
ಮೈಸೂರು, ಆಗಸ್ಟ್ 31: ಮೈಸೂರು ವಾರಿಯರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ನಡುವಿನ ಕೆಪಿಎಲ್ 17ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ 1 ರನ್ ರೋಚಕ ಜಯ ಸಾಧಿಸಿದೆ. ಶೋಯೇಬ್ ಮ್ಯಾನೇಜರ್ ಸಿಡಿಸಿದ ಅರ್ಧ ಶತಕ (56/24) ನೆರವಿನಿಂದ ವಾರಿಯರ್ಸ್ ನೆಲುವನ್ನಾಚರಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮೈಸೂರು 20 ಓವರ್ ಗಳಲ್ಲಿ 4 ವಿಕೆಟ್ ಕಳೆದು 201ರನ್ ಪೇರಿಸಿತ್ತು. ಎದುರಾಳಿ ನೀಡಿದ್ದ 202 ರನ್ ಗುರಿಯನ್ನು ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದು ಭರ್ತಿ 200 ರನ್ ಪೇರಿಸಲಷ್ಟೇ ಶಕ್ತವಾಯಿತು.
ಮೈಸೂರು ವಾರಿಯರ್ಸ್ ಪರ ಶೋಯೇಬ್ ಬಿಟ್ಟರೆ ಆರಂಭಿಕ ಆಟಗಾರರಾದ ಅರ್ಜುನ್ ಹೊಯ್ಸಳ 37, ರಾಜು ಭಟ್ಕಳ್ 31 ರನ್ ಸೇರಿಸಿ ತಂಡಕ್ಕೆ ಆರಂಭಿಕ ರನ್ ಬೆಂಬಲ ನೀಡಿದರು. ಅನಂತರ ಅಮಿತ್ ವರ್ಮಾ ಅವರ ಅಜೇಯ 43 (22) ರನ್ ಕೂಡ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಬೆಳಗಾವಿ ಪರ ಆರಂಭಿಕ ಆಟಗಾರ ದಿಕ್ಷಾಂಶು ನೇಗಿ 60 (33) ರನ್ ಭರ್ಜರಿ ಕೊಡುಗೆ ನೀಡಿದರಾದರೂ ತಂಡಕ್ಕೆ ಗೆಲುವನ್ನು ತಂದುಕೊಳ್ಳಲಾಗಲಿಲ್ಲ. ಸ್ಟ್ಯಾಲಿನ್ ಹೂವರ್ 24, ಎಂ ನಿಧೀಶ್ 44 ರನ್ ಕೊಡುಗೆ ವಾರಿಯರ್ಸ್ ಗೆ ತೀವ್ರ ಪೈಪೋಟಿ ನೀಡುವಲ್ಲಿ ನೆರವಾಯ್ತು. ಮೈಸೂರು ವಾರಿಯರ್ಸ್ ನ ಶೋಯೇಬ್ ಪಂದ್ಯಶ್ರೇಷ್ಠರೆನಿಸಿದರು. ಈ ಪಂದ್ಯದ ಬಳಿಕ ಮೈಸೂರು ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಪಾಯಿಂಟ್ ಟೇಬಲ್ ನಲ್ಲಿ 3ನೇ ಸ್ಥಾನದಲ್ಲಿದೆ.