ನವದೆಹಲಿ, ಡಿ. 14: ಪಂದ್ಯ ಗೆದ್ದವರು ಸಂಭ್ರಮಿಸುವುದು ಸಾಮಾನ್ಯ, ಆದರೆ ಅದಕ್ಕೊಂದು ಇತಿ ಮಿತಿ ಅಂಥ ಇರುತ್ತದೆ. ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ಪಾಕಿಸ್ತಾನ ಆಟಗಾರರು ಸಂಭ್ರಮಿಸಿದ ಬಗೆ ಎಂಥವರಿಗೂ ರೇಜಿಗೆ ಹುಟ್ಟಿಸುವಂತಿತ್ತು.
ಇದಕ್ಕೆ ತಕ್ಕ ಕ್ರಮವನ್ನೇ ತೆಗೆದುಕೊಂಡಿರುವ ಭಾರತ ಹಾಕಿ ಫೆಡರೇಷನ್ ಇನ್ನು ಮುಂದೆ ಪಾಕಿಸ್ತಾನದ ವಿರುದ್ಧ ಯಾವ ಪಂದ್ಯವನ್ನು ಆಡುವುದಿಲ್ಲ ಎಂದು ಹೇಳಿದೆ. ಆಟಗಾರರ ದುರ್ವತನೆ, ಅಸಭ್ಯ ಚಿಹ್ನೆಗಳಿಂದ ಕೆರಳಿರುವ ಭಾರತ ಹಾಕಿ ಫೆಡರೇಷನ್ ಕಠಿಣ ಕ್ರಮವನ್ನೇ ತೆಗೆದುಕೊಂಡಿದೆ.[ಹಾಕಿː ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿ ಚಿನ್ನ ಗೆದ್ದ ಭಾರತ]

ಪಾಕಿಸ್ತಾನ ಹಾಕಿ ಫೆಡರೇಷನ್ ಮತ್ತು ಪಾಕಿಸ್ತಾನ ಹಾಕಿ ತಂಡದ ಆಟಗಾರರು ಭಾರತದ ಕ್ಷಮೆ ಯಾಚಿಸಬೇಕು ಎಂದು ಹೇಳಿದೆ. ಇತ್ತ ಪಾಕಿಸ್ತಾನದ ಕೋಚ್ ಶಹನಾಜ್ ಮಾಧ್ಯಮಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು? ಭುವನೇಶ್ವರದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 4-3 ರ ಅಂತರದಲ್ಲಿ ಗೆದ್ದಿತ್ತು. ಈ ವೇಳೆ ಮೈದಾನಲ್ಲೇ ಟೀ ಶರ್ಟ್ ಕಳಚಿದ ಪಾಕ್ ಆಟಗಾರರು ಕೆಟ್ಟ ರೀತಿಯಲ್ಲಿ ವರ್ತಿಸಲಾರಂಭಿಸಿದರು.[ಫುಟ್ಬಾಲ್ ನಂತರ ಹಾಕಿ ತಂಡಕ್ಕೆ ಧೋನಿ ಒಡೆಯ]

ತಲಾ 3 ಗೋಲುಗಳನ್ನು ದಾಖಲಿಸಿದ್ದ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಮತ್ತಷ್ಟು ರೋಚಕ ಘಟ್ಟಕ್ಕೆ ತಲುಪಿಸಿದ್ದವು. ಆದರೆ ಪಂದ್ಯದ ಕೊನೆಯ ನಿಮಿಷದಲ್ಲಿ ಗೋಲು ದಾಖಲಿಸಿದ ಪಾಕಿಸ್ತಾನ ಮೊಹಮದ್ ಖಾದಿರ್ ತಮ್ಮ ದೇಶಕ್ಕೆ ಜಯ ತಂದುಕೊಟ್ಟರು. ಈ ವೇಳೆ ಏಕಾಏಕಿ ತಮ್ಮ ಶರ್ಟ್ ಕಳಚಿದ ಪಾಕ್ ನ ಬಹುತೇಕ ಆಟಗಾರರು ಅಸಭ್ಯ ಚಿಹ್ನೆಗಳನ್ನು ತೋರಿಸುತ್ತ ಕುಣಿದು ಕುಪ್ಪಳಿಸಿದರು.
ಕೆಲ ಆಟಗಾರರು ಮಾಧ್ಯಮಗಳ ಮುಂದೆ ಹೋಗಿ ಮಧ್ಯದ ಬೆರಳನ್ನು ತೋರಿಸಿದರು. ಅಸಹ್ಯ ಮಾತುಗಳನ್ನಾಡಿದರು. ಒಟ್ಟಿನಲ್ಲಿ ಕ್ರೀಡಾ ಸ್ಫೂರ್ತಿ ಮರೆತ ಆಟಗಾರರ ದುಂಡಾವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇಬ್ಬರು ಆಟಗಾರರಿಗೆ ಒಂದು ಪಂದ್ಯ ನಿಷೇಧ: ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಇಬ್ಬರು ಆಟಗಾರರಿಗೆ ಒಂದು ಪಂದ್ಯ ನಿಷೇಧ ಹೇರಲಾಗಿದೆ. ಮಹಮದ್ ತೌಸಿಕ್ ಮತ್ತು ಅಲಿ ಅಮ್ಜದ್ ನಿಷೇಧಕ್ಕೆ ಒಳಗಾಗಿರುವ ಆಟಗಾರರು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಮಹಮದ್ ತೌಸಿಕ್ ಮತ್ತು ಅಲಿ ಅಮ್ಜದ್ ಜರ್ಮನಿ ವಿರುದ್ಧದ ಫೈನಲ್ ಪಂದ್ಯ ಆಡದಂತೆ ತಿಳಿಸಿದೆ.