
ಮೈಸೂರು: ಸತತ ಪರಿಶ್ರಮ, ಸಾಧಿಸುವ ಹಂಬಲ, ಉತ್ಸಾಹದ ಜೊತೆಗೆ ನಿರ್ದಿಷ್ಟ ಗುರಿಯೊಂದಿದ್ದರೆ ಬದುಕಿನಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಅದೆಷ್ಟೋ ಉದಾಹರಣೆಗಳಿವೆ. ಇಂತದ್ದೇ ಗುರಿ, ಉತ್ಸಾಹದ ಜೊತೆಗೆ ಸತತ ಪರಿಶ್ರಮ ನಡೆಸುತ್ತಿರುವ ಮೈಸೂರಿನ ವಿಶೇಷಚೇತನರ ಥ್ರೋ ಬಾಲ್ ತಂಡವೊಂದು ಪ್ಯಾರಾ ಏಷಿಯನ್ ಗೇಮ್, ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಲು ತಯಾರಿ ಆರಂಭಿಸಿದೆ.
ವಿಶೇಷಚೇತನರ ಒಲಂಪಿಕ್ ಆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಪ್ಯಾರಾ ಥ್ರೋ ಬಾಲ್ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಪ್ಯಾರಾಲಂಪಿಕ್ಸ್ ಹಾಗೂ ಪ್ಯಾರಾ ಏಷಿಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಗುರಿ ಹೊಂದಿರುವ ಮೈಸೂರಿನ ಉತ್ಸಾಹಿ ವಿಶೇಷಚೇತನರು, ನಿರಂತರ ಪರಿಶ್ರಮ ಹಾಗೂ ಅಭ್ಯಾಸ ನಡೆಸುತ್ತಿದ್ದಾರೆ. ಇದೇ ಉದ್ದೇಶದೊಂದಿಗೆ ಮೈಸೂರಿನಲ್ಲಿ ಪ್ಯಾರಾ ಥ್ರೋಬಾಲ್ ಫೆಡರೇಷನ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದಿದ್ದು, ಪ್ಯಾರಾ ಥ್ರೋ ಬಾಲ್ ಪಟುಗಳನ್ನು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಅಣಿಗೊಳಿಸಲಾಗುತ್ತಿದೆ. ಇದಕ್ಕಾಗಿ ಶಿವಮೊಗ್ಗ, ಮೈಸೂರು, ದಾವಣಗೆರೆ, ಹಾವೇರಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರ, ಹೊಸಪೇಟೆಯಿಂದ ಪ್ಯಾರಾ ಥ್ರೋಬಾಲ್ ಪಟುಗಳನ್ನು ಗುರುತಿಸಲಾಗಿದೆ. ಇವರುಗಳಿಹೆ ಸಿಟ್ಟಿಂಗ್, ಸ್ಟ್ಯಾಡಿಂಗ್ ಮತ್ತು ವೀಲ್ಹ್ ಚೇರ್ ಥ್ರೋ ಬಾಲ್ ಎಂಬ ಮೂರು ವಿಭಾಗದಲ್ಲಿ ತರಬೇತಿ ನೀಡಲಾಗುತ್ತಿದ್ದು, ಇದರಲ್ಲಿ ಮಹಿಳೆ ಮತ್ತು ಪುರುಷರ ತಲಾ ಮೂರು ತಂಡದಿಂದ 48 ಮಂದಿಗೆ ತರಬೇತಿ ನೀಡಲಾಗುತ್ತಿದೆ.
ಪ್ಯಾರಾ ಒಲಂಪಿಕ್ ಕಮಿಟಿ ಆಫ್ ಇಂಡಿಯಾ ಸಂಸ್ಥಾಪಕ, ಅರ್ಜನ ಪ್ರಶಸ್ತಿ ಪುರಷ್ಕೃತ ಎಂ. ಮಹಾದೇವ ಅವರ ಮಾರ್ಗದರ್ಶನದಲ್ಲಿ ಮೈಸೂರಿನವರೇ ಆದ ರಾಮಚಂದ್ರ, ಆರ್. ಮಂಜುನಾಥ್, ಗಣೇಶ್, ಈಶ್ವರ್ ಭಟ್ ಸೇರಿ ಪ್ಯಾರಾ ಥ್ರೋಬಾಲ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆ ಆರಂಭಿಸಿದ್ದಾರೆ. ಇದಕ್ಕೆ ನೆರೆ ರಾಜ್ಯಗಳ ವಿಶೇಷಚೇತನ ಕ್ರೀಡಾ ಸಂಘಟನೆಗಳು ಸಹ ಅನುಮೋದಿಸಿವೆ. ಸದ್ಯ ದೇಶದಲ್ಲಿ ಇದೊಂದೇ ನೋಂದಾಯಿತ ಪ್ಯಾರಾ ಥ್ರೋಬಾಲ್ ಸಂಘಟನೆಯಾಗಿದ್ದು, ತೆಲಂಗಾಣ, ಉತ್ತರಕಾಂಡ್, ಗುಜರಾತ್, ಹರಿಯಾಣ ಮತ್ತು ತಮಿಳುನಾಡಿನ ಪ್ಯಾರಾಥ್ರೋ ಬಾಲ್ ತಂಡಗಳು ಮ್ಯಾನ್ಯತೆಗಾಗಿ ಫೆಡರೇಷನ್ ಗೆ ಅರ್ಜಿ ಸಲ್ಲಿಸಿವೆ.

