
ಭಾರತ ಕ್ರಿಕೆಟ್ ತಂಡದ ಅನುಭವಿ ವೇಗಿ ಉಮೇಶ್ ಯಾದವ್ ಅವರು ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಪ್ಲಾಟ್ ಖರೀದಿಸುವ ನೆಪದಲ್ಲಿ ಅವರ ಆಪ್ತ ಸ್ನೇಹಿತ ಕಂ ಮ್ಯಾನೇಜರ್ 44 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಾಗಪುರದ ನಿವಾಸಿ ಉಮೇಶ್ ಯಾದವ್ ನೀಡಿದ ದೂರಿನ ಮೇರೆಗೆ ಆಪ್ತ ಸ್ನೇಹಿತ ಶೈಲೇಶ್ ಠಾಕ್ರೆ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದು ನಾಗ್ಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಮೇಶ್ ಯಾದವ್ ಸ್ನೇಹಿತ ಶೈಲೇಶ್ ಠಾಕ್ರೆ (37 ವರ್ಷ) ಕೊರಾಡಿ ನಿವಾಸಿಯಾಗಿದ್ದು, ಇನ್ನೂ ಯಾವುದೇ ಬಂಧನವಾಗಿಲ್ಲ ಎಂದು ತಿಳಿದುಬಂದಿದೆ.
2014ರಲ್ಲಿ ಉಮೇಶ್ ಯಾದವ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಅದೇ ವರ್ಷ ಜುಲೈ 15ರಂದು ಉಮೇಶ್ ಯಾದವ್ ಅವರು ನಿರುದ್ಯೋಗಿಯಾಗಿದ್ದ ತಮ್ಮ ಸ್ನೇಹಿತ ಶೈಲೇಶ್ ಠಾಕ್ರೆ ಅವರನ್ನು ತಮ್ಮ ಮ್ಯಾನೇಜರ್ ಆಗಿ ನೇಮಿಸಿಕೊಂಡರು ಎಂದು ಎಫ್ಐಆರ್ ಉಲ್ಲೇಖಿಸಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ಶೈಲೇಶ್ ಠಾಕ್ರೆ ಅವರು ಸ್ನೇಹಿತರಾಗಿದ್ದರಿಂದ ಉಮೇಶ್ ಯಾದವ್ ನಂಬಿಕೆ ಇಟ್ಟಿದ್ದರು. ತದನಂತರ ಉಮೇಶ್ ಯಾದವ್ ಅವರ ಎಲ್ಲಾ ಹಣಕಾಸು ವ್ಯವಹಾರಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ಶೈಲೇಶ್ ಠಾಕ್ರೆ ಅವರು ಉಮೇಶ್ ಯಾದವ್ ಅವರ ಬ್ಯಾಂಕ್ ಖಾತೆ, ಆದಾಯ ತೆರಿಗೆ ಮತ್ತು ಇತರ ಹಣಕಾಸು ಕಾರ್ಯಗಳನ್ನು ನಿರ್ವಹಿಸುತ್ತಿದ್ದರು," ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

"ಉಮೇಶ್ ಯಾದವ್ ನಾಗ್ಪುರದಲ್ಲಿ ಭೂಮಿಯನ್ನು ಖರೀದಿಸಲು ಹುಡುಕುತ್ತಿರುವುದಾಗಿ ಶೈಲೇಶ್ ಠಾಕ್ರೆ ಬಳಿ ಹೇಳಿಕೊಂಡಿದ್ದಾರೆ. ಆಗ ಠಾಕ್ರೆ ಬಂಜರು ಪ್ರದೇಶದಲ್ಲಿ ಪ್ಲಾಟ್ ಇದೆ, ಉಮೇಶ್ ಯಾದವ್ಗೆ ಅದನ್ನು 44 ಲಕ್ಷ ರೂ.ಗೆ ಖರೀದಿಸಿ ಕೊಡುವುದಾಗಿ ಹೇಳಿದ್ದಾರೆ. ಆಗ ಉಮೇಶ್ ಯಾದವ್ ಅವರು ತಕ್ಷಣ ಶೈಲೇಶ್ ಠಾಕ್ರೆ ಅವರ ಬ್ಯಾಂಕ್ ಖಾತೆಗೆ 44 ಲಕ್ಷ ರೂ. ಜಮಾ ಮಾಡಿದರು. ಆದರೆ, ಶೈಲೇಶ್ ಠಾಕ್ರೆ ತಮ್ಮ ಹೆಸರಿನಲ್ಲಿ ಪ್ಲಾಟ್ ಖರೀದಿಸಿದ್ದಾರೆ," ಎಂದು ಪೊಲೀಸರು ಮಾಹಿ ನೀಡಿದ್ದಾರೆ.
ಉಮೇಶ್ ಯಾದವ್ ತಮಗಾದ ವಂಚನೆಯ ಬಗ್ಗೆ ತಿಳಿದುಕೊಂಡು, ಶೈಲೇಶ್ ಠಾಕ್ರೆಗೆ ತಮ್ಮ ಹೆಸರಿಗೆ ಪ್ಲಾಟ್ ವರ್ಗಾಯಿಸಲು ಕೇಳಿದ್ದಾರೆ. ಆದರೆ, ಠಾಕ್ರೆ ನಿರಾಕರಿಸಿದ್ದು, 44 ಲಕ್ಷ ರೂ.ಗಳನ್ನೂ ಹಿಂದಿರುಗಿಸಲು ನಿರಾಕರಿಸಿದರು ಎಂದು ಅಧಿಕಾರಿಗಳು ಹೇಳಿದರು.
"ನಂತರ ಉಮೇಶ್ ಯಾದವ್ ಅವರು ಕೊರಾಡಿಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಗಾಗಿ) ಮತ್ತು 420 (ವಂಚನೆ ಮತ್ತು ಆ ಮೂಲಕ ಆಸ್ತಿ ಕಬಳಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ," ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.