ಅದು ಒಂದು ಕಾಲವಿತ್ತು, ಭಾರತ ಕ್ರಿಕೆಟ್ ತಂಡದಲ್ಲಿ ಕನ್ನಡಿಗರು ಇಲ್ಲದೆ ಯಾವುದೇ ಮ್ಯಾಚ್ ಕೂಡ ನಡೆಯೋದಿಲ್ಲ ಅನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ನಿರ್ಮಾಣ ಆಗಿತ್ತು. ಭಾರತೀಯ ಕ್ರಿಕೆಟ್ ತಂಡದಲ್ಲಿ ಮುಕ್ಕಾಲು ಭಾಗ ಆಟಗಾರರು ಕರ್ನಾಟಕ ಮೂಲದವರೇ ಆಗಿದ್ದರು. ಭಾರತ ಕ್ರಿಕೆಟ್ ತಂಡ ದೊಡ್ಡ ಸಾಧನೆ ಮಾಡಲು ಕನ್ನಡ ನಾಡಿನ ಕ್ರಿಕೆಟ್ ಆಟಗಾರರ ಪಾಲು ಕೂಡ ದೊಡ್ಡದಾಗಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿ ಹೋಗಿದ್ದು, ಒಬ್ಬರೇ ಒಬ್ಬ ಕರ್ನಾಟಕ ಮೂಲದ ಆಟಗಾರ ಇಲ್ಲದೆ ಪ್ರಮುಖವಾದ ಕ್ರಿಕೆಟ್ ಸರಣಿ ಆಡಲು ಇದೀಗ ಟೀಂ ಇಂಡಿಯಾ ಸಜ್ಜಾಗಿದೆ!
ಇದೀಗ ಏಷ್ಯಾ ಕಪ್ಗೆ ಆಯ್ಕೆ ಆಗಿರುವ ಭಾರತ ತಂಡದಲ್ಲಿ ಸೂರ್ಯಕುಮಾರ್ ಯಾದವ್ ನಾಯಕನ ಸ್ಥಾನ ಪಡೆದಿದ್ದರೆ ಶುಭಮನ್ ಗಿಲ್ ಉಪನಾಯಕ ಪಟ್ಟ ಪಡೆದಿದ್ದಾರೆ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿರುವ ಜಿತೇಶ್ ಶರ್ಮಾ & ಸಂಜು ಸ್ಯಾಮ್ಸನ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ & ಕುಲದೀಪ್ ಯಾದವ್, ಹರ್ಷಿತ್ ರಾಣಾ ಇದೀಗ ಏಷ್ಯಾ ಕಪ್ ಆಡಲಿರುವ ಭಾರತ ತಂಡಕ್ಕೆ ಆಯ್ಕೆ ಆಗಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಕನ್ನಡ ನಾಡಿನ ಒಬ್ಬರೇ ಒಬ್ಬ ಆಟಗಾರ ಕೂಡ ಇಲ್ಲ...

ಹೌದು, ಕರ್ನಾಟಕ ರಾಜ್ಯಕ್ಕೆ ಹಲವು ವಿಚಾರಗಳಲ್ಲಿ ಪದೇ ಪದೇ ಅನ್ಯಾಯ ಆಗುತ್ತಿದೆ ಅನ್ನೋ ಭಾರಿ ಗಂಭೀರ ಆರೋಪಗಳ ನಡುವೆ ಇದೀಗ ಕ್ರಿಕೆಟ್ ಆಟದಲ್ಲೂ ಕನ್ನಡ ನಾಡಿನ ಆಟಗಾರರಿಗೆ ಅನ್ಯಾಯ ಆಗುತ್ತಿದೆಯಾ? ಎಂಬ ಚರ್ಚೆ ಶುರುವಾಗಿದೆ. ರಾಷ್ಟ್ರೀಯ & ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರದರ್ಶನ ನೀಡಿ ಗಮನ ಸೆಳೆದಿರುವ ಕರ್ನಾಟಕದ ಕ್ರಿಕೆಟ್ ಆಟಗಾರರಿಗೆ ಕೂಡ, 2025 ಏಷ್ಯಾ ಕಪ್ ಆಡಲು ಅವಕಾಶ ಸಿಕ್ಕಿಲ್ಲ ಎಂಬ ಆಕ್ರೋಶ ಮೊಳಗಿದೆ.
ಮತ್ತೊಂದು ಕಡೆ ಕನ್ನಡ ನಾಡಿನ ಹಲವು ಆಟಗಾರರು ಕಳೆದ ಕೆಲವು ತಿಂಗಳಿಂದ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಹೀಗಾಗಿ ಕರ್ನಾಟಕದ ಮೂಲಕ ಹಲವು ಆಟಗಾರರನ್ನ ಸೆಲೆಕ್ಟ್ ಮಾಡಿ, ಏಷ್ಯಾ ಕಪ್ ಆಡಲು ಕಳುಹಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಹುಸಿಯಾಗಿದ್ದು, ಈ ಸಮಯದಲ್ಲಿ ಕನ್ನಡ ಕ್ರಿಕೆಟ್ ಅಭಿಮಾನಿಗಳು ಕೂಡ ಪ್ರಸಕ್ತ ಘಟನೆಗಳ ಬಗ್ಗೆ ತೀವ್ರ ಬೇಸರ ಹೊರ ಹಾಕುತ್ತಿದ್ದಾರೆ. ಬಿಸಿಸಿಐ ಹೊಸ ಪ್ರಯೋಗಕ್ಕೆ ಕೈಹಾಕಿ, ಏಷ್ಯಾ ಕಪ್ ಆಡಲು ಟೀಂ ಇಂಡಿಯಾಗಾಗಿ ಆಟಗಾರರನ್ನ ಸೆಲೆಕ್ಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.