ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಭಾನುವಾರ, ಆಗಸ್ಟ್ 13ರಂದು ಕುಟುಂಬ ಸಮೇತ ಆಂಧ್ರಪ್ರದೇಶದ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದರು.
ಇದೇ ಆಗಸ್ಟ್ 30ರಂದು ಆರಂಭವಾಗಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಗೆ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದೇವರ ಮೊರೆ ಹೋಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಪತ್ನಿ ರಿತಿಕಾ ಸಜ್ದೇಹ್ ಅವರು ರೋಹಿತ್ ಶರ್ಮಾ ಅವರನ್ನು ಹಿಂಬಾಲಿಸಿದರು. ಮಗಳು ಸಮೈರಾಳನ್ನು ರಿತಿಕಾ ತನ್ನ ತೋಳುಗಳಲ್ಲಿ ಎತ್ತಿಕೊಂಡು ದೇವಸ್ಥಾನದಿಂದ ಕಾರಿನ ಕಡೆಗೆ ಹೋಗುತ್ತಿರುವುದು ವೈರಲ್ ಆಗಿದೆ.
ಈ ವೇಳೆ, ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ರೋಹಿತ್ ಶರ್ಮಾರನ್ನು ನೋಡಲು ಹತ್ತಿರವಾಗಲು ಪ್ರಯತ್ನಿಸಿದಾಗ ಪೊಲೀಸರು ಭಾರತ ತಂಡದ ನಾಯಕ ಮತ್ತು ಅವರ ಕುಟುಂಬಕ್ಕೆ ಭದ್ರತೆ ನೀಡಿ ದಾರಿ ಮಾಡಿಕೊಟ್ಟರು. ಅಭಿಮಾನಿಗಳು ತಮ್ಮ ಫೋನ್ಗಳಲ್ಲಿ ಈ ಕ್ಷಣವನ್ನು ಸೆರೆಹಿಡಿದರು.
ಇನ್ನು ಭಾರತದ ಇಬ್ಬರು ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ವರ್ಷ ಭಾರತ ತಂಡಕ್ಕಾಗಿ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಸ್ವರೂಪದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
2022ರ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಟಿ20 ಸ್ವರೂಪದ ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದಾರೆ. ಇನ್ನು ಕೆಲವು ಆಟಗಾರರಾದ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಅವರಿಗೂ ಟಿ20 ಕ್ರಿಕೆಟ್ನಿಂದ ವಿಶ್ರಾಂತಿ ನೀಡಲಾಗಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ರೋಹಿತ್ ಶರ್ಮಾ ಅವರಿಗೆ ತಾವು ಮತ್ತು ವಿರಾಟ್ ಕೊಹ್ಲಿ ಟಿ20 ಪಂದ್ಯಗಳಿಂದ ಹೊರಗುಳಿದಿರುವ ಬಗ್ಗೆ ನೇರ ಪ್ರಶ್ನೆ ಕೇಳಲಾಯಿತು. ಇದಕ್ಕೆ ಭಾರತ ತಂಡದ ನಾಯಕ ರೋಹಿತ್ ವರದಿಗಾರರಿಗೆ ಸ್ಪಷ್ಟ ಉತ್ತರ ನೀಡಿದರು.
ರೋಹಿತ್ ಶರ್ಮಾ ಅವರು ತಮ್ಮ ಮತ್ತು ಇತರ ಹಿರಿಯ ಆಟಗಾರರ ಅನುಪಸ್ಥಿತಿಯನ್ನು ವಿವರಿಸಿದರು. ಕಳೆದ ವರ್ಷ ಟಿ20 ವಿಶ್ವಕಪ್ ನಿಗದಿಯಾಗಿದ್ದರಿಂದ, ಕೆಲವು ಹಿರಿಯ ಆಟಗಾರರು ಏಕದಿನ ಪಂದ್ಯ ಆಡದಿರಲು ನಿರ್ಧರಿಸಲಾಗಿತ್ತು. ಈ ವರ್ಷ ಏಕದಿನ ವಿಶ್ವಕಪ್ ಇರುವ ಕಾರಣ ಟಿ20 ಪಂದ್ಯಗಳನ್ನು ಆಡುತ್ತಿಲ್ಲ ಎಂದರು.
ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಆಡಲಿದ್ದಾರೆ. ಏಷ್ಯಾ ಕಪ್ ಪಂದ್ಯಾವಳಿಯು ಭಾರತ ತಂಡಕ್ಕೆ ಮುಂಬರುವ ಏಕದಿನ ವಿಶ್ವಕಪ್ ಅತ್ಯುತ್ತಮ ತಯಾರಿಯಾಗಲಿದೆ. ಭಾರತ ತಂಡ ಕಳೆದ 10 ವರ್ಷಗಳಲ್ಲಿ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ ಎನ್ನುವುದು ಗಮನಾರ್ಹ.