
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಲಾಗಿದ್ದು ಕ್ರೀಡಾ ವಿಭಾಗದ ಅತ್ಯುನ್ನತ ಪ್ರಶಸ್ತಿಯಾದ ಮೇಜರ್ ಧ್ಯಾನ್ಚಂದ್ ಖೇಲ್ರತ್ನ ಪ್ರಶಸ್ತಿ ಹಿರಿಯ ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ಗೆ ಒಲಿದಿದೆ. ಈ ವರ್ಷ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಮಲ್ 4 ಪದಕ ಗೆದ್ದಿದ್ದು ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಅವರ ಪದಕದ ಗಳಿಗೆ 13ಕ್ಕೆ ಏರಿಕೆಯಾಗಿದೆ.
ಇನ್ನು ಈ ವರ್ಷದ ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೂಡ ಬಿಡುಗಡೆಯಾಗಿದ್ದು ಸೀಮಾ ಪುನಿಯಾ ಹಾಗೂ ಲಕ್ಷ್ಯ ಸೇನ್ ಕೂಡ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಕ್ರೀಡಾಪಟುಗಳ ಪಟ್ಟಿಯಲ್ಲಿದ್ದಾರೆ. ಲಕ್ಷ್ಯ ಸೇನ್ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.
ನವೆಂಬರ್ 30ರಂದು ರಾಷ್ಟ್ರಪತಿ ಭವನದಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿಯನ್ನು ಕ್ರೀಡಾಪಟುಗಳು ಸ್ವೀಕರಿಸಲಿದ್ದಾರೆ. ಖೇಲ್ರತ್ನ ಪ್ರಶಸ್ತಿಗೆ ಅಚಂತ ಶರತ್ ಕಮಲ್ ಮಾತ್ರವೇ ಪಾತ್ರವಾಗಿದ್ದರೆ ಅರ್ಜುನ ಪ್ರಶಸ್ತಿಗೆ 25 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್ ವಿಭಾಗದಲ್ಲಿ ಜೀವಮಾನದ ಸಾಧನೆಗಾಗಿ ನೀಡುವ ಧ್ಯಾನ್ಚಂದ್ ಪ್ರಶಸ್ತಿಗ ಕನ್ನಡತಿ ಅಶ್ವಿನಿ ಅಕ್ಕುಂಜಿ ಸೇರಿದಂತೆ ಧರಂವೀರ್ ಸಿಂಗ್ (ಹಾಕಿ), ಬಿ ಸಿ ಸುರೇಶ್ (ಕಬಡ್ಡಿ) ಮತ್ತು ನಿರ್ ಬಹದ್ದೂರ್ ಗುರುಂಗ್ (ಪ್ಯಾರಾ ಅಥ್ಲೆಟಿಕ್ಸ್) ಭಾಜನವಾಗಿದ್ದಾರೆ.
ಇನ್ನು ದ್ರೋಣಾಚಾರ್ಯ ಪ್ರಶಸ್ತಿಯನ್ನು ಎರಡು ವಿಭಾಗಗಳಲ್ಲಿ ಘೋಷಣೆ ಮಾಡಲಾಗಿದ್ದು ಸಾಮಾನ್ಯ ವಿಭಾಗದಲ್ಲಿ ಜಿವಾನ್ಜೋತ್ ಸಿಂಗ್ ತೇಜಾ (ಆರ್ಚರಿ), ಮೊಹಮ್ಮದ್ ಅಲಿ ಕಮರ್ (ಬಾಕ್ಸಿಂಗ್), ಸುಮಾ ಸಿದ್ಧಾರ್ಥ್ ಶಿರೂರ್ (ಪ್ಯಾರಾ ಶೂಟಿಂಗ್) ಮತ್ತು ಸುಜೀತ್ ಮಾನ್ (ಕುಸ್ತಿ) ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡರೆ, ದಿನೇಶ್ ಜವಾಹರ್ ಲಾಡ್ (ಕ್ರಿಕೆಟ್), ಬಿಮಲ್ ಪ್ರಫುಲ್ಲ ಘೋಷ್ (ಫುಟ್ಬಾಲ್) ಮತ್ತು ರಾಜ್ ಸಿಂಗ್ ಅವರು ಲೈಫ್ಟೈಮ್ ವಿಭಾಗದಲ್ಲಿ ಈ ಪ್ರಶಸ್ತಿಗೆ ಭಾಜನವಾಗಿದ್ದಾರೆ.