ಬಡತನಕ್ಕೆ ಬಗ್ಗಲಿಲ್ಲ
ಕುಂದಾಪುರ ವಡ್ಸೆ ಗ್ರಾಮದ ಮಹಾಬಲ ಪೂಜಾರಿ-ಪದ್ದು ಪೂಜಾರಿ ದಂಪತಿ ಪುತ್ರ ಗುರುರಾಜ್ ಬಡತನದಲ್ಲಿಯೇ ಬೆಳೆದವರು. ಗುರುವಿನ ತಂದೆ ಆಟೋಡ್ರೈವರ್. ತಾಯಿಯೂ ಕೂಲಿ ದುಡಿಮೆಗೆ ಒಗ್ಗಿಕೊಂಡವರು. ಆರ್ಥಿಕವಾಗಿ ಹಿಂದುಳಿದ ಕುಂಟುಂಬದಲ್ಲಿದ್ದೂ ಕ್ರೀಡೆಯಲ್ಲಿ ಸಾಧಿಸುತ್ತೇನೆ ಅಂತ ಹೊರಡುವವರಿಗೆ ಅಡೆತಡೆಗಳು ಜಾಸ್ತಿ. ಕ್ರೀಡಾಭ್ಯಾಸಕ್ಕೆ ಇಳಿದ ಪ್ರಾರಂಭದಲ್ಲಿ ಗುರುವಿಗೂ ಬಡತನದ ಬೇಗೆ ತಟ್ಟಿದ್ದಿದೆ. ಲಿಫ್ಟಿಂಗ್ ತರಬೇತಿಗೆ ಶೂ, ಕಾಸ್ಟ್ಯೂಮ್, ಪೌಷ್ಠಿಕ ಆಹಾರವಿಲ್ಲದೆ ಬಳಲಿದ್ದಿದೆ. ಆದರೆ ಕೊರತೆಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳದೆ ಸಿಕ್ಕ ಚೂರುಪಾರು ಪ್ರೋತ್ಸಾಹವನ್ನೇ ನೆಚ್ಚಿಕೊಂಡು ಗುರು ಸಾಧಿಸಿದ್ದಾರೆ. ಗುರುರಾಜ್ ಒಂದು ರೀತಿಯಲ್ಲಿ ಸವಾಲಿನ ಬದುಕನ್ನೇ ಸ್ಪೂರ್ತಿಯಾಗಿಸಿಕೊಂಡವರು.
ಅಂತಾರಾಷ್ಟ್ರೀಯ ಪದಕಗಳು
2016ರಲ್ಲಿ ಗುವಾಹಟಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮೊದಲ ದಿನವೇ 56 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಗುರುರಾಜ್ ಚಿನ್ನಗೆದ್ದಿದ್ದರು. 2016ರಲ್ಲಿ ಮಲೇಷ್ಯಾದಲ್ಲಿ ನಡೆದ ಕಾಮನ್ ವೆಲ್ತ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲೂ ಚಿನ್ನದ ಪದಕ ಜಯಿಸಿದ್ದರು. 2017ರಲ್ಲಿ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದಿದ್ದ ಗುರುವಿಗೆ ಗೋಲ್ಡ್ ಕೋಸ್ಟ್ ಗೇಮ್ಸ್ ನಲ್ಲಿ ದೊರೆತ ಬೆಳ್ಳಿ ನಾಲ್ಕನೇ ಅಂತಾರಾಷ್ಟ್ರೀಯ ಪದಕ.
ಲಿಫ್ಟಿಂಗ್ ನತ್ತ ತಿರುಗಿದ್ದೇ ಒಂದು ಟರ್ನಿಂಗ್ ಪಾಯಿಂಟ್
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪದವಿಪೂರ್ವ ಕಾಲೇಜಿನಲ್ಲಿರುವಾಗ ಗುರುರಾಜ್ ಕ್ರೀಡೆಯಲ್ಲಿ ಆಸಕ್ತಿ ತಳೆದಿದ್ದರು. ಪ್ರಾರಂಭದಿನಗಳಲ್ಲಿ ಗುರು ಜಿಲ್ಲಾಮಟ್ಟದ ಕೊಕ್ಕೋ ಸ್ಪರ್ಧಿ. ಜಿಲ್ಲಾಮಟ್ಟದ ಕುಸ್ತಿಯಲ್ಲೂ 3ಬಾರಿ ಚಿನ್ನಗೆಲ್ಲುವ ಮೂಲಕ ದಾವಣಗೆರೆ, ಮಂಗಳೂರು, ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಪದವಿ ವಿದ್ಯಾಭ್ಯಾಸವನ್ನರಸಿ ಉಜಿರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ದೂರದ ಓಟಕ್ಕಾಗಿ (Long Distance Race) ಗುರು ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದರು. ಆದರೆ ಕ್ರೀಡಾಭ್ಯಾಸದ ವೇಳೆ ಅಲ್ಲಿನ ಲಿಫ್ಟಿಂಗ್ ಕೋಚ್ ನ ಕಣ್ಣಿಗೆ ಬಿದ್ದು ಲಿಫ್ಟಿಂಗ್ ನತ್ತ ವಾಲಿದ್ದೇ ಒಂದು ಟರ್ನಿಂಗ್ ಪಾಯಿಂಟ್. ಮತ್ತೆ ಗುರು ವೇಟ್ ಲಿಫ್ಟಿಂಗ್ ನಲ್ಲಿ ಸಾಲು ಸಾಲು ಪದಕಗಳನ್ನೇ ಬಾಚಿಕೊಂಡರು.