ಮೈಸೂರಿನಲ್ಲಿ ತರಬೇತಿ ಶುರುವಾದಂತೆ ಈ ರಾಜ್ಯಗಳಲ್ಲಿಯೂ ಪ್ಯಾರಾಲಿಂಪಿಕ್ಸ್ ಕನಸ್ಸಿನೊಂದಿಗೆ ತರಬೇತಿ ಆರಂಭವಾಗಿದೆ. ಈ ರಾಜ್ಯಗಳಲ್ಲೆ ಸೇರಿ ರಾಷ್ಟ್ರಮಟ್ಟದ ಪ್ಯಾರಾ ಥ್ರೋ ಬಾಲ್ ಪಂದ್ಯಾವಳಿ ಸಂಘಟಿಸುತ್ತಿವೆ. ರಾಷ್ಟ್ರಮಟ್ಟದ ಪ್ಯಾರಾ ಥ್ರೋಬಾಲ್ ಪಂದ್ಯಾವಳಿಯ ಅತಿಥ್ಯವನ್ನು ತಮಿಳುನಾಡಿನ ತಂಡ ವಹಿಸಿಕೊಂಡಿದ್ದು, ಫೆಬ್ರವರಿಯಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಫೆಡರೇಷನ್ ಗೌರವಾಧ್ಯಕ್ಷರೂ ಆದ ಎಂ. ಮಹಾದೇವ ತಿಳಿಸಿದ್ದಾರೆ.
ಆರ್ಥಿಕ ಬಲ ತುಂಬಬೇಕಿದೆ
ಇಷ್ಟೆಲ್ಲ ದೂರದೃಷ್ಟಿ, ಛಲ ಹೊಂದಿರುವ ಥ್ರೋ ಬಾಲ್ ಫೆಡರೇಷನ್ ಗೆ ಆರ್ಥಿಕ ಬಲದ ಅಗತ್ಯವಿದೆ. ದೈಹಿಕ ನ್ಯೂನತೆ ಮೆಟ್ಟಿನಿಂತು ಆತ್ಮಬಲವನ್ನೇ ನಂಬಿ ಕಣಕ್ಕಿಳಿಯವ ವಿಶೇಷ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯವಿದೆ. ಕ್ರೀಡಾ ಸಚಿವರು, ಕಾರ್ಪೋರೆಟ್ ಸಂಸ್ಥೆಗಳು, ಕ್ರೀಡಾಭಿಮಾನಿಗಳು ಇವರ ನೆರವಿಗೆ ಬಂದರೆ, ವಿಶ್ವಮಟ್ಟದಲ್ಲಿ ಭಾರತದಲ್ಲಿ ಪ್ರತಿನಿಧಿಸುವ ಉತ್ಸಾಹದಲ್ಲಿದ್ದಾರೆ.
''ಮೊದಲ ಹಂತದಲ್ಲಿ ಸಹಾಯಕ್ಕೆ ಧಾವಿಸಿರುವ ಸುತ್ತೂರು ಮಠದ ಜೆಎಸ್ಎಸ್ ವಿಶೇಷಚೇತನರ ಪಾಲಿಟ್ನೆಕ್ ಕಾಲೇಜು 48 ಮಂದಿ ಪ್ಯಾರಾ ಥ್ರೋ ಬಾಲ್ ಪಟುಗಳಿಗೆ ಉಚಿತವಾಗಿ ಊಟ, ವಸತಿ ಸೇರಿ ತರಬೇತಿ ಮತ್ತು ಅಭ್ಯಾಸಕ್ಕೆ ಕ್ರೀಡಾಂಗಣ ಒದಗಿಸಿದೆ. ಇಷ್ಟು ಮಂದಿಗೆ ವೀಲ್ಹ್ ಚೇರ್ ನೀಡಲು ರೋಟರಿ ಮಿಡ್ ಟೌನ್ ಮುಂದೆ ಬಂದಿದೆ. ಇದರ ನಡುವೆ ಕ್ರೀಡಾಪಟುಗಳಿಗೆ ಸಮವಸ, ಕ್ರೀಡಾ ಪರಿಕರ, ಸಾರಿಗೆ ವೆಚ್ಚ ಮತ್ತು ತಂಡದ ನಿರ್ವಹಣೆಗೆ ಕ್ರೀಡಾಸಕ್ತರು ಯಾವ ರೀತಿಯಲ್ಲಾದರೂ ಪ್ರೋತ್ಸಾಹಿಸಿ'' ಎಂದು ಫೆಡರೇಷನ್ ಮುಖ್ಯಸ್ಥರು ಮನವಿ ಮಾಡಿದ್ದಾರೆ.

ಪ್ಯಾರಾ ಏಷಿಯನ್ ಗೇಮ್, ಪ್ಯಾರಾಲಿಂಪಿಕ್ಸ್ ಪಂದ್ಯಾವಳಿಗೆ ರಾಜ್ಯದ ಪ್ಯಾರಾಥ್ರೋ ಬಾಲ್ ತಂಡ ಅಣಿಗೊಳಿಸುವುದು ಹಾಗೂ ದೇಶದಲ್ಲಿ ಪ್ಯಾರಾ ಥ್ರೋ ಬಾಲ್ಆಟವನ್ನು ಬೆಳೆಸುವ ಉದ್ದೇಶದಿಂದ ಸಮಾನ ಮನಸ್ಕ ವಿಶೇಷಚೇತನರು ಸೇರಿ ಪ್ಯಾರಾ ಥ್ರೋ ಬಾಲ್ ಫೆಡರೇಷನ್ ಆ್ ಇಂಡಿಯಾವನ್ನು ಆರಂಭಿಸಿದ್ದು, ಕ್ರೀಡಾಭಿಮಾನಿಗಳು ನಮ್ಮನ್ನು ಪೋಷಿಸಬೇಕೆಂದು ಫೆಡರೇಷನ್ ಅಧ್ಯಕ್ಷ ರಾಮಚಂದ್ರ ಮನವಿ ಮಾಡಿಕೊಂಡಿದ್ದಾರೆ.