
ಮೈಸೂರು, ಆಗಸ್ಟ್ 31: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಕೆಪಿಎಲ್ 18ನೇ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ ಎದುರು ಬೆಂಗಳೂರು ಬ್ಲಾಸ್ಟರ್ಸ್ 6 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಮಳೆಯ ಕಾರಣ ಪಂದ್ಯವನ್ನು 18 ಓವರ್ ಗೆ ಸೀಮಿತಗೊಳಿಸಲಾಗಿತ್ತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸ್ಪಟ್ಟ ಹುಬ್ಳಿ ಟೈಗರ್ಸ್ ಎದುರಾಳಿಗೆ ಉತ್ತಮ ರನ್ ಗುರಿ ನೀಡುವಲ್ಲಿ ವಿಫಲವಾಯಿತು. 18 ಓವರ್ ಗಳಲ್ಲಿ 9 ವಿಕೆಟ್ ಕಳೆದು ಹುಬ್ಳಿ 117 ರನ್ ಪೇರಿಸಿತು. ಸಾಧಾರಣ ರನ್ ಗುರಿ ಬೆನ್ನತ್ತಿದ ಬೆಂಗಳೂರು 17.4 ಓವರ್ ಗಳಲ್ಲಿ 4 ವಿಕೆಟ್ ಕಳೆದು 119 ರನ್ ಪೇರಿಸಿ ವಿಜಯಾಚರಿಸಿತು.
ಹುಬ್ಳಿ ಪರ ಪ್ರವೀಣ್ ಡೂಬೆ ಕೊಂಚ ಉತ್ತಮ ರನ್ ಕಲೆ ಹಾಕಿದರು. ಪ್ರವೀಣ್ 48 ರನ್ ಪೇರಿಸಿ ಆನಂದ್ ಗೆ ವಿಕೆಟ್ ಒಪ್ಪಿಸಿದರು. ಬೆಂಗಳೂರು ಪರ ನಾಯಕ ರಾಬಿನ್ ಉತ್ತಪ್ಪ 31 (26), ಕೆಬಿ ಪವನ್ 29 (27), ಪವನ್ ದೇಶಪಾಂಡೆ ಅಜೇಯ 28 (19) ರನ್ ಪೇರಿಸಿದ್ದು ತಂಡಕ್ಕೆ ಗೆಲುವನ್ನು ತಂದಿತು.
6 ರನ್ನಿಗೆ 2 ವಿಕೆಟ್ ಕಬಳಿಸಿದ ಬೆಂಗಳೂರಿನ ವಿ ಕೌಶಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಪಂದ್ಯದ ಜಯದೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ ಸೆಮಿಫೈನಲ್ ಗೆ ಪ್ರವೇಶಿಸಿದೆ. ಪಾಯಿಂಟ್ ಟೇಬಲ್ ನಲ್ಲಿ ಬೆಂಗಳೂರು 9 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು, ಹುಬ್ಳಿ 7ರಿಂದ ದ್ವಿತೀಯ ಸ್ಥಾನದಲ್ಲಿದೆ.