ಸಚಿನ್ ತೆಂಡೂಲ್ಕರ್, ಸುಮಾರು ಎರಡೂವರೆ ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನಾಳಿದ ಚಕ್ರಾಧಿಪತಿ. ದಾಖಲೆಗಳ ಸರದಾರನಾಗಿರುವ ಸಚಿನ್ ತೆಂಡೂಲ್ಕರ್ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಕ್ರಿಕೆಟ್ ದೇವರೆಂದೇ ಜಗತ್ಪ್ರಸಿದ್ದರಾಗಿದ್ದಾರೆ.
ಇನ್ನು ಸಿದ್ದರಾಮಯ್ಯ, ಕರ್ನಾಟಕ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿಗಳಲ್ಲೊಬ್ಬರು. ಕರ್ನಾಟಕ ರಾಜಕೀಯ ಮತ್ತು ಆಡಳಿತದಲ್ಲಿ ಹೆಚ್ಚಿನ ಅನುಭವವುಳ್ಳವರು. ಕರ್ನಾಟಕ ರಾಜ್ಯದ ಹಾಲಿ ಮುಖ್ಯಮಂತ್ರಿ ಕೂಡ ಆಗಿದ್ದಾರೆ.
ಸ್ವತಃ ಕ್ರಿಕೆಟ್ ಅಭಿಮಾನಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರು ಗುರುವಾರ, ಜನವರಿ 4ರಂದು ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯ ನಡೆದಾಗ ಖುದ್ದು ಹಾಜರಾಗಿ ಪಂದ್ಯ ವೀಕ್ಷಿಸಲು ಆಸೆ ಪಡುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗಿರುವುದು ಬೆಂಗಳೂರಿನಲ್ಲಿಯೂ ಅಲ್ಲ, ಮುಂಬೈನಲ್ಲಿಯೂ ಅಲ್ಲ. ಇಬ್ಬರು ಪರಸ್ಪರ ಭೇಟಿಯಾಗಿರುವುದು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ.
ರಾಜಕೀಯ ಕಾರ್ಯದ ಸಲುವಾಗಿ ಸಿಎಂ ಸಿದ್ಧರಾಮಯ್ಯ ಅವರು ತಮ್ಮ ಆಪ್ತರೊಂದಿಗೆ ನವದೆಹಲಿಗೆ ಪ್ರಯಾಣ ಮಾಡಿದ್ದಾರೆ. ಈ ವೇಳೆ ಭಾರತೀಯ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ನವದೆಹಲಿ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಸಿಕ್ಕಿದ್ದಾರೆ.
ಈ ವೇಳೆ ಸಚಿನ್ ತೆಂಡೂಲ್ಕರ್ ಅವರ ಕೈ ಕುಲುಕಿರುವ ಸಿಎಂ ಸಿದ್ಧರಾಮಯ್ಯ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಅಷ್ಟೇ ಆತ್ಮೀಯತೆಯಿಂದ ಕರ್ನಾಟಕ ಸಿಎಂ ಸಿದ್ಧರಾಮಯ್ಯ ಅವರ ಕೈಕುಲುಕಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, "ಜಾಗತಿಕ ಕ್ರಿಕೆಟ್ನ ದಂತಕಥೆ, ಲಿಟ್ಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಎದುರಾದ ವೇಳೆ ಕುಶಲೋಪರಿ ವಿಚಾರಿಸಿ, ಪ್ರೀತಿಯಿಂದ ಬೀಳ್ಕೊಟ್ಟೆ. ಸಚಿನ್ ತೆಂಡೂಲ್ಕರ್ ನನ್ನ ಅಚ್ಚುಮೆಚ್ಚಿನ ಆಟಗಾರ, ದಶಕಗಳ ಕಾಲ ತೆಂಡೂಲ್ಕರ್ ಅವರ ಆಟವನ್ನು ಆಸ್ವಾದಿಸಿದ್ದೇನೆ," ಎಂದು ಬರೆದುಕೊಂಡಿದ್ದರೆ.
ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿ ಸಭೆ ನಡೆದಿದೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಲು ತೆರಳಿದ್ದರು. ಇದೇ ವೇಳೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದರು.