
ಇಡೀ ಭಾರತೀಯ ಸಿನಿಮಾ ರಂಗಕ್ಕೆ ಇಂದು ಬಹುದೊಡ್ಡ ಆಘಾತ. ಬಹುಭಾಷಾ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಕೊರೊನಾ ವೈರಸ್ಗೆ ತುತ್ತಾಗಿದ್ದ ಬಾಲಸುಬ್ರಮಣ್ಯಂ ಸುಮಾರು ಒಂದೂವರೆ ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣದ ಮಧ್ಯೆ ಹೋರಾಟವನ್ನು ನಡೆಸಿದ್ದರು. ಕೊರೊನಾ ವೈರಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಎಸ್ಪಿ ಬಾಲಸುಬ್ರಮಣ್ಯಂಗೆ ಸಾವು ಗೆಲ್ಲಲು ಸಾಧ್ಯವಾಗಲಿಲ್ಲ.
ಬಾಲಸುಬ್ರಮಣ್ಯಂ ಅಗಲಿಕೆ ಸಿನಿಮಾ ಹಾಗೂ ಸಂಗೀತ ಪ್ರಿಯರು ಶೋಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಕ್ರೀಡಾಲೋಕದ ಅನೇಕ ಪ್ರಮುಖರು ಅಗಲಿದ ದಿಗ್ಗಜ ಗಾಯಕನಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ಕ್ರಿಕೆಟಿಗ ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿ ಎಸ್ಪಿಬಿ ಮನೆಗೆ ತೆರಳಿದ್ದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಇನ್ನೊಂದು ನಿಮ್ಮ ಮನೆಗೆ ಆಗಮಿಸಿ ನಿಮ್ಮ ಬಾಯಿಂದ ನನ್ನ ನೆಚ್ಚಿನ ಹಾಡು ಕೇಳಬೇಕೆಂಬ ಬಯಕೆ ಹಾಗೆಯೇ ಉಳಿದುಕೊಳ್ಳಲಿದೆ ಎಂದು ನೋವಿನ ನುಡಿಗಳೊಂದಿಗೆ ಸಂತಾಪ ಸಲ್ಲಿಸಿದ್ದಾರೆ.
ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು "ಎಸ್ಪಿಬಿ ಸರ್ ಅಗಲಿಕೆ ಸುದ್ದಿ ಕೇಳಿ ಆಘಾತವಾಗಿದೆ. ಭಾರತೀಯ ಸಿನಿಮಾ ರಂಗದ ದಿಗ್ಗಜರು ಅವರು. ಅವರ ಹಾಡುಗಳು ಯಾವಾಗಲೂ ಶಾಶ್ವತವಾಗಿರುತ್ತದೆ. ಅವರೊಂದಿಗನ ಸ್ನೇಹ, ಕ್ರಿಕೆಟ್ ಮೇಲೆ ಅವರಿಗಿದ್ದ ಪ್ರೀತಿ ಚೆನ್ನೈನಲ್ಲಿ ಅವರೊಂದಿಗಿನ ಭೇಟಿ ಯಾವಾಗಲೂ ಸ್ಮರಣೆಯಲ್ಲಿರುತ್ತದೆ. ಸುಧಾಕರ್, ಶೈಲಜಾ, ಚರಣ್ ಹಾಗೂ ಅವರ ಇತರೆ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು" ಎಂದು ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಭಾರತದ ಇನ್ನೋರ್ವ ಖ್ಯಾತ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಕೂಡ ಎಸ್ಪಿಪಿ ಅಗಲಿಕೆಗೆ ಆಘಾತವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ಟ್ವಿಟ್ ಮಾಡಿ ಎಸ್ಪಿ ಬಾಲಸುಬ್ರಮಣ್ಯಂ ಅವರ ಸಾವಿಗೆ ಶೋಕವನ್ನು ವ್ಯಕ್ತಪಡಿಸಿದ್ದಾರೆ.