
ನವದೆಹಲಿ, ಮಾರ್ಚ್ 16: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಮತ್ತು ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶನಿವಾರ (ಮಾರ್ಚ್ 16) ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಗಂಭೀರ್ ಮತ್ತು ಛೆಟ್ರಿ ಸೇರಿ ಒಟ್ಟು 8 ಮಂದಿ ಕ್ರೀಡಾಪಟುಗಳು 2019ರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇದರಲ್ಲಿ ಆರ್ಚರಿ ಸ್ಟಾರ್ ಬಾಂಬಿಲಾ ದೇವಿ, ಬಾಸ್ಕೆಟ್ ಬಾಲ್ ಆಟಗಾರ್ತಿ ಪ್ರಶಾಂತಿ ಸಿಂಗ್ ಕೂಡ ಶನಿವಾರ ರಾಷ್ಟ್ರಪತಿಗಳಿಂದ ಪುರಸ್ಕಾರ ಸ್ವೀಕರಿಸಿದರು.
8ರಲ್ಲಿ ಇನ್ನುಳಿದ ನಾಲ್ಕು ಕ್ರೀಡಾಪಟುಗಳಾದ ಕುಸ್ತಿಪಟು ಭಜರಂಗ್ ಪೂನಿಯಾ, ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್, ಕಬಡ್ಡಿ ಸ್ಟಾರ್ ಅಜಯ್ ಠಾಕುರ್ ಮತ್ತು ಚೆಸ್ ಆಟಗಾರ್ತಿ ಹಾರಿಕ ದ್ರೋಣವಲ್ಲಿ ಪ್ರತ್ಯೇಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸೋಮವಾರ (ಮಾರ್ಚ್ 11) ಗೌರವ ಸ್ವೀಕರಿಸಿದ್ದಾರೆ.