
ಭುವನೇಶ್ವರ್, ಮೇ 22: ತಾನು ಸಲಿಂಗಿಯೆಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಕ್ಕೆ ತನ್ನ ಸಹೋದರಿಯ ಮಾನಸಿಕ ಕಿರುಕುಳ ಕಾರಣ ಎಂದು ಭಾರತದ ಸ್ಪ್ರಿಂಟರ್, ಒಡಿಶಾದ ದ್ಯುತೀ ಚಾಂದ್ ಮಂಗಳವಾರ (ಮೇ 21) ಹೇಳಿಕೊಂಡಿದ್ದಾರೆ. ತನ್ನ ಸಹೋದರಿ ತನ್ನಲ್ಲಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು ಎಂದು ದ್ಯುತೀ ದೂರಿದ್ದಾರೆ.
ಭಾರತದ ವೇಗದ ಓಟಗಾರ್ತಿ, ಒಲಿಂಪಿಕ್ಸ್ ಸ್ಪರ್ಧಿ ದ್ಯುತೀ ಚಾಂದ್ ತಾನು ಸಲಿಂಗಿ ಎಂಬ ವಿಚಾರವನ್ನು ಇತ್ತೀಚೆಗೆ ಹೇಳಿಕೊಂಡಿದ್ದರು. ಇದಕ್ಕೆ ತನ್ನ ಅಕ್ಕ ಬ್ಯ್ಲಾಕ್ಮೇಲ್ ಮಾಡುತ್ತಿದ್ದು ಕಾರಣ, ನಾನು ಹುಡುಗಿಯೊಬ್ಬಳ ಜೊತೆ ಸಂಬಂಧ ಹೊಂದಿರೋದು ಗೊತ್ತಿದ್ದರಿಂದ ಅಕ್ಕ ತನ್ನಲ್ಲಿ 25 ಲಕ್ಷ ರೂ. ನೀಡುವಂತೆ ಬೆದರಿಸುತ್ತಿದ್ದಳು ಎಂದು ದ್ಯುತೀ ತಿಳಿಸಿದ್ದಾರೆ.
ಘಟನೆ ಬಗ್ಗೆ ವಿವರಿಸುತ್ತ 23ರ ಹರೆಯದ ಚಾಂದ್, 'ಕಳೆದ ಮೂರು ವರ್ಷಗಳಿಂದ ನಾನು ನಮ್ಮ ಗ್ರಾಮದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಈ ವಿಚಾರ ನನ್ನ ಅಕ್ಕನಿಗೆ ಗೊತ್ತಿತ್ತು. ಹಣ ಕೊಡು ಇಲ್ಲ, ಈ ವಿಚಾರವನ್ನು ಬಹಿರಂಗಪಡಿಸುತ್ತೇನೆ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದಳು. ಹೀಗಾಗಿ ನಾನೇ ಈ ಸಂಗತಿಯನ್ನು ಹೇಳಿಕೊಳ್ಳಬೇಕಾಯ್ತು' ಎಂದಿದ್ದಾರೆ.
ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು ಎಂದು ದ್ಯುತೀ ದೂರಿರುವ ಸಹೋದರಿ ಸರಸ್ವತೀ ಚಾಂದ್ ಕೂಡ ಅಥ್ಲೀಟ್. ಏಷ್ಯಾನ್ ಗೇಮ್ಸ್ನಲ್ಲಿ ಸರಸ್ವತಿ ಪದಕ ಜಯಿಸಿದ್ದರು. ಅಂದ್ಹಾಗೆ ದ್ಯುತೀ ತಾನು ಸಲಿಂಗಿ ಎಂದಾಗ ಅವರ ತಾಯಿ ಅಖುಜಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ದ್ಯುತೀ ಅಭ್ಯಾಸದಲ್ಲಿ ತೊಡಗಿದ್ದಾರೆ.