
ಭುಬನೇಶ್ವರ್, ಆಗಸ್ಟ್ 27: ಇಂಡೋನೇಷ್ಯಾದಲ್ಲಿನ ಏಷ್ಯನ್ ಗೇಮ್ಸ್ ನ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದ ದ್ಯುತೀ ಚಂದ್ ಗೆ ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸೋಮವಾರ 1.5 ಕೋ.ರೂ. ನಗದು ಪ್ರಶಸ್ತಿ ಘೋಷಿಸಿದ್ದಾರೆ.
ಆಗಸ್ಟ್ 26ರ ಭಾನುವಾರ ನಡೆದ 18ನೇ ಏಷ್ಯನ್ ಗೇಮ್ಸ್ ನ ಮಹಿಳಾ ವಿಭಾಗದ 100 ಮೀ. ಓಟದಲ್ಲಿ ದ್ಯುತೀ ಚಂದ್ ಬೆಳ್ಳಿ ಪದಕ ಗೆದ್ದಿದ್ದರು. 100 ಮೀ. ಓಟವನ್ನು 11.32 ಸೆಕೆಂಡ್ ಗಳಲ್ಲಿ ಮುಗಿಸಿದ ದುತ್ಯೀ ಕೇವಲ 0.02 ಸೆಕೆಂಡ್ ನಲ್ಲಿ ಬಂಗಾರದಿಂದ ವಂಚಿತರಾಗಿದ್ದರು. ಬಹ್ರೇನ್ ನ ಎಡಿಡಿಯನ್ಗ್ ಆಫ್ಒನಿಮೆ ಒಡಿಯಾಂಗ್ ಅವರು 11.30 ಸೆಕೆಂಡ್ ಗಳಲ್ಲಿ ಓಟ ಪೂರ್ಣಗೊಳಿಸಿದ್ದರು.
'20ರ ಹರೆಯದ ಒಡಿಶಾ ಸ್ಪ್ರಿಂಟರ್ ದ್ಯುತೀ ಭಾರತಕ್ಕೆ ಬೆಳ್ಳಿ ತಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. 1998ರ ಏಷ್ಯನ್ ಗೇಮ್ಸ್ ನಲ್ಲಿ ಒಡಿಶಾ ಅಥ್ಲೀಟ್ ರಚಿತಾ ಮಿಸ್ತ್ರಿ ಕಂಚು ಗೆದ್ದಿದ್ದರು' ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
'ದ್ಯುತಿಯನ್ನು ಪ್ರೋತ್ಸಾಹಿಸುವುದೂ ನಮಗೆ ಖುಷಿಯ ವಿಚಾರ. ದ್ಯುತಿಯ ಅವಿರತ ಶ್ರಮ, ಸಾಧನೆಗಾಗಿ ಮುಖ್ಯ ಮಂತ್ರಿಗಳು ಚಂದ್ ಅವರಿಗೆ 1.5 ಕೋ.ರೂ. ನಗದು ಬಹುಮಾನ ಘೋಷಿಸಿದ್ದಾರೆ' ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟನೆ ತಿಳಿಸಿದೆ.