ಜೈಪುರ, ಡಿಸೆಂಬರ್ 11: 2010ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಡಿಸ್ಕಸ್ ಥ್ರೋ ಆಟಗಾರ್ತಿ ಕೃಷ್ಣ ಪೂನಿಯಾ, ರಾಜಕೀಯದಲ್ಲಿಯೂ ಭರ್ಜರಿ 'ಎಸೆತ' ಹಾಕಿದ್ದಾರೆ.
ರಾಜಕೀಯದ ಮೊದಲ ಪ್ರಯತ್ನದಲ್ಲಿ ಸೋತಿದ್ದ ಅವರಲ್ಲೀಗ ಅಥ್ಲೆಟಿಕ್ನಲ್ಲಿ ಪದಕ ಗೆದ್ದಷ್ಟೇ ಸಂಭ್ರಮ.
ರಾಜಸ್ಥಾನ ಕಾಂಗ್ರೆಸ್ ಕೈಗೆ : ಸಮೀಕ್ಷೆಗಳ ಫಲಿತಾಂಶ ನಿಜವಾಯ್ತು!
ರಾಜಸ್ಥಾನದ ಸಾದುಲ್ಪುರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೃಷ್ಣ ಪೂನಿಯಾ ಬಹುಜನ ಸಮಾಜ ಪಕ್ಷ ಮನೋಜ್ ನ್ಯಂಗಲಿ ಮತ್ತು ಬಿಜೆಪಿಯ ರಾಮ್ ಸಿಂಗ್ ಕಸ್ವಾನ್ ಅವರ ವಿರುದ್ಧ ಸುಮಾರು 15,000 ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ.
2013ರ ವಿಧಾನಸಭೆ ಚುನಾವಣೆಯಲ್ಲಿಯೂ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಆದರೆ ಮೂರನೆ ಸ್ಥಾನ ಪಡೆದುಕೊಂಡಿದ್ದರು.
ಬಿಜೆಪಿ ಮತ್ತು ಬಿಎಸ್ಪಿಯಿಂದ ಟಿಕೆಟ್ ಆಹ್ವಾನ ಬಂದಿದ್ದರೂ, ಕಾಂಗ್ರೆಸ್ ಆಯ್ದುಕೊಂಡಿದ್ದ ಕೃಷ್ಣಾ ಅವರಿಗೆ ಟಿಕೆಟ್ ದೊರೆತಿದ್ದರೂ ಪ್ರಚಾರಕ್ಕೆ ಹೆಚ್ಚು ಸಮಯ ಸಿಕ್ಕಿರಲಿಲ್ಲ. ಹೀಗಾಗಿ ಅವರು ಸೋಲು ಕಾಣಬೇಕಾಗಿತ್ತು.
ಮುಖ್ಯಮಂತ್ರಿ ಪಟ್ಟಕ್ಕೇರಲು ಸಿದ್ಧರಾಗಿರುವ ಕಾಂಗ್ರೆಸ್ಸಿನ ಅಭ್ಯರ್ಥಿಗಳ್ಯಾರು?
ಹರಿಯಾಣದ ಕೃಷ್ಣಾ, ರಾಜಸ್ಥಾನದ ವಿರೇಂದರ್ ಪೂನಿಯಾ ಅವರನ್ನು 1999ರಲ್ಲಿ ಮದುವೆಯಾಗಿದ್ದರು. ಕೃಷ್ಣಾ ಅವರನ್ನು ತಾರಾ ಪ್ರಚಾರಕಿಯಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಉದ್ದೇಶಿಸಿತ್ತು. ಆದರೆ, ಟಿಕೆಟ್ ನೀಡುವಂತೆ ಕೃಷ್ಣಾ ಪಟ್ಟುಹಿಡಿದಿದ್ದರು.
2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಕೃಷ್ಣಾ ಮಹಿಳೆಯರ ಡಿಸ್ಕಸ್ ಥ್ರೋ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. 2012ರಲ್ಲಿ ಅವರು ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.