ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಓಟಗಾರ್ತಿ ದ್ಯುತಿ ಚಾಂದ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದಾರೆ. 2021ರ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 4 ರಲ್ಲಿ 11.17 ಸೆಕೆಂಡ್ಗಳಲ್ಲಿ 100 ಮೀ ಓಡಿ ದ್ಯುತಿ ಭಾರತದಲ್ಲಿ ಹೊಸ ಮಹಿಳಾ ದಾಖಲೆಯನ್ನು ಬರೆದಿದ್ದರು.
ಈ ನಿಷೇಧವು ಜನವರಿ 3, 2023 ರಿಂದ ಪ್ರಾರಂಭವಾಗುತ್ತದೆ ಮತ್ತು ಮಾದರಿ ಸಂಗ್ರಹಣೆಯ ದಿನಾಂಕ ಡಿಸೆಂಬರ್ 5, 2022ರ ಬಳಿಕ ದ್ಯುತಿ ಚಾಂದ್ ಪಡೆದ ಎಲ್ಲಾ ಸ್ಪರ್ಧಾತ್ಮಕ ಫಲಿತಾಂಶಗಳನ್ನು ಅನರ್ಹಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಆಕೆ ಪಡೆದ ಪದಕಗಳು ಅಂಕಗಳು ಮತ್ತು ಬಹುಮಾನಗಳನ್ನು ಮರಳಿಸಬೇಕಾಗುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಳೆದ ವರ್ಷ ಡಿಸೆಂಬರ್ನಲ್ಲಿ ಎರಡು ರೀತಿಯ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಮಾದರಿಯಲ್ಲಿ ವರ್ಲ್ಡ್ ಆ್ಯಂಟಿ ಡೋಪಿಂಗ್ ಅಜೆನ್ಸಿ(WADA) ನಿಷೇಧಿಸಿರುವ "ಅದರ್ ಅನಾಬೊಲಿಕ್ ಏಜೆಂಟ್ಸ್/SARMS ಅಂಶಗಳು ಪತ್ತೆಯಾಗಿದೆ. ಡಿಸೆಂಬರ್ 5 ಮತ್ತು ಡಿಸೆಂಬರ್ 26ರಂದು ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಎರಡು ಬಾರಿಯೂ ವರದಿಯಲ್ಲಿ ಈ ಅಂಶಗಳು ಪತ್ತೆಯಾಗಿತ್ತು. SARMS ಅಥವಾ ಸೆಲೆಕ್ಟಿವ್ ಆಂಡ್ರೋಜನ್ ರಿಸೆಪ್ಟರ್ ಮಾಡ್ಯುಲೇಟರ್ಗಳು ಸ್ಟಿರಾಯ್ಡ್ ರಹಿತವಾಗಿದ್ದು ಆಸ್ಟಿಯೊಪೊರೋಸಿಸ್, ರಕ್ತಹೀನತೆ ರೋಗಿಗಳಲ್ಲಿ ಮತ್ತು ಗಾಯವನ್ನು ಗುಣಪಡಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ.
ಇನ್ನು ಈ ಬೆಳವಣಿಯ ಬಳಿಕ ದ್ಯುತಿ ಚಾಂದ್ ಪರ ವಕೀಲರಾದ ಪಾರ್ಥ ಗೋಸ್ವಾಮಿ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ. ಆಕೆ ತನ್ನ ವೃತ್ತಿಪರ ವೃತ್ತಿಜೀವನದುದ್ದಕ್ಕೂ ಪರಿಶುದ್ಧವಾದ ಕ್ರೀಡಾಪಟುವಾಗಿದ್ದಾರೆ. ಇದು "ಉದ್ದೇಶಪೂರ್ವಕವಲ್ಲದ ಸೇವನೆ" ಎಂದು ಮಾಹಿತಿ ನೀಡಿದ್ದಾರೆ. ದ್ಯುತಿ ಚಾಂಚ್ 2018ರ ಜಕಾರ್ತಾ ಏಷ್ಯನ್ ಗೇಮ್ಸ್ನಲ್ಲಿ 100 ಮತ್ತು 200 ಮೀ ಓಟದಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು ಮತ್ತು 100 ಮೀ (2021) ನಲ್ಲಿ 11.17 ಸೆಕೆಂಡ್ನ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.
ದ್ಯುತಿ ಅವರು "ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿಯ (NADA)ಆರ್ಟಿಕಲ್ 2.1 ಮತ್ತು 2.2 ಅನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಅವರು ತಾತ್ಕಾಲಿಕ ಅಮಾನತು ದಿನಾಂಕ ಜನವರಿ 3 ರಿಂದ ಆರಂಭವಾಗಿ NADA ADR 2021ರ ಆರ್ಟಿಕಲ್ 10.2.1.1 ರ ಪ್ರಕಾರ ನಾಲ್ಕು ವರ್ಷಗಳ ಅನರ್ಹತೆಗೆ ಒಳಗಾಗಿದ್ದಾರೆ". ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ದ್ಯುತಿ ಚಾಂದ್ಗೆ 21 ದಿನಗಳ ಕಾಲಾವಕಾಶವಿದೆ.
"ನಮ್ಮ ಪ್ರಕಾರ ಇದು ಉದ್ದೇಶಪೂರ್ವಕವಲ್ಲದೆ ನಿಷೇಧಿತ ವಸ್ತುವಿನ ಸೇವನೆ ಎಂಬುದು ಸ್ಪಷ್ಟ. ದೇಹದಲ್ಲಿ ಪತ್ತೆಯಾಗಿರುವ ಅಂಶಗಳಿಂದ ಇದು ಉದ್ದೇಶಪೂರ್ವಕವಲ್ಲದೆ ಸೇವಿಸಿರುವುದು ಎನ್ನುವುದು ಸ್ಪಷ್ಟವಾಗುತ್ತದೆ. ಕ್ರೀಡಾಕ್ಷೇತ್ರದಲ್ಲಿ ಲಾಭಗಳಿಸಲು ಅದನ್ನು ಬಳಸಿರಲಿಲ್ಲ"ಎಂದಿದ್ದಾರೆ ದ್ಯುತಿ ಚಾಂದ್ ಪರ ವಕೀಲ. ಮುಂದುವರಿದು ಅವರು "ನಾವು ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ನಡೆಸುತ್ತಿದ್ದೇವೆ. ನಮ್ಮ ವಿಚಾರಗಳನ್ನು ಮೇಲ್ಮನವಿ ಸಮಿತಿಗೆ ಮನವರಿಕೆ ಮಾಡಲು ಸಾಧ್ಯವಾಗುತ್ತದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ" ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.