2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತೀಯರ ಪಾಲಿಗೆ ಕ್ರಿಕೆಟ್ ಹೀರೋ ಆಗಿದ್ದ ವೇಗಿ ಮೊಹಮ್ಮದ್ ಶಮಿ, ಸದ್ಯ ಕ್ರಿಕೆಟ್ನಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಮೈದಾನದ ಹೊರಗೆ ವ್ಯಕ್ತಿಯ ಜೀವವೊಂದನ್ನು ಕಾಪಾಡುವ ಮೂಲಕ ಹೀರೋ ಆಗಿದ್ದಾರೆ.
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಉತ್ತರಾಖಂಡದ ನೈನಿತಾಲ್ನಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿದ ವ್ಯಕ್ತಿಯೊಬ್ಬರ ಪಾಲಿಗೆ ಜೀವ ರಕ್ಷಕನಾಗಿ, ರಿಯಲ್ ಹೀರೋ ಆಗಿದ್ದಾರೆ. ಅಪಘಾತಕ್ಕೀಡಾದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

"ಅವರು ತುಂಬಾ ಅದೃಷ್ಟಶಾಲಿ, ದೇವರು ಅವನಿಗೆ 2ನೇ ಜೀವನವನ್ನು ಕೊಟ್ಟಿದ್ದಾನೆ. ಅವರ ಕಾರು ನೈನಿತಾಲ್ ಬಳಿಯ ಬೆಟ್ಟದ ರಸ್ತೆಯಿಂದ ನನ್ನ ಕಾರಿನ ಮುಂದೆ ಬಿದ್ದಿತು. ನಾವು ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದಿದ್ದೇವೆ," ಎಂದು ಮೊಹಮ್ಮದ್ ಶಮಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ನೈನಿತಾಲ್ನಲ್ಲಿ ರಸ್ತೆ ಅಪಘಾತ!
ಗಂಭೀರವಾದ ಘಟನೆ ನಡೆಯದಂತೆ ತಡೆಯಲು ಅವರಯ ಮತ್ತು ಅವರ ಜೊತೆಗಿದ್ದ ಕೆಲವರು ಜೊತೆಗೂಡಿ ಬೆಟ್ಟದಿಂದ ಕೆಳಗಿಳಿದ ಕಾರಿನಿಂದ ವ್ಯಕ್ತಿಯನ್ನು ಕಾಪಾಡಿದ್ದೇವೆ ಎಂದು ಮೊಹಮ್ಮದ್ ಶಮಿ ಹೇಳಿಕೊಂಡಿದ್ದಾರೆ.
ರಸ್ತೆ ಅಪಘಾತ ಘಟನೆ ನಡೆದಾಗ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕೂಡ ನೈನಿತಾಲ್ನಲ್ಲಿದ್ದರು. ಶಮಿ ಅವರ ವಾಹನದ ಮುಂದೆಯೇ ವ್ಯಕ್ತಿಯ ಕಾರು ಬೆಟ್ಟದಿಂದ ಬಿದ್ದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶಮಿ ಅವರ ಸಮಯ ಪ್ರಜ್ಞೆಯಿಂದ ವ್ಯಕ್ತಿಯ ಪ್ರಾಣ ಉಳಿದಿದೆ.
ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಬೌಲರ್ ಆಗಿ ಮುಗಿಸಿದರು. ಆಡಿದ ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್ಗಳನ್ನು ಪಡೆದರು.

ಆರಂಭಿಕ ಆಡುವ 11ರ ಬಳಗದಲ್ಲಿ ಶಾರ್ದೂಲ್ ಠಾಕೂರ್ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಆದ್ಯತೆ ನೀಡುವುದರೊಂದಿಗೆ ಲೀಗ್ ಹಂತದಲ್ಲಿ ಭಾರತದ ಆರಂಭಿಕ ಪಂದ್ಯಗಳನ್ನು ಮೊಹಮ್ಮದ್ ಶಮಿ ತಪ್ಪಿಸಿಕೊಂಡರು.
ಆದಾಗ್ಯೂ, ಬಾಂಗ್ಲಾದೇಶದ ವಿರುದ್ಧ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ, ಮೊಹಮ್ಮದ್ ಶಮಿ ಆಡುವ ಬಳಗಕ್ಕೆ ಪ್ರವೇಶ ಪಡೆಯುವ ಅವಕಾಶವನ್ನು ಪಡೆದರು.
ಬಲಗೈ ವೇಗಿ ಮೊಹಮ್ಮದ್ ಶಮಿ ತನ್ನ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು, ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಪಂದ್ಯದಲ್ಲೇ ಐದು ವಿಕೆಟ್ ಕಬಳಿಸಿದರು.
ಮೊಹಮ್ಮದ್ ಶಮಿ ಪಂದ್ಯಾವಳಿಯುದ್ದಕ್ಕೂ ತಮ್ಮ ಉನ್ನತ ಪ್ರದರ್ಶನ ಮಟ್ಟವನ್ನು ಉಳಿಸಿಕೊಂಡರು. ಹಲವಾರು ದಾಖಲೆಗಳನ್ನು ಮುರಿದು, ಹೊಸ ದಾಖಲೆ ನಿರ್ಮಿಸಿದರು. ಫೈನಲ್ನಲ್ಲಿ ಡೇವಿಡ್ ವಾರ್ನರ್ ಅವರ ಏಕೈಕ ವಿಕೆಟ್ ಪಡೆಯಲು ಯಶಸ್ವಿಯಾದರು.