ನವದೆಹಲಿ, ಆಗಸ್ಟ್ 18: ಕೆಲವು ವರ್ಷಗಳ ಹಿಂದೆಯಷ್ಟೆ ಡಾಬಾದಲ್ಲಿ ಕಸ ಗುಡಿಸಿ, ತೊಳೆದು ಸ್ವಚ್ಛಗೊಳಿಸುತ್ತಿದ್ದ ಸಾಮಾನ್ಯ ಹುಡುಗಿ ಇಂದು ಇಂಡೋನೇಷ್ಯಾದಲ್ಲಿ ಆರಂಭವಾಗುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆಲ್ಲಲು ವಿಮಾನ ಹತ್ತಿದ್ದಾಳೆ.
ಹೌದು, ಹಿಮಾಚಲ ಪ್ರದೇಶದ ಬಡ ಹುಡುಗಿ ಕವಿತಾ ಠಾಕೂರ್ ಏಷ್ಯನ್ ಗೇಮ್ಸ್ನಲ್ಲಿ ಆಡಲಿರುವ ಮಹಿಳಾ ಕಬಡ್ಡಿ ತಂಡದ ಪ್ರತಿಭಾನ್ವಿತ ಆಟಗಾರ್ತಿ. ಆಕೆ ಈಗಲೂ ತಮ್ಮ ತಂದೆಯ ಸಣ್ಣ ಡಾಬಾದಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಾಳೆ.
ಏಷ್ಯನ್ ಗೇಮ್ಸ್: ಶೂಟರ್ಸ್, ರಸ್ಲರ್ಸ್ ಮೇಲೆ ಹೆಚ್ಚಿನ ಪದಕ ಭರವಸೆ
ಹಿಮಾಚಲ ಪ್ರದೇಶದ ಮನಾಲಿಯಿಂದ 6 ಕಿ.ಮೀ ದೂರದ ಜಗನ್ ಸುಖ್ ಎಂಬ ಪುಟ್ಟ ಗ್ರಾಮವಿದೆ ಅದೇ ಕವಿತಾಳ ಊರು ಅಲ್ಲಿ ಆಕೆಯ ತಂದೆಯ ಸಣ್ಣ ಡಾಬಾ ಇದೆ. ಇಲ್ಲಿ ನಿತ್ಯ ಕಸ ಗುಡಿಸುವ, ತಿಂದ ತಟ್ಟೆಗಳನ್ನು ತೊಳೆಯುವ ಕೆಲಸ ಮಾಡುತ್ತಾಳೆ.
ಅಲ್ಲಿ ಕೆಸಲ ಮಾಡುತ್ತಲೇ ವಿದ್ಯಾಭ್ಯಾಸ ಕೂಡ ಮಾಡಿ, ಮೆಚ್ಚಿನ ಕಬಡ್ಡಿ ಆಡುವುದು ಕಲಿತು ಇಂದು ಅಂತರರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿದ್ದಾಳೆ ಕವಿತಾ. ತಂದೆ ಪೃಥ್ವಿ ಸಿಂಗ್, ತಾಯಿ ಕೃಷ್ಣಾ ದೇವಿ ಅವರ ಹೆಮ್ಮೆಗೆ ಕಾರಣರಾಗಿದ್ದಾರೆ.
ಏಷ್ಯನ್ ಗೇಮ್ಸ್ ಆರಂಭೋತ್ಸವ: ಸಮಯ, ನೇರಪ್ರಸಾರ, ವಿಶೇಷತೆಗಳು
2014ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕವಿತಾ ಸದಸ್ಯರಾಗಿದ್ದ ಕಬ್ಬಡ್ಡಿ ತಂಡ ಬಂಗಾರದ ಪದಕ ಗೆದ್ದಿತ್ತು. ಆ ನಂತರವಷ್ಟೆ ಅವರಿಗೆ ಬಾಡಿಗೆ ಮನೆ ಹಿಡಿಯಲು ಸಾಧ್ಯವಾಗಿತ್ತು. ಅದಕ್ಕೆ ಮುಂಚೆ ಡಾಬಾದಲ್ಲಿಯೇ ವಾಸ.
ಈ ಬಾರಿ ಸಹ ಏಷ್ಯನ್ ಕ್ರೀಡಾಕೂಟಲದಲ್ಲಿ ಚಿನ್ನ ಗೆಲ್ಲುವ ವಿಶ್ವಾಸದೊಂದಿಗೆ ಕವಿತಾ ಠಾಕೂರ್ ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ಭಾರತದ ಬಡ ಪ್ರತಿಭೆ ಅಂತರರಾಷ್ಟ್ರೀಯ ಮಣ್ಣಿನಲ್ಲಿ ಮಿನುಗಲಿದೆ ಎಂಬ ಆಶಯ ಕ್ರೀಡಾ ಪ್ರೇಮಿಗಳದ್ದು.