
ಆರ್ಚರಿ ವಿಶ್ವಕಪ್ನಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಈ ಮೂಲಕ 4 ಚಿನ್ನದ ಪದಕಗಳನ್ನು ಭಾರತ ಗೆದ್ದುಕೊಂಡಿದೆ. ಭಾರತೀಯ ಆರ್ಚರ್ಗಳ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದು ಅಭಿನಂದಿಸಿದ್ದಾರೆ.
ಪ್ಯಾರಿಸ್ನಲ್ಲಿ ನಡೆದ ಬಿಲ್ಲುಗಾರಿಕೆ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಿಕಾ ಕುಮಾರಿ, ಅಂಕಿತಾ ಭಾಕತ್, ಕೊಮಲಿಕಾ ಬಾರಿ, ಅತನು ದಾಸ್ ಮತ್ತು ಅಭಿಷೇಕ್ ವರ್ಮಾ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಕ್ರೀಡಾಪಟುಗಳ ಸಾಧನೆಗೆ ನರೇಂದ್ರ ಮೋದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಕಳೆದ ಕೆಲವು ದಿನಗಳು ವಿಶ್ವಕಪ್ನಲ್ಲಿ ನಮ್ಮ ಬಿಲ್ಲುಗಾರರ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿವೆ. ದೀಪಿಕಾ ಕುಮಾರಿ, ಅಂಕಿತಾ ಭಾಕತ್, ಕೊಮಲಿಕಾ ಬಾರಿ, ಅತನು ದಾಸ್ ಮತ್ತು ಅಭಿಷೇಕ್ ವರ್ಮಾ ಅವರಿಗೆ ಅಭಿನಂದನೆಗಳು. ಈ ಸಾಧನೆಯು ಈ ಕ್ಷೇತ್ರದಲ್ಲಿ ಮುಂಬರುವ ಪ್ರತಿಭೆಗಳಿಗೆ ಸ್ಫೂರ್ತಿ ನೀಡಲಿದೆ" ಎಂದು ಹೇಳಿದ್ದಾರೆ.
ಕಳೆದ ಶನಿವಾರದಿಂದ ಆರಂಭವಾದ ಈ 'ಆರ್ಚರಿ ವಿಶ್ವಕಪ್ ಹಂತ 3' ಮೊದಲಿಗೆ ಅಭಿಶೇಕ್ ವರ್ಮಾ ವೈಯಕ್ತಿಕ ವಿಭಾಗದಲ್ಲಿ ಗೆಲುವು ಸಾಧಿಸಿ ಭಾರತದ ಚಿನ್ನದ ಪದಕದ ಖಾತೆ ತೆರೆದಿದ್ದರು. ನಂತರ ಮಹಿಳಾ ವಿಭಾಗದಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕಾತ್ ಮತ್ತು ಕೋಮಲಿಕಾ ಬ್ಯಾರಿ ಅವರ ತಂಡ ಮೆಕ್ಸಿಕೋ ತಂಡವನ್ನು ಮಣಿಸಿ ಚಿನ್ನವನ್ನು ಗೆದ್ದುಕೊಂಡಿತು. ಬಳಿಕ ಅತನು ದಾಸ್ ಹಾಗೂ ದೀಪಿಕಾ ಕುಮಾರಿ ಅವರನ್ನು ಒಳಗೊಂಡ ಮಿಕ್ಸ್ಡ್ ಡಬಲ್ಸ್ ತಂಡ ಕೂಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು. ನಂತರ ದೀಪಿಕಾ ಕುಮಾರಿ ವೈಯಕ್ತಿಕ ವಿಭಾಗದಲ್ಲಿ ಮತ್ತೊಂದು ಚಿನ್ನದ ಪದಕವನ್ನು ಗೆದ್ದು ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದಾರೆ.