿದರು.
'ಬೆಳಗ್ಗೆ ಯಾವತ್ತಿಗೂ ನಾನು 5 ಗಂಟೆಗೆ ಅಭ್ಯಾಸಕ್ಕಾಗಿ ತೆರಳಬೇಕಿತ್ತು. ಆದರೆ ಒಂದು ದಿನ ನಾನು 5.02 am ಗೆ ಅಭ್ಯಾಸಕ್ಕೆ ಬಂದೆ. ಕೋಚ್ ಬಲದೇವ್ ಆಗ ಭಯಂಕರ ಕೋಪದಲ್ಲಿದ್ದರು. ತಡವಾಗಿ ಬಂದಿದ್ದಕ್ಕಾಗಿ 200 ರೂ. ಫೈನ್ ಕಟ್ಟು ಹೇಳಿದರು. ಅಮ್ಮನಲ್ಲಿ ವಿಚಾರ ತಿಳಿಸಿ ದುಡ್ಡು ಕೇಳಿದೆ. ಅಪ್ಪ ದಿನಕ್ಕೆ ಗಳಿಸುತ್ತಿದ್ದುದೇ 100 ರೂ. ಇನ್ನು 200 ರೂ. ಅವರಾದರೂ ಎಲ್ಲಿಂದ ಕೊಟ್ಟಾರು?'
'ಅಂದು ನನಗೆ ಮನೆಯವರಿಂದ ಬರೀ 100 ರೂ.ಅಷ್ಟೇ ಸಿಕ್ಕಿತ್ತು. ಅದನ್ನೇ ತಂದು ಕೋಚ್ ಕೈಲಿ ಕೊಟ್ಟೆ. ಆಗಲೂ ಕೋಚ್ ಸಿಟ್ಟಿನಲ್ಲಿದ್ದರು, ಗದರಿದರು. ಆದರೆ ಅಭ್ಯಾಸ ಮುಗಿಸಿ ಹೊರಡುವ ವೇಳೆ ಕೋಚ್ ನನ್ನನ್ನು ಬಳಿ ಕರೆದರು. ನಾನು ನೀಡಿದ್ದ 100ರ ನೋಟನ್ನು ನನ್ನತ್ತ ಚಾಚಿದರು. ಅದರ ಕೆಳಗೆ 100ರ ಇನ್ನೊಂದು ನೋಟಿತ್ತು!'
ನೋಟು ಕೈಗಿಡುತ್ತ ಕೋಚ್, 'ನಿನ್ನಿಂದ ಹಣ ತೆಗೆದುಕೊಳ್ಳಲು ನಾನು ಬಯಸಿಲ್ಲ. ಆದರೆ ನಿನಗೆ ಶಿಸ್ತು ಕಲಿಸಬೇಕಿತ್ತು' ಎಂದಷ್ಟೇ ನುಡಿದಿದ್ದರು ಎಂದು ರಾಣಿ ತನ್ನ ಬದುಕು, ತರಬೇತಿ, ಕೋಚ್, ಶಿಸ್ತು ಎಲ್ಲದರ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.
23ರ ಹರೆಯದ ರಾಂಪಾಲ್ ಆಡಿರುವ 212 ಪಂದ್ಯಗಳಲ್ಲಿ 134 ಗೋಲ್ ಗಳನ್ನು ಬಾರಿಸಿದ್ದಾರೆ. ಜುಲೈ 21ರ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ರಾಣಿ ರಾಂಪಾಲ್ ಮುಂದಾಳತ್ವದಲ್ಲಿ ಆತಿಥೇಯ ಇಂಗ್ಲೆಂಡ್ ಸವಾಲು ಸ್ವೀಕರಿಸಲಿದೆ.