ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಬಜರಂಗ್ ಪುನಿಯಾ ವಿರುದ್ಧ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮಹತ್ವದ ಕ್ರಮ ಕೈಗೊಂಡಿದೆ.
ವರದಿಗಳ ಪ್ರಕಾರ, ಮಾರ್ಚ್ 10 ರಂದು ಸೋನಿಪತ್ನಲ್ಲಿ ನಡೆದ ಆಯ್ಕೆ ಪ್ರಯೋಗಳಿಗೆ ಬಜರಂಗ್ ಪೂನಿಯಾ ತಮ್ಮ ಮೂತ್ರದ ಮಾದರಿಯನ್ನು ನೀಡಲು ನಿರಾಕರಿಸಿದ್ದರು. ಹೀಗಾಗಿ ಬಜರಂಗ್ ಪೂನಿಯಾ ಅವರನ್ನು ನಾಡಾ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಡಾದ ಈ ಕ್ರಮದಿಂದಾಗಿ ಬಜರಂಗ್ ಪುನಿಯಾ ಅವರ ಅಮಾನತು ತೆರವಾಗುವವರೆಗೆ ಯಾವುದೇ ಪಂದ್ಯಾವಳಿ ಅಥವಾ ಟ್ರಯಲ್ಸ್ನಲ್ಲಿ ಭಾಗವಹಿಸಲು ಅನರ್ಹರಾಗಿರುತ್ತಾರೆ. ಜೊತೆಗೆ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆ ಉಂಟುಮಾಡಿದೆ ಎಂದು ತಿಳಿದು ಬಂದಿದೆ.
ನಾಡಾ ಹಲವು ಬಾರಿ ಕರೆ ಮಾಡಿದರೂ ಬಜರಂಗ್ ಮೂತ್ರದ ಮಾದರಿಯನ್ನು ನೀಡಲು ಹಿಂದೇಟು ಹಾಕಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೂ ಮೊದಲು ರಾಷ್ಟ್ರೀಯ ಡೋಪಿಂಗ್ ಏಜೆನ್ಸಿ (ನಾಡಾ) ಈ ಬಗ್ಗೆ ವಿಶ್ವ ಉದ್ದೀಪನ ಮದ್ದು ತಡೆ ಘಟಕಕ್ಕೆ (ವಾಡಾ) ಮಾಹಿತಿ ನೀಡಿತ್ತು.

ಇದಾದ ನಂತರ ಆಯ್ಕೆ ಪ್ರಯೋಗಕ್ಕೆ ಭಾಗವಹಿಸದಿದ್ದಕ್ಕಾಗಿ ಉತ್ತರಿಸಲು ವಾಡಾ, ಬಜರಂಗ್ ಪೂನಿಯಾ ಅವರಿಗೆ ನೋಟಿಸ್ ಕಳುಹಿಸಿತ್ತು. ಅಲ್ಲದೆ ನಾಡಾ ಕೂಡ ಏಪ್ರಿಲ್ 23 ರಂದು ಪೂನಿಯಾಗೆ ನೋಟಿಸ್ ನೀಡಿ ಮೇ 7 ರೊಳಗೆ ಉತ್ತರಿಸಲು ತಿಳಿಸಿದೆ. ಇದೀಗ ಬಜರಂಗ್ ಪೂನಿಯಾ ಅವರ ಪ್ರತಿಕ್ರಿಯೆ ಏನು? ಮತ್ತು ಅವರ ಮೇಲಿನ ಅಮಾನತನ್ನು ನಾಡಾ ಹಿಂಪಡೆಯುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.