ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ಮುಂದುವರಿದಿದೆ. ಬುಧವಾರ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಅಥ್ಲೀಟ್ಗಳು ಚಿನ್ನದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆರ್ಚರ್ ಹರ್ವಿಂದರ್ ಸಿಂಗ್ ದಾಖಲೆ ಬರೆದಿದ್ದಾರೆ.
ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ಹರಿಯಾಣದ ಹರ್ವಿಂದರ್ ಸಿಂಗ್ ತಂದುಕೊಟ್ಟಿದ್ದಾರೆ. ಇಲ್ಲಿಯವರೆಗೆ ಪ್ಯಾರಾ ಆರ್ಚರಿ ಇತಿಹಾಸದಲ್ಲಿ ಯಾವ ಭಾರತೀಯ ಅಥ್ಲೀಟ್ ಕೂಡ ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.
ಈಗ ಈ ದಾಖಲೆಯನ್ನು ಹರ್ವಿಂದರ್ ಸಿಂಗ್ ಅವರು ಮಾಡಿದ್ದಾರೆ. ಫೈನಲ್ ಸ್ಪರ್ಧೆಯಲ್ಲಿ ಅವರು ಪೋಲೆಂಡ್ನ ಲುಕಾಸ್ಜ್ ಸಿಜೆಕ್ ಅವರನ್ನು 6-0 ಅಂತರದಲ್ಲಿ ಸೋಲಿಸಿದ್ದಾರೆ.

ಪ್ಯಾರಾಲಿಂಪಿಕ್ಸ್ನಲ್ಲಿ ಬಂಗಾರ ಗೆದ್ದು ಹರ್ವಿಂದರ್ ಸಿಂಗ್ ಅವರು ಇಡೀ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದೀಗ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 'ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಪುರುಷರ ವೈಯಕ್ತಿಕ ರಿಕರ್ವ್ ಓಪನ್ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ಹರ್ವಿಂದರ್ ಸಿಂಗ್ ಅವರಿಗೆ ಅಭಿನಂದನೆಗಳು. ಅವರ ನಿಖರತೆ, ಗಮನ ಮತ್ತು ವಿಶ್ವಾಸ ಅತ್ಯುತ್ತಮವಾಗಿದೆ. ಅವರ ಸಾಧನೆಯಿಂದ ಭಾರತಕ್ಕೆ ಹೆಮ್ಮೆ ಇದೆ ಎಂದು ಗುಣಗಾನ ಮಾಡಿದ್ದಾರೆ.
ಮತ್ತೊಂದೆಡೆ ಹರ್ವಿಂದರ್ ಸಿಂಗ್ ಅವರಿಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಇದು ಭಾರತದ ಅತ್ಯಂತ ಯಶಸ್ವಿ ಪ್ಯಾರಾಲಿಂಪಿಕ್ಸ್ ಆಗಿದೆ. ಇದುವರೆಗೆ ಭಾರತವು 5 ಚಿನ್ನ, 9 ಬೆಳ್ಳಿ ಮತ್ತು 10 ಕಂಚಿನ ಪದಕಗಳನ್ನು ತನ್ನ ತೆಕ್ಕೆ ಹಾಕಿಕೊಂಡಿದೆ. ಹರ್ವಿಂದರ್ ನಂತರ, ಧರಂಬಿರ್ ಮತ್ತು ಪ್ರಣಬ್ ಸುರ್ಮಾ ಅವರು ಕೂಡ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ 19 ಪದಕಗಳನ್ನು ಗೆದ್ದಿತ್ತು.
ಇದಕ್ಕೂ ಮೊದಲು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಟೋಕಿಯೊಗಿಂತ ಹೆಚ್ಚು ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತ ಕೇವಲ 6 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಅಷ್ಟೇ ಅಲ್ಲ ಭಾರತ ಯಾವುದೇ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.