
ಜಕಾರ್ತಾ, ಆಗಸ್ಟ್ 26: ಏಷ್ಯನ್ ಗೇಮ್ಸ್ ನ ಪುರುಷರ 10,000 ಮೀ. ಓಟದಲ್ಲಿ ಜಿ ಲಕ್ಷ್ಮಣನ್ ಅವರು ಇದೇ ಮೊದಲ ಬಾರಿಗೆ ಭಾರತ ಪರ ಕಂಚಿನ ಪದಕ ಗೆದ್ದಿದ್ದರು. ಆದರೆ ಓಡುವಾಗ ಲಕ್ಷ್ಮಣ್ ಕಾಲು ಟ್ರ್ಯಾಕ್ ನ ಹೊರ ಅಂಚಿಗೆ ತಾಗಿದ ಕಾರಣ ಸ್ಪರ್ಧೆಯಿಂದ ಅವರನ್ನು ಅನರ್ಹಗೊಳಿಸಲಾಯಿತು. ಹೀಗಾಗಿ ಭಾರತ ಪಾಲಾಗಿದ್ದ ಕಂಚು ಮತ್ತೆ ಕೈತಪ್ಪಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಏಷ್ಯನ್ ಗೇಮ್ಸ್ ನ ಪುರುಷರ 10,000 ಮೀ. ಓಟವನ್ನು 29 ನಿಮಿಷ 44.91 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದ್ದ ಜಿ ಲಕ್ಷ್ಮಣನ್ ಅವರು ಇದೇ ಮೊದಲ ಬಾರಿಗೆ ಭಾರತ ಪರ ಕಂಚಿನ ಪದಕ ಗೆದ್ದಿದ್ದರು. ಆದರೆ ಕಂಚು ಘೋಷಣೆಯಾದ ಕೆಲವೇ ಕ್ಷಣಗಳ ಬಳಿಕ, ವಿಡಿಯೋ ಚಿತ್ರೀಕರಣವನ್ನು ಪರಿಶೀಲಿಸಿ ಲಕ್ಷ್ಮಣನ್ ಅವರನ್ನು ಅನರ್ಹಗೊಳಿಸಲಾಯಿತು.
10,000 ಮೀ. ಓಟದಂತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಾಗ ಸಹಜವಾಗಿ ದೇಹ ತೀವ್ರ ದಣಿವಿಗೆ ತುತ್ತಾಗುತ್ತದೆ. ಆಗ ಓಟಗಾರನ ಕೈಕಾಲುಗಳು ಲಯ ತಪ್ಪುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೆಚ್ಚಿನಸಾರಿ ದೂರದ ಓಟಗಳಲ್ಲಿ ಸೀಮಿತ ಟ್ರ್ಯಾಕ್ ಇರುವುದಿಲ್ಲ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಟಗಾರರ ಮಧ್ಯೆ ಗುದ್ದಾಟ ಆಗಬಾರದೆಂಬ ಕಾರಣಕ್ಕೆ ಎರಡು ಗುಂಪುಗಳಲ್ಲಿ ಒಂದನ್ನು ಆರಂಭಿಕ ಟ್ರ್ಯಾಕ್ ಗಳಲ್ಲಿ ಇನ್ನೊಂದನ್ನು ಅಂತಿಮ ಟ್ರ್ಯಾಕ್ ಗಳಲ್ಲಿ ಆದರೆ ಆರಂಭಿಕ ಟ್ರ್ಯಾಕ್ ನಲ್ಲಿರುವವರಿಗಿಂತ ಕೊಂಚ ಮುಂದೆ ನಿಲ್ಲಿಸಿ ಓಟ ಆರಂಭಿಸಲಾಗುತ್ತದೆ. ತಿರುವಿನಲ್ಲಿನ 100 ಮೀಟರ್ ಓಡಿ ಮುಗಿಸಿದ ಬಳಿಕ ಎಲ್ಲಾ ಓಟಗಾರರು ಆರಂಭಿಕ ಟ್ರ್ಯಾಕ್ ಗಳಿಗೆ ಸೇರಿಕೊಂಡು ಓಟ ಮುಂದುವರೆಸಬಹುದು.
ಆದರೆ ಇಲ್ಲಿ ಲಕ್ಷ್ಮಣನ್ ಅವರಿಂದ ಎಡವಟ್ಟಾಗಿದ್ದು ಓಟದ ಆರಂಭದಲ್ಲಿ ಅಲ್ಲ, ಓಟ ಕೊನೆಗೊಳ್ಳುವ ಕೊನೇ ಕ್ಷಣದಲ್ಲಿ ಓಡುತ್ತಿದ್ದ ಲಕ್ಷ್ಮಣನ್ ಕಾಲು ಟ್ರ್ಯಾಕಿನ ಒಳಭಾಗದ ಅಂಚಿಗೆ (ಟ್ವಿಟರ್ ಚಿತ್ರದಲ್ಲಿ ತೋರಿಸಿರುವಂತೆ) ತಾಗಿತ್ತು. ಇದು ಒಂದರ್ಥದಲ್ಲಿ ಓಟದ ನಿಯಮ ಮೀರಿದಂತೆಯೇ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಲಕ್ಷ್ಮಣ್ ಬೆಂಬಲಕ್ಕೆ ನಿಂತಿತಾದರೂ ಅದರಿಂದ ಪ್ರಯೋಜನವಾಗಲಿಲ್ಲ.