ಜುಲೈ 8 ಸೋಮವಾರ, ಪ್ಯಾರಿಸ್ 2024ರ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಇಬ್ಬರು ಒಡಿಶಾ ರಾಜ್ಯದ ಕ್ರೀಡಾಪಟುಗಳಿಗೆ ಅಲ್ಲಿನ ಸರ್ಕಾರ ಪ್ರೋತ್ಸಾಹ ಧನ ಘೋಷಿಸಿದೆ.
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಕಿಶೋರ್ ಜೆನಾ ಮತ್ತು ಹಾಕಿ ಆಟಗಾರ ಅಮಿತ್ ರೋಹಿದಾಸ್ ಅವರಿಗೆ ಒಡಿಶಾ ಮುಖ್ಯಮಂತ್ರಿ ಮೋಹನ್ ಮಾಝಿ ಅವರು ತಲಾ 15 ಲಕ್ಷ ರೂಪಾಯಿ ನಗದು ಪ್ರೋತ್ಸಾಹ ಧನ ಘೋಷಿಸಿದ್ದಾರೆ.

ಅಮಿತ್ ಪ್ರಸ್ತುತ ವಿಶ್ವ ಹಾಕಿ ಕ್ರೀಡೆಯಲ್ಲಿ ಅತ್ಯುತ್ತಮ ಡಿಫೆಂಡರ್ಗಳಲ್ಲಿ ಒಬ್ಬರು. ಮಲೇಷ್ಯಾದಲ್ಲಿ ನಡೆದ 2013ರ ಸುಲ್ತಾನ್ ಅಜ್ಲಾನ್ ಷಾ ಕಪ್ ಟೂರ್ನಿಯಲ್ಲಿ ಭಾರತದ ಪರ ಅಮಿತ್ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವಾಡಿದರು.
ಇದಾದ ನಂತರ 2020 ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಚಿನ್ನದ ಪದಕ ಮತ್ತು ಬರ್ಮಿಂಗ್ಹ್ಯಾಮ್ 2022 ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಅಮಿತ್ ಪ್ರಮುಖ ಪಾತ್ರ ವಹಿಸಿದ್ದರು. 2022ರಲ್ಲಿ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿಯೂ ಅಮಿತ್ ಅವರು ಆಡಿದ ಆಟವನ್ನು ಮರೆಯುವಂತಿಲ್ಲ.

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಕಿಶೋರ್ ಜೆನಾ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರೊಂದಿಗೆ ಜಾವೆಲಿನ್ ಎಸೆತದಲ್ಲಿ ಕಿಶೋರ್ ಜೆನಾ ಭಾಗವಹಿಸಲಿದ್ದಾರೆ.
ಕಳೆದ ವರ್ಷ 2023ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಜೆನಾ ಬೆಳ್ಳಿ ಪದಕವನ್ನು ಗೆದ್ದಿದ್ದರು. ಇದೀಗ ಪ್ಯಾರಿಸ್ ಒಲಿಂಲಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ಯಾರಿಸ್ ಕ್ರೀಡಾಕೂಟವು ಜುಲೈ 26 ರಂದು ಶುಕ್ರವಾರ, ಉದ್ಘಾಟನಾ ಸಮಾರಂಭಗಳೊಂದಿಗೆ ಪ್ರಾರಂಭವಾಗಲಿದ್ದು, ಆಗಸ್ಟ್ 11ಕ್ಕೆ ತೆರೆ ಕಾಣಲಿದೆ. ಉದ್ಘಾಟನಾ ಸಮಾರಂಭವು ಪಾಂಟ್ ಡಿ ಆಸ್ಟರ್ಲಿಟ್ಜ್ ಮತ್ತು ಪಾಂಟ್ ಡಿ ಐನಾ ನಡುವಿನ ಸೀನ್ ನದಿಯಲ್ಲಿ ನಡೆಯಲಿದೆ. ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದಲ್ಲಿ ನಡೆಯುತ್ತಿಲ್ಲ.
ಜುಲೈ 26 ರಂದು ಅಧಿಕೃತ ಉದ್ಘಾಟನಾ ಸಮಾರಂಭಕ್ಕೂ ಮೊದಲು (24 ಜುಲೈ) ಪ್ರೇಕ್ಷಕರು ಫುಟ್ಬಾಲ್, ರಗ್ಬಿ ಸೆವೆನ್ಸ್, ಬಿಲ್ಲುಗಾರಿಕೆ ಮತ್ತು ಹ್ಯಾಂಡ್ಬಾಲ್ ಕ್ರೀಡೆಗಳನ್ನು ನೋಡಿ ಆನಂದಿಸಬಹುದಾಗಿದೆ.