
ಮೈಸೂರು, ಆಗಸ್ಟ್ 28: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ 15ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಶಿವಮೊಗ್ಗ ಲಯನ್ಸ್ ವಿರುದ್ಧ 6 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದೊಂದಿಗೆ ಪಾಯಿಂಟ್ ಟೇಬಲ್ ನಲ್ಲಿ ಮೈಸೂರು 4 ಪಾಯಿಂಟ್ ಗಳಿಂದ 3ನೇ ಸ್ಥಾನದಲ್ಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಶಿವಮೊಗ್ಗ ಲಯನ್ಸ್ 20 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 146 ಸಾಧಾರಣ ರನ್ ಪೇರಿಸಿ ಎದುರಾಳಿಗೆ 147 ರನ್ ಗುರಿ ನೀಡಿತ್ತು. ಸುಲಭ ರನ್ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ 17.2 ಓವರ್ ಗಳಲ್ಲಿ 4 ವಿಕೆಟ್ ಕಳೆದು 147 ರನ್ ಪೇರಿಸುವುದರೊಂದಿಗೆ ಗೆಲುವನ್ನಾಚರಿಸಿತು.
ಶಿವಮೊಗ್ಗ ಇನ್ನಿಂಗ್ಸ್ ವೇಳೆ ಆರಂಭಿಕರಾದ ಬಿಆರ್ ಶರತ್ 46 (33), ರಂಗ್ಸೇನ್ ಜೋನಾಥನ್ 29 (26), ಆದಿತ್ಯ ಸೋಮಣ್ಣ ಅಜೇಯ 39 (20) ರನ್ ನೀಡಿ ತಂಡವನ್ನು ಬೆಂಬಲಿಸಿದರು. ಆದರೆ ಬಲಿಷ್ಟ ಮೈಸೂರು ತಂಡಕ್ಕೆ 147 ರನ್ ಗುರಿ ತಲುಪೋದು ಅಂಥದ್ದೇನೂ ಸವಾಲೆನಿಸಲಿಲ್ಲ.
ವಾರಿಯರ್ಸ್ ಪರ ಆರಂಭಿಕರಾದ ಅರ್ಜುನ್ ಹೊಯ್ಸಳ 40 (28), ರಾಜು ಭಟ್ಕಳ್ 59 (45) ರನ್ ನೊಂದಿಗೆ ಉತ್ತಮ ರನ್ ಕಲೆ ಹಾಕಿದರು. ಶೋಯೇಬ್ ಮ್ಯಾನೇಜರ್ ಕೂಡ ಅಜೇಯ 25 ರನ್ ಸೇರಿಸಿದ್ದು ತಂಡದ ಗೆಲುವನ್ನು ಬರೆಯಿತು. ಮೈಸೂರು ತಂಡದ ರಾಜು ಭಟ್ಕಳ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.