ಗುರುವಿನ ದಾಖಲೆಯನ್ನೇ ಸರಿಗಟ್ಟಿದ್ದ ಗುರು!
ಪ್ರಥಮ ಪದವಿ(ಬಿಎ)ಯಲ್ಲಿ ಓದುತ್ತಿದ್ದಾಗ ಮಂಗಳೂರಿನಲ್ಲಿ ನಡೆದ ರಾಜ್ಯ ಪವರ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆಲ್ಲುವುದರೊಂದಿಗೆ ಗುರು ಪದಕದ ಬೇಟೆಗೆ ಶುರುವಿಟ್ಟುಕೊಂಡರು. ದ್ವಿತೀಯ ಪದವಿಯಲ್ಲಿ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ನೆಡೆದ ಮಂಗಳೂರು ವಿವಿ ಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯ 56 ಕೆ.ಜಿ. ವಿಭಾಗದ (ಸ್ನ್ಯಾಚ್ ಮತ್ತು ಕ್ಲೀನ್ ಆ್ಯಂಡ್ ಜರ್ಕ್) ಸ್ಪರ್ಧೆಯಲ್ಲಿ ಒಟ್ಟು 194ಕೆಜಿ ಭಾರ ಎತ್ತಿ ಚಿನ್ನದ ಪದಕದೊಂದಿಗೆ 1999ರಲ್ಲಿ ತನ್ನದೇ ಲಿಫ್ಟಿಂಗ್ ಕೋಚ್ ರಾಜೇಂದ್ರ ಪ್ರಸಾದ್ ಹೆಸರಿನಲ್ಲಿದ್ದ 14 ವರ್ಷಗಳ ಹಿಂದಿನ (190ಕೆಜಿ)ದಾಖಲೆಯನ್ನು ಸರಿಗಟ್ಟಿದ್ದರು.
ಕಲಿಕೆಯಲ್ಲೂ ಮುಂದು
ಕ್ರೀಡಾವಿದ್ಯಾರ್ಥಿಗಳು ಸಾಮಾನ್ಯವಾಗಿ ಓದಿನಲ್ಲಿ ಹಿಂದಿರುತ್ತಾರೆ ಅನ್ನೋ ತಪ್ಪು ಭಾವನೆಯಿದೆ. ಇದಕ್ಕೆ ಸಾಕ್ಷಿಯೆಂಬಂತೆ ಗುರು ಕಲಿಕೆಯಲ್ಲೂ ಮುಂದಿದ್ದರು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಗುರುರಾಜ್ ಪ್ರಥಮದರ್ಜೆ ಅಂಕ ಪಡೆದ ವಿದ್ಯಾರ್ಥಿ. ಉಜಿರೆ ಕಾಲೇಜಿನಲ್ಲಿ ಕಲಾ ಪದವಿ ಕಲಿಯುತ್ತಿದ್ದಾಗ ಸಾಕಷ್ಟು ಸೆಮಿಸ್ಟರ್ ಗಳಲ್ಲಿ ರ್ಯಾಂಕ್ ವಿದ್ಯಾರ್ಥಿಗಳಿಗೇ ಸೆಡ್ಡು ಹೊಡೆದು ಅರ್ಥಶಾಸ್ತ್ರ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದವರು ಗುರು. ಪದವಿಯನ್ನು ಪ್ರಥಮದರ್ಜೆ (68.98%)ಯಲ್ಲಿ ಉತ್ತೀರ್ಣನಾಗಿರುವ ಗುರು ಅನಂತರ ಭಾರತೀಯ ವಾಯುಸೇನೆಗೆ ಸೇರಿಕೊಂಡಿದ್ದರು.