
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ, ಡಿಸೆಂಬರ್ 21ರಂದು ತನ್ನ ಅಪೆಕ್ಸ್ ಕೌನ್ಸಿಲ್ ಸಭೆಯನ್ನು ನಡೆಸಲಿದೆ. ಬಿಸಿಸಿಐ ಮೂಲಗಳ ಪ್ರಕಾರ, ಆಟಗಾರರ ಕೇಂದ್ರ ಒಪ್ಪಂದಗಳು ಮತ್ತು ಹೊಸ ಆಯ್ಕೆ ಸಮಿತಿಯ ನೇಮಕಾತಿ ಕಾರ್ಯಸೂಚಿಯಲ್ಲಿನ ಕೆಲವು ಪ್ರಮುಖ ಅಜೆಂಡಾಗಳಾಗಿವೆ.
ಇನ್ನು ಆಟದ ವಿವಿಧ ಸ್ವರೂಪಗಳಿಗೆ ವಿವಿಧ ಕೋಚ್ ಮತ್ತು ನಾಯಕರನ್ನು ನೇಮಿಸುವ ಕುರಿತು ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಐಸಿಸಿ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ನಿರಾಶಾದಾಯಕ ಸೋಲಿನ ನಂತರ ಭಾರತ ತಂಡಕ್ಕೆ ಟಿ20 ಸ್ವರೂಪದಲ್ಲಿ ಹೊಸ ಕೋಚ್ ಮತ್ತು ನಾಯಕ ಆಯ್ಕೆಗೊಳ್ಳುವ ಸಾಧ್ಯತೆಯಿದೆ.
35 ವರ್ಷ ವಯಸ್ಸಾಗಿರುವ ನಾಯಕ ರೋಹಿತ್ ಶರ್ಮಾಗೆ ಆಟಗಾರನಾಗಿ ಆಡುವುದು ಕೆಲವೇ ವರ್ಷಗಳು ಬಾಕಿ ಇವೆ. ಹೀಗಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಸಂಭಾವ್ಯ ಟಿ20 ನಾಯಕನಾಗಿ ಆಯ್ಕೆಯಾಗಲು ಸಿದ್ಧರಾಗಿದ್ದಾರೆ.

ಇನ್ನು ರಾಹುಲ್ ದ್ರಾವಿಡ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕೋಚ್ ಆಗಿ ಉಳಿಯಬಹುದು. ಅದರೆ ಟಿ20 ಕೋಚ್ ಆಗಿ ಬೇರೊಬ್ಬರಿಗೆ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ತಂಡದ ಸಹಾಯಕ ಸಿಬ್ಬಂದಿ, ವಿಶೇಷವಾಗಿ ಫೀಲ್ಡಿಂಗ್ ಕೋಚ್ ಮತ್ತು ಫಿಸಿಯೋಗಳ ಪ್ರದರ್ಶನದಿಂದ ಬಿಸಿಸಿಐ ಕೂಡ ಸಂತೋಷವಾಗಿಲ್ಲ. ಆದ್ದರಿಂದ ಕೆಲವು ಬದಲಾವಣೆಗಳಾಗುವ ಸಾಧ್ಯತೆಯಿದೆ.
ಟಿ20 ವಿಶ್ವಕಪ್ ಸೋಲು ಅಥವಾ ಬಾಂಗ್ಲಾದೇಶ ಏಕದಿನ ಸರಣಿಯಲ್ಲಿ ತಂಡದ ಪ್ರದರ್ಶನದ ವಿಮರ್ಶೆ ಅಪೆಕ್ಸ್ ಕೌನ್ಸಿಲ್ ಸಭೆಯ ಅಜೆಂಡಾದಲ್ಲಿಲ್ಲ ಎನ್ನಲಾಗಿದೆ.
ಸಭೆಯ ಭಾಗವಾಗಿ ಹೊಸ ಬಿಸಿಸಿಐ ಕೇಂದ್ರ ಒಪ್ಪಂದಗಳ ಬಗ್ಗೆ ಚರ್ಚಿಸಲಾಗುವುದು ಮತ್ತು ಸ್ಟಾರ್ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಬಡ್ತಿ ಪಡೆಯಲಿದ್ದಾರೆ.

ಇದೇ ವೇಳೆ ಮೂಲಸೌಕರ್ಯ ಉಪಸಮಿತಿಯನ್ನು ರಚಿಸುವ ಸಾಧ್ಯತೆಯಿದೆ ಮತ್ತು ಮುಂಬರುವ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಿಗೆ ಸ್ಥಳಗಳನ್ನು ಚರ್ಚಿಸಲಾಗುತ್ತದೆ.
ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸ್ಟಾರ್ ಆಟಗಾರರು ಇತ್ತೀಚೆಗೆ ಪದೇಪದೇ ಗಾಯಗಳಿಗೆ ತುತ್ತಾಗುತ್ತಿದ್ದಾರೆ. ಆಟಗಾರರ ಗಾಯದ ನಿರ್ವಹಣೆಯು ಸಭೆಯಲ್ಲಿ ಪ್ರಮುಖ ವಿಷಯವಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸಮಯದಲ್ಲಿ ಅಹಮದಾಬಾದ್ನಲ್ಲಿ ನಡೆಯುವ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದಲ್ಲಿ ಪಿಂಕ್-ಬಾಲ್ ಟೆಸ್ಟ್ ಅನ್ನು ಆಡಿಸುವ ಸಾಧ್ಯತೆಯಿದೆ.