ಛಲ ಬಿಡದೆ ಸಾಧನೆಯ ಮೆಟ್ಟಿಲೇರಿದ ಉಮೇಶ್
ಕುಸ್ತಿಯಲ್ಲಿ ದೊಡ್ಡ ಸಾಧನೆ ಮಾಡಬೇಕೆಂದು ಕನಸುಕಟ್ಟಿಕೊಂಡಿದ್ದ ಉಮೇಶ್ ಜಮೇದಾರ್ ಕಳೆದ 13 ವರ್ಷಗಳಿಂದ ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ ದಾವಣಗೆರೆಯ ಕ್ರೀಡಾ ಹಾಸ್ಟೆಲ್ನಲ್ಲಿದ್ದುಕೊಂಡು ತರಬೇತಿ ಪಡೆಯುತ್ತಿರುವ ಯುವಕ ಉಮೇಶ್ ಜಮಾದಾರ್ ಇಲ್ಲಿನ ಕುಸ್ತಿ ಕೋಚ್ ಶಿವಾನಂದ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ
ಇತ್ತೀಚೆಗಷ್ಟೇ ಥೈಲ್ಯಾಂಡ್ ನಲ್ಲಿ ನಡೆದ ಸೌತ್ ಏಷ್ಯನ್ ಇಂಟರ್ನ್ಯಾಷನಲ್ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಉಮೇಶ್ ಜಮಾದಾರ್ ಭಾರತ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ. 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಉಮೇಶ್ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಮಲೇಷಿಯಾದ ರೆಸ್ಲರ್ ವಿರುದ್ಧ ಭರ್ಜರಿ 10-0 ಅಂತರದಿಂದ ಗೆದ್ದು ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಉಮೇಶ್ ಮಲೇಷಿಯಾ, ಥೈಲ್ಯಾಂಡ್, ಇಂಡೋನೇಷ್ಯಾ, ಸಿಂಗಾಪುರ್, ನೇಪಾಳ್ ದೇಶದ ಕುಸ್ತಿಪಟುಗಳನ್ನು ಮಣಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲಿಯೂ ಉಮೇಶ್ ಸಾಧನೆ
ಬಡತನದಲ್ಲಿ ಅರಳಿದ ಈ ಕ್ರೀಡಾ ಪ್ರತಿಭೆ ಉಮೇಶ್ ಕಷ್ಟಪಟ್ಟು ಸಾಧನೆ ಮಾಡಿ ತೋರಿಸಿದ್ದಾರೆ. ಈ ಹಿಂದೆ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿಯೂ ಚಿನ್ನದ ಪದಕ ಪಡೆದಿದ್ದರು. ಇದೀಗ ಥೈಲ್ಯಾಂಡ್ ನಲ್ಲಿ ಮತ್ತೊಮ್ಮೆ ಚಿನ್ನದ ಪದಕ ಗೆದ್ದು ದಾವಣಗೆರೆ ಹಾಗು ಬೀದರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಉಮೇಶ್ ಅವರ ಈ ಸಾಧನೆಗೆ ಕುಸ್ತಿ ತರಬೇತುದಾರರಾದ ಶಿವಾನಂದ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯ ಉಮೇಶ್ ಅವರು ದಾವಣಗೆರೆಯ ಕ್ರೀಡಾ ಹಾಸ್ಟೆಲ್ ನದಲ್ಲಿದ್ದುಕೊಂಡೇ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ.