ಗುರುವಾರ, ಜನವರಿ 25ರಂದು ಕೇಂದ್ರ ಸರ್ಕಾರವು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ವರ್ಷದ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ 5 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ.
ಪ್ರಶಸ್ತಿ ಪುರಸ್ಕೃತರಲ್ಲಿ 30 ಮಹಿಳೆಯರು ಮತ್ತು ಪಟ್ಟಿಯು ವಿದೇಶಿ ಅನಿವಾಸಿ ಭಾರತೀಯ (ಎನ್ಆರ್ಐ), ಭಾರತೀಯ ಮೂಲದ ವ್ಯಕ್ತಿ (ಪಿಐಒ), ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಮತ್ತು ಒಂಬತ್ತು ಮರಣೋತ್ತರ ಪ್ರಶಸ್ತಿ ಪುರಸ್ಕೃತರ ವಿಭಾಗಗಳಿಂದ 8 ವ್ಯಕ್ತಿಗಳನ್ನು ಒಳಗೊಂಡಿದೆ.

ಇನ್ನು 2024ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಒಟ್ಟು ಏಳು ಕ್ರೀಡಾಪಟುಗಳಲ್ಲಿ ರೋಹನ್ ಬೋಪಣ್ಣ ಹೆಸರು ಸೇರಿದೆ. ಮೊದಲ ಬಾರಿಗೆ ಟೆನ್ನಿಸ್ನಲ್ಲಿ ನಂ.1 ಶ್ರೇಯಾಂಕ ಪಡೆದ ಅತ್ಯಂತ ಹಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇದೇ ವೇಳೆ ಕರ್ನಾಟಕ ಮೂಲದ ಸ್ಕ್ವಾಷ್ ತಾರೆ ಜೋಷ್ನಾ ಚಿನಪ್ಪ ಮತ್ತು ಮಾಜಿ ಆರ್ಚರಿ ಕೋಚ್ ಪೂರ್ಣಿಮಾ ಮಹತೋ ಕೂಡ ಪದ್ಮಶ್ರೀ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಭಾರತ ರತ್ನ, ಪದ್ಮ ವಿಭೂಷಣ ಮತ್ತು ಪದ್ಮಭೂಷಣದ ನಂತರ ಪದ್ಮಶ್ರೀ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾಗಿದೆ.
ರೋಹನ್ ಬೋಪಣ್ಣ ಕಳೆದ ವರ್ಷ ಟೆನ್ನಿಸ್ ಕ್ರೀಡೆಯಲ್ಲಿ ಅತ್ಯಂತ ಯಶಸ್ವಿ ಋತುವನ್ನು ಅನುಭವಿಸಿದರು. 43 ವರ್ಷದ ಕನ್ನಡಿಗ ಹೊಸ ವರ್ಷದಲ್ಲಿ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ತಮ್ಮ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಸದ್ಯ ನಡೆಯುತ್ತಿರುವ 2024ರ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಫೈನಲ್ನ ಫೈನಲ್ಗೆ ತಲುಪಿದ್ದಾರೆ.

2017ರಲ್ಲಿ ರೋಹನ್ ಬೋಪಣ್ಣ ಅವರು ಫ್ರೆಂಚ್ ಓಪನ್ನಲ್ಲಿ ಗೇಬ್ರಿಯೆಲಾ ದಬ್ರೊವ್ಸ್ಕಿ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ನಾಲ್ಕನೇ ಭಾರತೀಯ ಟೆನ್ನಿಸ್ ಆಟಗಾರನಾದರು.
ಮತ್ತೊಂದೆಡೆ, ಜೋಷ್ನಾ ಚಿನಪ್ಪ ಅವರು ಸ್ಕ್ವಾಷ್ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ. 37 ವರ್ಷದ ಸ್ಕ್ವಾಷ್ ತಾರೆ 2022ರಲ್ಲಿ ಮಹಿಳಾ ಡಬಲ್ಸ್ ವಿಶ್ವ ಚಾಂಪಿಯನ್ ಕಿರೀಟವನ್ನು ಪಡೆದರು. 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಚತುರ್ವಾರ್ಷಿಕ ಈವೆಂಟ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನವನ್ನು ಸಹ ಗೆದ್ದಿದ್ದಾರೆ. ಇದು ಆ ಕ್ರೀಡೆಯಲ್ಲಿ ಭಾರತದ ಮೊದಲ ಪದಕವಾಗಿತ್ತು.
ಜೋಷ್ನಾ ಚಿನಪ್ಪ ಅವರ ಪ್ರಶಸ್ತಿ ಕಿಟ್ಟಿನಲ್ಲಿ ನಾಲ್ಕು ವಿಶ್ವ ಚಾಂಪಿಯನ್ಶಿಪ್ಗಳ ಪದಕಗಳು, ಐದು ಏಷ್ಯನ್ ಗೇಮ್ಸ್ ಪದಕಗಳು ಮತ್ತು ಎರಡು ಕಾಮನ್ವೆಲ್ತ್ ಕ್ರೀಡಾಕೂಟದ ಪದಕಗಳು ಸೇರಿವೆ.

ಇನ್ನು ಮಾಜಿ ರಾಷ್ಟ್ರೀಯ ಚಾಂಪಿಯನ್ ಪೂರ್ಣಿಮಾ ಮಹತೋ ಅವರು 1994ರಲ್ಲಿ ಕೋಚಿಂಗ್ ಕಡೆಗೆ ಗಮನ ಹರಿಸಿದರು. ಭಾರತದ ಸ್ಟಾರ್ ಆರ್ಚರಿ ಪಟು ದೀಪಿಕಾ ಕುಮಾರಿ ಅವರಿಗೆ ತರಬೇತಿ ನೀಡಿದ್ದಕ್ಕಾಗಿ ಪೂರ್ಣಿಮಾ ಮಹತೋ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.
ಪೂರ್ಣಿಮಾ ಮಹತೋ ಅವರು ಭಾರತೀಯ ರಾಷ್ಟ್ರೀಯ ಬಿಲ್ಲುಗಾರಿಕೆ ತಂಡದ ಕೋಚ್ ಆಗಿ ಸುದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿದ್ದಾರೆ ಮತ್ತು ಅವರ ಕೊಡುಗೆಗಳಿಗಾಗಿ ಈ ಹಿಂದೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಉಳಿದಂತೆ ಹಾಕಿ ಮಾಜಿ ಆಟಗಾರ ಹರ್ಬಿಂದರ್ ಸಿಂಗ್, ಪ್ಯಾರಾ ಬ್ಯಾಡ್ಮಿಂಟನ್ ಕೋಚ್ ಗೌರವ್ ಖನ್ನಾ, ಪ್ಯಾರಾ ಈಜುಗಾರ ಸತೇಂದ್ರ ಸಿಂಗ್ ಲೋಹಿಯಾ ಮತ್ತು ಮಲ್ಲಕಂಬ ಅಥ್ಲೀಟ್ ಉದಯ್ ದೇಶಪಾಂಡೆ ಅವರು ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ.
ಪದ್ಮ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಭಾರತದ ರಾಷ್ಟ್ರಪತಿಗಳಿಂದ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಭಾರತದ ಸಂಸತ್ ಸಭಾಂಗಣದಲ್ಲಿ ಪ್ರದಾನ ಮಾಡಲಾಗುತ್ತದೆ.