
ನವದೆಹಲಿ, ಸೆಪ್ಟೆಂಬರ್ 23: ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಿಗೆ ನಗದು ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಮುಜುಗರಕ್ಕೀಡಾಗಿದೆ. ಕಾರಣ ಪದಕ ವಿಜೇತರಿಗೆ ವಿತರಿಸಬೇಕಾದ ಚೆಕ್ ನಲ್ಲಿ ವಿಜೇತರ ಹೆಸರು ತಪ್ಪು ತಪ್ಪು ಮುದ್ರಿಸಲ್ಟಟ್ಟಿತ್ತು.
ಇತಿಹಾಸ : ಧೋನಿ ರುಂಡ ಹಿಡಿದ ಬಾಂಗ್ಲಾ ಹುಲಿಗಳು ಇಲಿಗಳಾಗಿದ್ದು!
ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ನಲ್ಲಿ ದೇಶಕ್ಕೆ ಪದಕ ಗೆದ್ದಿದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ವಿತರಣಾ ಸಮಾರಂಭವನ್ನು ದೆಹಲಿಯಲ್ಲಿ ಭಾನುವಾರ (ಸೆ.23) ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಹುಮಾನದ ಚೆಕ್ ನಲ್ಲಿ ಸುಮಾರು 15 ಕ್ರೀಡಾಪಟುಗಳ ಹೆಸರು ತಪ್ಪಾಗಿ ಮುದ್ರಿಸಲ್ಪಟ್ಟಿತ್ತು. ಒಬ್ಬ ಕ್ರೀಡಾಪಟುವಿನ ಹೆಸರಿನಲ್ಲಂತೂ ಚೆಕ್ಕೇ ಇರಲಿಲ್ಲ!
ಏಷ್ಯಾನ್ ಗೇಮ್ಸ್ ನಲ್ಲಿ ಈ ಬಾರಿ ಭಾರತಕ್ಕೆ ಒಟ್ಟು 69 ಪದಕಗಳು ಲಭಿಸಿದ್ದು ಇದರಲ್ಲಿ ತಂಡವಿಭಾಗದ ಬಂಗಾರ, ಬೆಳ್ಳಿ, ಕಂಚು ವಿಜೇತರಿಗೆ ಕ್ರಮವಾಗಿ 3, 2, 1 ಲಕ್ಷ ರೂ. ಮತ್ತು ವೈಯಕ್ತಿಕ ವಿಭಾಗದಲ್ಲಿ ಕ್ರಮವಾಗಿ 5, 3, 2 ಲಕ್ಷ ರೂ. ನಗದು ಪುರಸ್ಕಾರದ ಚೆಕ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮುಜುಗರದ ಸಂಗತಿ ನಡೆದಿದೆ. ಅದರಲ್ಲೂ ರಸ್ಲಿಂಗ್ ನಲ್ಲಿ ಕಂಚು ಗೆದ್ದಿದ್ದ ದಿವ್ಯಾ ಕಕ್ರನ್ ಹೆಸರಿನಲ್ಲಿ ಚೆಕ್ಕೇ ಇರಲಿಲ್ಲ.
'ನಾನಿದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಸುಮಾರು 14-15 ಪದಕ ವಿಜೇತರ ಹೆಸರು ಚೆಕ್ ನಲ್ಲಿ ತಪ್ಪಾಗಿ ಪ್ರಿಂಟ್ ಆಗಿದೆ. ಹಾಗಾಗಿ ಸಮಾರಂಭದಲ್ಲಿ ಅವರಿಗೆಲ್ಲ ಬರೀ ಹೂಗುಚ್ಛ ನೀಡಿದ್ದೇವೆ. ಯಾಕೆಂದರೆ ತಪ್ಪಾಗಿ ಹೆಸರು ಮುದ್ರಿಸಲ್ಪಟ್ಟಿರುವ ಚೆಕ್ ನೀಡುವುದು ನನಗೆ ಸರಿ ಕಾಣಲಿಲ್ಲ. ಆದರೆ ಎಲ್ಲರಿಗೂ ನಗದು ಪುರಸ್ಕಾರ ಸಿಗಲಿದೆ. ಯಾರೂ ಗಾಬರಿಗೊಳ್ಳಬೇಕಿಲ್ಲ' ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.