ಕಾರ್ಕಳದ ಕಡ್ತಲದಲ್ಲಿ ಹುಟ್ಟಿ ಬೆಳೆದ ಸುಕೇಶ್
ಭಾರತ ಕಬಡಿ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಸುಕೇಶ್ ಹೆಗ್ಡೆ ಹುಟ್ಟಿದ್ದು ಉಡುಪಿ ಜಿಲ್ಲೆಯ ಕಾರ್ಕಳದ ಕಡ್ತಲ ಎಂಬ ಪುಟ್ಟ ಹಳ್ಳಿಯಲ್ಲಿ. ತಂದೆ ದಿ. ಕರುಣಾಕರ್ ಹೆಗ್ಡೆ ಹಾಗೂ ತಾಯಿ ರತ್ನಾವತಿ ಹೆಗ್ಡೆ ದಂಪತಿಗಳ ಪುತ್ರ ಸುಕೇಶ್ ಹೆಗ್ಡೆ ಬಾಲ್ಯವನ್ನು ತಮ್ಮ ಹುಟ್ಟೂರಿನಲ್ಲಿಯೇ ಕಳೆದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿಯೇ ಮುಗಿಸಿದ ಸುಕೇಶ್ ಈ ಹಂತದಲ್ಲಿಯೇ ಕಬಡ್ಡಿಯತ್ತ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಮಧ್ಯಮ ವರ್ಗ ಕುಟುಂಬದಲ್ಲಿ ಬೆಳೆದ ಸುಕೇಶ್ ಅವರಿಗೆ ಬಾಲ್ಯದಿಂದಲೇ ಕುಟುಂಬದಿಂದ ಉತ್ತಮ ಬೆಂಬಲ ದೊರೆತಿತ್ತು.
ಬಾಲ್ಯದಿಂದಲೇ ಕಬಡ್ಡಿ ಮೇಲೆ ಆಸಕ್ತಿ
ಪ್ರಸ್ತುತ ಭಾರತ ಕಬಡ್ಡಿ ತಂಡದಲ್ಲಿ ಹಾಗೂ ಪ್ರೊ ಕಬಡ್ಡಿ ಲೀಗ್ನಲ್ಲಿ ಮಿಂಚುತ್ತಿರುವ ಸುಕೇಶ್ ಹೆಗ್ಡೆ ಅವರಿಗೆ ಬಾಲ್ಯದಿಂದಲೇ ಕಬಡ್ಡಿ ಮೇಲೆ ಆಸಕ್ತಿ ಹೆಚ್ಚಾಗಿತ್ತು. ತನ್ನ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಹಾಗೂ ಶಾಲೆಯಲ್ಲಿ ಕಬಡ್ಡಿ ಆಡವೇ ಹೆಚ್ಚಾಗಿ ಆಡುತ್ತಿದ್ದ ಕಾರಣ ಸಹಜವಾಗಿ ಅದರತ್ತ ಒಲವು ಮೂಡಿತ್ತು. ಹೀಗಾಗಿ ಐದನೇ ತರಗತಿಯಲ್ಲಿ ಶಾಲೆಯಲ್ಲಿ ಕಬಡ್ಡಿ ತಂಡಕ್ಕೆ ಸೇರ್ಪಡೆಯಾದರು. ಈ ಹಂತದಲ್ಲಿಯೇ ಉತ್ತಮ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದ ಸುಕೇಶ್ ತಮ್ಮ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಮಿಂಚಲು ಆರಂಭಿಸಿದ್ದರು. ಹೀಗಾಗಿ ತಾಲೋಕು ಮಟ್ಟ, ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಿಂಚಲು ಆರಂಭಿಸಿದ್ದರು. ಈ ಹಂತದಲ್ಲಿ ಸುಕೇಶ್ ಹೆಗ್ಡೆ ತಮ್ಮ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿರಲಿಲ್ಲ. ನಂತರ ಆಳ್ವಾಸ್ ಕಾಲೇಜಿನಲ್ಲಿ ಕ್ರೀಡಾ ಕೋಟಾದಲ್ಲಿ ಅವಕಾಶ ದೊರೆತಾಗ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು ಸುಕೇಶ್ ಹೆಗ್ಡೆ. ಮೊದಲ ವರ್ಷದ ಪದವಿಯಲ್ಲಿರುವಾಗಲೇ ಮಂಗಳೂರು ವಿಶ್ವವಿದ್ಯಾಲಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿ ಆಲ್ಇಂಡಿಯಾ ಯುನಿವರ್ಸಿಟಿ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಸುಕೇಶ್ ಹೆಗ್ಡೆ ಪ್ರಮುಖ ಪಾತ್ರವಹಿಸಿದ್ದರು. ಈ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುಕೇಶ್ ಮಿಂಚುವ ವಿಶ್ವಾಸ ಮೂಡಿಸಿದ್ದರು.
ಭಾರತ ತಂಡಕ್ಕೆ ಆಯ್ಕೆಯಾದ ಸುಕೇಶ್
ಸುಕೇಶ್ ಹೆಗ್ಡೆ ನಂತರ ಒಂದರ ನಂತರ ಮತ್ತೊಂದು ಮೆಟ್ಟಿಲನ್ನು ಏರುತ್ತಲೇ ಸಾಗಿದರು. 2014ರಲ್ಲಿ ಭಾರತ ತಂಡವನ್ನು ಕಬಡ್ಡಿ ಕ್ರೀಡೆಯಲ್ಲಿ ಪ್ರತಿನಿಧಿಸುವ ಅವಕಾಶವನ್ನು ಗಳಿಸಿಕೊಂಡರು. 2014ರಲ್ಲಿ ಥಾಯ್ಲೆಂಡ್ನಲ್ಲಿ ನಡೆದ ನಾಲ್ಕನೇ ಏಷ್ಯನ್ ಬೀಚ್ ಕಬಡ್ಡಿ ಟೂರ್ನಿಯಲ್ಲಿ ಭಾರತದ ಪರವಾಗಿ ಮೊದಲ ಬಾರಿಗೆ ಕಣಕ್ಕಿಳಿದರು ಸುಕೇಶ್ ಹೆಗ್ಡೆ. ಅದಾದ ಬಳಿಕ ಹಿಂದಿರುಗಿ ನೋಡಲೇ ಇಲ್ಲ. 2016ರಲ್ಲಿ 12ನೇ ಸೌತ್ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು ಸುಕೇಶ್ ಹೆಗ್ಡೆ.
ಪ್ರೊ ಕಬಡ್ಡಿಯಲ್ಲಿ ಸ್ಟಾರ್ ಆಟಗಾರ ಸುಕೇಶ್ ಹೆಗ್ಡೆ
2014ರಲ್ಲಿ ಆರಂಭವಾದ ಪ್ರೊ ಕಬಡ್ಡಿ ಲೀಗ್ನ ಆರಂಭಿಕ ಆವೃತ್ತಿಯಲ್ಲಿಯೇ ಅವಕಾಶ ಗಿಟ್ಟಿಸಿಕೊಂಡಿದ್ದರು ಸುಕೇಶ್ ಹೆಗ್ಡೆ. 2014-16ರ ಅವಧಿಯಲ್ಲಿ ನಡೆದಿದ್ದ ನಾಲ್ಕು ಆವೃತ್ತಿಗಳಲ್ಲಿ ಸುಕೃಶ್ ಹೆಗ್ಡೆ ತೆಲುವು ಟೈಟನ್ಸ್ ತಂಡದ ಭಾಗವಾಗಿದ್ದರು. 2017ರ ಆವೃತ್ತಿಗೆ ಗುಜರಾತ್ ಫಾರ್ಚುನ್ ಜೈಂಟ್ಸ್ ತಂಡದ ಪಾಲಾದ ಅವರು 2018ರಲ್ಲಿ ತಮಿಳ್ ರಲೈವಾಸ್ ಪರವಾಗಿ ಆಡಿದರು. 2019ರ ಆವೃತ್ತಿಯಿಂದ ಬೆಂಗಾಲ್ ವಾರಿಯರ್ಸ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಇನ್ನು ಕಬಡ್ಡಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿರುವ ಕರ್ನಾಟಕ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ.